ಉರ್ಜಿತ್ ಪಟೇಲ್ ರಾಜೀನಾಮೆ: ಹದಗೆಟ್ಟ ಸ್ಥಿತಿಗೆ 5 ಅಂಶಗಳು ಪುಷ್ಟಿ ನೀಡತ್ತೆ!
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ ನೀಡಿರುವ ವಿಷಯ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ ನೀಡಿರುವ ವಿಷಯ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ವೈಯಕ್ತಿಕ ಕಾರಣಗಳಿಂದಾಗಿ ಗವರ್ನರ್ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಉರ್ಜಿತ್ ಪಟೇಲ್ ಹೇಳಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತು ಎನ್ನುವುದು ಆರ್ಥಿಕ ತಜ್ಞರ, ವಿಶ್ಲೇಶಕರ ಅಭಿಪ್ರಾಯ. ಇದಕ್ಕೆ ಕಾರಣ ಕಳೆದ ಕೆಲ ತಿಂಗಳಿನಿಂದ ನಡೆದ ಬೆಳವಣಿಗೆ, ಕೇಂದ್ರ ಸರ್ಕಾರ ಮತ್ತು ಆರ್ಬಿಐ ನಡುವಿನ ತಿಕ್ಕಾಟ, ತೆರೆಮರೆಯ ಗುದ್ದಾಟಗಳು ಇವರ ರಾಜೀನಾಮೆಗೆ ಕಾರಣವಾಗಿರಬಹುದೆಂದು ಸೂಕ್ಷ್ಮವಾಗಿ ಗ್ರಹಿಸಬಹುದು.
ವಿರಳ್ ವಿ. ಆಚಾರ್ಯ ಖಡಕ್ ಹೇಳಿಕೆ
ಆರ್ಬಿಐ ನ ಡೆಪ್ಯುಟಿ ಗವರ್ನರ್ ವಿರಳ್ ವಿ. ಆಚಾರ್ಯ ಅವರು, ಆರ್ಬಿಐ ಸ್ವಾಯತ್ತತೆಯನ್ನು ಕೇಂದ್ರ ಸರ್ಕಾರ ಗೌರವಿಸದಿದ್ದರೆ ಹಣಕಾಸು ಮಾರುಕಟ್ಟೆ ನಷ್ಟ ಎದುರಿಸಲಿದ್ದು, ಸ್ವಾಯತ್ತತೆಗೆ ಧಕ್ಕೆಯಾಗದ ಹಾಗೇ ಸರ್ಕಾರ ನಡೆಯಬೇಕು ಎಂದು ಹೇಳಿದ್ದರು. ವಿರಳ್ ವಿ. ಆಚಾರ್ಯ ಅವರ ಈ ಹೇಳಿಕೆಗೆ ಆರ್ಬಿಐ ನೌಕರರ ಸಂಘಟನೆ ಬೆಂಬಲ ಸೂಚಿಸಿ, ಆರ್ಬಿಐ ಸಂಸ್ಥೆಯನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಬೇಕು ಎಂದು ಎಚ್ಚರಿಕೆ ನೀಡಿತ್ತು.
ಉರ್ಜಿತ್ ಪಟೇಲ್
ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರು ಕೇಂದ್ರ ಸರಕಾರದೊಂದಿಗೆ ಭಿನ್ನಾಭಿಪ್ರಾಯ ಹಾಗು ಜಟಾಪಟಿಗಳ ನಂತರ ತಮ್ಮ ಹುದ್ದೆಯಿಂದ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ, ಪಟೇಲ್ ಸರ್ಕಾರವನ್ನು ಟೀಕಿಸದೆ, ರಾಜೀನಾಮೆ ನನ್ನ ವೈಯಕ್ತಿಕ ನಿರ್ಧಾರ ಎಂದಿದ್ದಾರೆ.
ಸಿಎನ್ಬಿಸಿ ಟಿವಿ 18 ವರದಿ
ಅಕ್ಟೋಬರ್ 31 ರಂದು ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರು ರಾಜೀನಾಮೆ ನೀಡಬೇಕೆಂದು ನಿರ್ಧರಿಸುತ್ತಿದ್ದಾರೆ ಎಂದು ಸಿಎನ್ಬಿಸಿ ಟಿವಿ 18 ವರದಿ ಮಾಡಿದೆ.
ಆರ್ಬಿಐ ಮತ್ತು ಕೇಂದ್ರ ಸರಕಾರದ ನಡುವಿನ ಭಿನ್ನಾಭಿಪ್ರಾಯವು ಹೆಚ್ಚುತ್ತಿದೆ ಎಂದು ವರದಿ ಹೇಳಿದೆ.
ಇಂಡಿಯಾ ಟುಡೇ ವರದಿ
ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಪ್ರಧಾನಿ ನರೇಂದ್ರ ಮೋದಿಯವರನ್ನು ನವೆಂಬರ್ 9 ರಂದು ಭೇಟಿಯಾದರು ಎಂದು ನವಂಬರ್ 12 ರಂದು ಇಂಡಿಯಾ ಟುಡೇ ವರದಿ ಮಾಡಿದೆ. ಸರಕಾರ ಮತ್ತು ಕೇಂದ್ರ ಬ್ಯಾಂಕುಗಳ ನಡುವೆ ವಿವಾದಾಸ್ಪದ ವಿವಾದಗಳನ್ನು ಬಗೆಹರಿಸುವ ಉದ್ದೇಶ ಈ ಸಭೆಯ ಗುರಿಯಾಗಿದೆ ಎಂದು ಸರಕಾರ ಮೂಲಗಳು ಹೇಳಿದ್ದವು. ಈ ಸಭೆಯಲ್ಲಿ ಉರ್ಜಿತ್ ಪಟೇಲ್ ಕೇಂದ್ರೀಯ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರದ ನಡುವಿನ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.
ನವೆಂಬರ್ 9 ರ ಸಭೆ
ನವೆಂಬರ್ 9 ರ ಸಭೆಯ ನಂತರ, ಆರ್ಬಿಐ ಮತ್ತು ಕೇಂದ್ರ ಸರ್ಕಾರ ಒಮ್ಮತಕ್ಕೆ ಬಂದಿವೆ ಎಂದು ವರದಿಯಾಗಿತ್ತು. ಆರ್ಬಿಐ ತನ್ನ ಪಾಲಿಸಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಒಪ್ಪಿಕೊಂಡಿದೆ ಎನ್ನಲಾಗಿತ್ತು. ಆರ್ಬಿಐ Vs ಕೇಂದ್ರ ಸರ್ಕಾರದ ಜಟಾಪಟಿಗೆ ಕಾರಣಗಳೇನು?