ಉದ್ಯೋಗಿನಿ ಯೋಜನೆ: ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ
ಚಿತ್ರದುರ್ಗ ಜುಲೈ 06: 2022-23ನೇ ಸಾಲಿಗೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ಉದ್ಯೋಗಿನಿ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಆದಾಯೋತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಆಸಕ್ತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಜುಲೈ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ನಿಗಮದಿಂದ ಸಹಾಯಧನ ಹಾಗೂ ಬ್ಯಾಂಕ್ಗಳಿಂದ ಕನಿಷ್ಠ 1.ಲಕ್ಷ, ಗರಿಷ್ಟ 3.ಲಕ್ಷ ರೂ. ಸಾಲ ಪಡೆಯಬಹುದಾಗಿದೆ. ಮುಖ್ಯ ಕ್ರಿಯಾಯೋಜನೆಯಡಿ ಜಿಲ್ಲೆಗೆ ಭೌತಿಕ ಗುರಿ 24, ಚೇತನ ಯೋಜನೆಯಡಿ 04, ಧನಶ್ರೀ ಯೋಜನೆಯಡಿ 04, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆಯಡಿ 2, ಒಟ್ಟು ಭೌತಿಕ 34 ಗುರಿ ನಿಗದಿಪಡಿಸಲಾಗಿದೆ.
ನಿಬಂಧನೆಗಳು: 18 ರಿಂದ 55 ವರ್ಷದ ಒಳಗೆ ಇರುವ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ 2,00,000 ಗಳಿಗೆ ಮೀರಿರಬಾರದು, ಇತರೆ ವರ್ಗದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ1,50,000ಗಳಿಗೆ ಮೀರಿರಬಾರದು, ಈ ಯೋಜನೆಯಡಿ ಸೌಲಭ್ಯ ಪಡೆಯಲಿಚ್ಚಿಸುವವರು ಈ ಹಿಂದೆ ಬೇರೆ ಇಲಾಖೆಗಳಲ್ಲಿ ಯಾವುದೇ ಯೋಜನೆಗಳಡಿ ಸಾಲ ಸೌಲಭ್ಯ ಪಡೆದಿರಬಾರದು, ಇಡಿಪಿ ತರಬೇತಿಯು ಕಡ್ಡಾಯವಾಗಿದ್ದು, ಸಾಲ ಮಂಜೂರಾದ ಫಲಾನುಭವಿಗಳಿಗೆ ಇಡಿಪಿ ತರಬೇತಿ ಪಡೆದ ನಂತರವೇ ಸಾಹಾಯಧನ ಬಿಡುಗಡೆ ಮಾಡಲಾಗುವುದು.
ಅರ್ಜಿ ಸಲ್ಲಿಸುವವರು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಅರ್ಜಿಗಳು ಲಭ್ಯವಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗಳಿಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಗರದ ಸ್ಟೇಡಿಯಂ ರಸ್ತೆ ಹತ್ತಿರದ ಬಾಲಭವನ ಆವರಣದ ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕರು 81050 61636ಗೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಮಾಜಿ ಸೈನಿಕರಿಗೆ ಆಪದ್ ಮಿತ್ರ ತರಬೇತಿ
ಚಿತ್ರದುರ್ಗ: ಭಾರತ ಸರ್ಕಾರದ ಆಪದ್ ಮಿತ್ರ ಯೋಜನೆಯನ್ನು ರಾಜ್ಯದ 11 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಿ ವಿಪತ್ತುಗಳು ಸಂಭವಿಸಿದಾಗ ಸಾರ್ವಜನಿಕ ಪ್ರಾಣ ಮತ್ತು ಆಸ್ತಿಯನ್ನು ರಕ್ಷಿಸಲು 12 ದಿನಗಳ ತರಬೇತಿಯನ್ನು ಜಿಲ್ಲಾವಾರು ಆಯೋಜಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಜುಲೈ 18 ರಿಂದ ಜುಲೈ 30ರವರೆಗೆ ಶಿವಮೊಗ್ಗದ ಜೆ.ಎನ್.ಸಿ.ಇ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ಮಾಜಿ ಸೈನಿಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಚೇರಿಯಲ್ಲಿ ಜುಲೈ 8ರೊಳಗೆ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಕಚೇರಿಯ 08182-220925 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.