ವಿಮಾನ ಪ್ರಯಾಣಿಕರಿಗೆ 14 ದಿನಗಳ ಕ್ವಾರಂಟೈನ್ ಅಗತ್ಯವಿಲ್ಲ: ಕೇಂದ್ರ ಸಚಿವ
ಮೇ 25ನೇ ತಾರೀಕಿನ ಸೋಮವಾರದಿಂದ ಭಾರತದಲ್ಲಿ ದೇಶೀಯ ವಿಮಾನಗಳ ಹಾರಾಟ ಶುರುವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ನಾಗರಿಕ ವಿಮಾನ ಯಾನ ಸಚಿವ ಹರ್ದೀಪ್ ಸಿಂಗ್ ಪುರಿ, ಪ್ರಯಾಣಿಕರಿಗೆ 14 ದಿನಗಳ ಕ್ವಾರಂಟೈನ್ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.
ಕ್ವಾರಂಟೈನ್ ವಿಚಾರವನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕು. 14 ದಿನಗಳ ಕ್ವಾರಂಟೈನ್ ಇರಬೇಕು ಎನ್ನಲು ಸಾಧ್ಯವಿಲ್ಲ. ಇದು ವಾಸ್ತವ ನೆಲೆಗಟ್ಟಿನಲ್ಲೂ ಇಲ್ಲ ಎಂದು ಸಚಿವರು ಹೇಳಿದ್ದಾರೆ. ಒಬ್ಬ ವ್ಯಕ್ತಿ ಕೊರೊನಾ ಪಾಸಿಟಿವ್ ಇದ್ದಲ್ಲಿ ವಿಮಾನ ಏರುವುದು ಇರಲಿ, ವಿಮಾನ ನಿಲ್ದಾಣದೊಳಗೆ ಕೂಡ ಪ್ರವೇಶ ನೀಡುವುದಿಲ್ಲ. ಆದ್ದರಿಂದ ವಿಮಾನ ಪ್ರಯಾಣಿಕರಿಗೆ ಕೆಲವು ನಿಯಮಗಳನ್ನು ರೂಪಿಸಲಾಗಿದೆ ಎಂದಿದ್ದಾರೆ.
ದೇಶಾದ್ಯಂತ ಮೇ 22 ರಿಂದ 1.7 ಲಕ್ಷ ಸೇವಾ ಕೇಂದ್ರಗಳಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಪುನರಾರಂಭ
ಎರಡು ತಿಂಗಳ ನಂತರ, ಮೇ 25ರಿಂದ ದೇಶೀಯ ವಿಮಾನ ಹಾರಾಟ ಆರಂಭಿಸಲು ಕೇಂದ್ರ ಸರ್ಕಾರವು ತೀರ್ಮಾನಿಸಿದೆ. ಮಾರ್ಚ್ ತಿಂಗಳ ಕೊನೆ ವಾರದಲ್ಲಿ ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿದ ಮೇಲೆ ವಿಮಾನ ಹಾರಾಟ ಸೇವೆಯನ್ನು ಭಾರತದಲ್ಲಿ ರದ್ದು ಮಾಡಲಾಗಿತ್ತು.
ಪ್ರಯಾಣಿಕರು ವಿಮಾನ ಹೊರಡಲು ನಿಗದಿಯಾದ ಸಮಯಕ್ಕಿಂತ ಕನಿಷ್ಠ ಎರಡು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣ ತಲುಪಿಕೊಳ್ಳಬೇಕು. ಆಯಾ ರಾಜ್ಯ ಸರ್ಕಾರಗಳು ಪ್ರಯಾಣಿಕರು, ವಿಮಾನ ಯಾನ ಸಿಬ್ಬಂದಿಗೆ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು. ವಿಮಾನ ಹೊರಡುವ 60 ನಿಮಿಶ್ಗಪಖ ಮುಂಚೆಯೇ ಬೋರ್ಡಿಂಗ್ ಶುರುವಾಗುತ್ತದೆ. ಇನ್ನು ಬೋರ್ಡಿಂಗ್ ಗೇಟ್ ವಿಮಾನ ಹೊರಡುವ 20 ನಿಮಿಷ ಮುಂಚೆಯೇ ಮುಚ್ಚಲಾಗುತ್ತದೆ.
ಯಾರಿಗೆ ಖಾತ್ರಿ ಚೆಕ್ ಇನ್ ಇದೆಯೋ ಅಂಥವರು ಮಾತ್ರ ವಿಮಾನ ನಿಲ್ದಾಣ ಟರ್ಮಿನಲ್ ಪ್ರವೇಶ ಮಾಡಬಹುದು. ಪ್ರಯಾಣಿಕರು ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಗೆ ಒಳಗಾಗಬೇಕು. ಎಲ್ಲರಿಗೂ ಮಾಸ್ಕ್ ಮತ್ತು ಗ್ಲೌವ್ಸ್ ಕಡ್ಡಾಯ ಮಾಡಲಾಗಿದೆ. ಎಲ್ಲ ಪ್ರಯಾಣಿಕರು ಆರೋಗ್ಯ ಸೇತು ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡಿರಬೇಕು. ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಇದರಿಂದ ವಿನಾಯಿತಿ ಇದೆ. ಇನ್ನೂ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.