ಭಾರತ ನೆಲದಲ್ಲಿ ಹೂಡಿಕೆ ಮೂಲಕ ರೆಕ್ಕೆ ಬಿಚ್ಚುತ್ತಿದೆ ಚೀನಾದ ಪೀಪಲ್ಸ್ ಬ್ಯಾಂಕ್
ಭಾರತ ಹಾಗೂ ಚೀನಾದ ಮಧ್ಯೆ ಸಂಬಂಧ ಹಳಸಿರುವುದು ಜಗಜ್ಜಾಹೀರಾಗಿದೆ. ಭವಿಷ್ಯದಲ್ಲಿ ಇದು ಹೇಗಿರುತ್ತದೋ ಏನೋ ಎಂಬ ಅನಿಶ್ಚಿತತೆ ಇದ್ದರೂ ಚೀನಾದ ಕೇಂದ್ರ ಬ್ಯಾಂಕ್ (ಭಾರತದಲ್ಲಿ ರಿಸರ್ವ್ ಬ್ಯಾಂಕ್ ಇದ್ದಂತೆ) ಭಾರತದ ವ್ಯವಹಾರಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಉತ್ಸಾಹ ತೋರುತ್ತಲೇ ಇದೆ.
ಗಾಲ್ವಾನ್ ಗಡಿ ಬಿಕ್ಕಟ್ಟಿನ ಕಾರಣಕ್ಕೆ ಭಾರತದಲ್ಲಿ ಚೀನಾ ಮೂಲದ ಹಲವು ಅಪ್ಲಿಕೇಷನ್ ನಿಷೇಧಿಸಲಾಯಿತು. ವಿಶ್ವದಲ್ಲೇ ನಾಲ್ಕನೇ ಅತಿ ದೊಡ್ಡ ಸಂಪರ್ಕ ಜಾಲ ಹೊಂದಿರುವ ಭಾರತೀಯ ರೈಲ್ವೆಯಿಂದ 470 ಕೋಟಿ ರುಪಾಯಿ ಮೌಲ್ಯದ ಪ್ರಾಜೆಕ್ಟ್ ನಿಂದ ಚೈನೀಸ್ ಕಂಪೆನಿಯನ್ನು 'ನಾನ್ ಪರ್ಫಾರ್ಮೆನ್ಸ್' ಕಾರಣ ನೀಡಿ ರದ್ದು ಮಾಡಲಾಯಿತು.
1000 ಕೋಟಿಯ ಹಗರಣ; ಹವಾಲ ಕಿಂಗ್ ಪಿನ್ ಚೀನಾ ಪ್ರಜೆಯ ಭಾಂಡಾರ ಬಯಲಿಗೆ
ಭಾರತ ಹಾಗೂ ಚೀನಾ ಮಧ್ಯೆ ಹಸಿ ಹುಲ್ಲು ಹಾಕಿದರೂ ಧಗ್ಗನೆ ಹೊತ್ತಿ ಉರಿಯುವ ಸನ್ನಿವೇಶ ಇರುವ ಕಾಲಘಟ್ಟದಲ್ಲಿ ಸ್ವಾವಲಂಬನೆಗೆ ಒತ್ತು ನೀಡಲಾಗುತ್ತಿದೆ. ಅದೇ ಸಂದರ್ಭದಲ್ಲಿ ಚೈನೀಸ್ ಹೂಡಿಕೆ ಮೇಲೆ ಕಣ್ಗಾವಲು ಇಡಲಾಗಿದೆ. ಯಾವ ದೇಶಗಳೊಂದಿಗೆ ಭಾರತವು ಗಡಿ ಹಂಚಿಕೊಳ್ಳುತ್ತದೋ ಅವು ಇಲ್ಲಿ ಹೂಡಿಕೆ ಮಾಡಬೇಕು ಅಂದರೆ ಸರ್ಕಾರದ ಪೂರ್ವಾನುಮತಿ ಕಡ್ಡಾಯ ಮಾಡಲಾಗಿದೆ. ಅವಕಾಶ ಸಿಕ್ಕಾಗ ಎಲ್ಲವನ್ನೂ ಬಾಚಿಕೊಳ್ಳುವ ಚೀನಾ ವರಸೆಗೆ ಲಗಾಮು ಹಾಕಬೇಕು ಅನ್ನೋದು ಸರ್ಕಾರದ ಗುರಿ.
ಮುಂದುವರಿದಿದೆ ಚೀನಾ ಬ್ಯಾಂಕ್ ಹೂಡಿಕೆ
ಈ ಮಧ್ಯೆ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (PBOC) ಭಾರತದಲ್ಲಿ ಹೂಡಿಕೆ ಮುಂದುವರಿಸಿದೆ. ಕೆಲವೇ ದಿನಗಳ ಹಿಂದೆ, ಮಾರ್ಚ್ ನಲ್ಲಿ ಎಚ್ ಡಿಎಫ್ ಸಿಯಲ್ಲಿ ಷೇರು ಪಡೆದುಕೊಂಡ ನಂತರ ಹೊಸದಾಗಿ ಷೇರು ಖರೀದಿ ಮಾಡಿತ್ತು. ಈ ಸಲ ಐಸಿಐಸಿಐ ಬ್ಯಾಂಕ್ ಷೇರನ್ನು QIP (ಕ್ವಾಲಿಫೈಡ್ ಇನ್ ಸ್ಟಿಟ್ಯೂಷನಲ್ ಪ್ಲೇಸ್ ಮೆಂಟ್) ಮೂಲಕ ಖರೀದಿಸಿದೆ. ಎಚ್ ಡಿಎಫ್ ಸಿಯಲ್ಲಿ ಚೀನಾದ ಹೂಡಿಕೆ ಗಮನಾರ್ಹವಾಗಿ ಆಗುತ್ತಿದೆ ಎಂಬುದು ತಿಳಿದಾಗ FPI ನಿಯಮಾವಳಿ ಬಿಗಿಗೊಳಿಸಲಾಯಿತು. ಇದೀಗ ಚೀನಾದಿಂದ ಐಸಿಐಸಿಐ ಷೇರು ಖರೀದಿ ಮೂಲಕ ಮತ್ತೆ ಕೆಲವು ವಲಯದವರ ಚಿಂತೆಗೆ ಕಾರಣವಾಗಿದೆ. ಅದರಲ್ಲಿ ಬಹಳ ಮುಖ್ಯವಾದದ್ದು ಕಾನ್ಫಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT).
ಆಯಾ ಬ್ಯಾಂಕ್ ಗಳು ಹೂಡಿಕೆಯನ್ನು ಹಿಂತಿರುಗಿಸಬೇಕು
CAIT ರಾಷ್ಟ್ರೀಯ ಅಧ್ಯಕ್ಷ ಬಿ.ಸಿ. ಭಾರ್ತಿಯಾ ಮಾತನಾಡಿ, ಭಾರತದ ಬ್ಯಾಂಕಿಂಗ್ ವಲಯದಲ್ಲಿ ದಿಢೀರನೇ ಚೀನಾದ ಆಸಕ್ತಿ ಹೆಚ್ಚಾಗಿರುವುದು ಇಡೀ ವಲಯದ ಪಾಲಿಗೆ ಎಚ್ಚರಿಕೆ ಹೆಚ್ಚಿಸಿದೆ. ಭಾರತದ ಬ್ಯಾಂಕಿಂಗ್ ಗೆ ಕಸ್ಟೋಡಿಯನ್ ಆದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಹಳ ಎಚ್ಚರಿಕೆಯಿಂದ ಇರಬೇಕು. ಈ ಬೆಳವಣಿಗೆ ಮೇಲೆ ಕಣ್ಣಿಡಬೇಕು ಎಂದು ಹೇಳಿದ್ದಾರೆ. ಇನ್ನೂ ಮುಂದುವರಿದು, ಎಚ್ ಡಿಎಫ್ ಸಿ ಹಾಗೂ ಐಸಿಐಸಿಐ ಬ್ಯಾಂಕ್ ಗಳಲ್ಲಿ ಮಾಡಿರುವ ಹೂಡಿಕೆಯನ್ನು PBOCಗೆ ಹಿಂತಿರುಗಿಸುವಂತೆ ಆಯಾ ಕಂಪೆನಿಗಳಿಗೆ ಸೂಚನೆ ನೀಡಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ.
ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಮೇಲಿನ ಹಿಡಿತಕ್ಕೆ ರಣತಂತ್ರ
ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಿಡಿತ ಸಾಧಿಸಲು ಚೀನಾ ಮಾಡುತ್ತಿರುವ ಯೋಜನಾಬದ್ಧ ರಣತಂತ್ರ ಇದು. ಭಾರತದ ಆರ್ಥಿಕ ಆರೋಗ್ಯದ ದೃಷ್ಟಿಯಿಂದ ಬ್ಯಾಂಕಿಂಗ್ ವಲಯ ಬಹುಮುಖ್ಯವಾದದ್ದು. ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟ್ ಮೆಂಟ್ ಬಗ್ಗೆ ಸರ್ಕಾರ ನಿಯಮಾವಳಿ ರೂಪಿಸಿದರೂ ಚೀನಾದಿಂದ ಬರುವ ಹಣವನ್ನು ನಿಯಂತ್ರಿಸಲು ಹಾಗೂ ತಡೆಯಲು ಆರ್ ಬಿಐನಿಂದ ಯಾವುದೇ ಗಟ್ಟಿ ಕ್ರಮಗಳಾಗಿಲ್ಲ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇವಾಲ್ ಹೇಳಿದ್ದಾರೆ. ಗಡಿ ಉದ್ವಿಗ್ನತೆ ಇದ್ದಾಗಲೂ ಹೂಡಿಕೆಗೆ ಚೀನಾದ ಪೀಪಲ್ಸ್ ಬ್ಯಾಂಕ್ ಗೆ ಹೂಡಿಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಖಾಸಗಿ ಸಂಸ್ಥೆಗಳ ವಿರುದ್ಧ ಸಿಎಐಟಿ ಟೀಕೆ ಕೂಡ ಮಾಡಿದೆ. ಮಾಹಿತಿಯ ಪ್ರಕಾರ, ಚೀನಾದ ಪೀಪಲ್ಸ್ ಬ್ಯಾಂಕ್ ನಿಂದ ಐಸಿಐಸಿಐ ಬ್ಯಾಂಕ್ ನ 15 ಸಾವಿರ ಕೋಟಿ QIPಯಲ್ಲಿ 15 ಕೋಟಿಯಷ್ಟು ಹೂಡಿಕೆ ಮಾಡಲಾಗಿದೆ. ಅದಕ್ಕೂ ಮುನ್ನ ಕೆಲ ತಿಂಗಳ ಹಿಂದೆ ಎಚ್ ಡಿಎಫ್ ಸಿಯಲ್ಲಿ 1 ಪರ್ಸೆಂಟ್ ಗೂ ಹೆಚ್ಚು ಷೇರಿನ ಪಾಲನ್ನು ತನ್ನದಾಗಿಸಿಕೊಂಡಿತ್ತು.
ಭಾರತದಲ್ಲಿ ಮಾಡಿರುವ ಒಟ್ಟು ಹೂಡಿಕೆ ಎಷ್ಟು?
ಚೀನಾ ಕೇಂದ್ರ ಬ್ಯಾಂಕ್ ಹೂಡಿಕೆ ಮಾಡಿರುವ ಎರಡು ಬ್ಲ್ಯೂಚಿಪ್ ಕಂಪೆನಿಗಳು ಎಚ್ ಡಿಎಫ್ ಸಿ ಹಾಗೂ ಐಸಿಐಸಿಐ ಬ್ಯಾಂಕ್. ಇದರ ಜತೆಗೆ ಏಷ್ಯನ್ ಪೇಂಟ್ಸ್, ಅಂಬುಜಾ ಸಿಮೆಂಟ್ಸ್ ನಲ್ಲೂ ಹೂಡಿಕೆ ಮಾಡಿದೆ. 2020ರ ಮಾರ್ಚ್ ಕೊನೆ ಹೊತ್ತಿಗೆ ಚೀನಾದ ಕೇಂದ್ರ ಬ್ಯಾಂಕ್ ನಿಂದ ಎಚ್ ಡಿಎಫ್ ಸಿ, ಏಷ್ಯನ್ ಪೇಂಟ್ಸ್, ಅಂಬುಜಾ ಸಿಮೆಂಟ್ಸ್ ಗೆ ಸೇರಿದ 4,418 ಕೋಟಿ ಮೌಲ್ಯದ ಷೇರು ಪಡೆದಿತ್ತು. ಹಾಗಂತ ಇದು ದೊಡ್ಡ ಪಾಲೇನೂ ಅಲ್ಲ. ಆದರೆ "ಚೀನಾದ ತಂತ್ರದ ಭಾಗದಲ್ಲಿ ಇದೂ ಒಂದು" ಎಂದು CAITಯ ಭಾರ್ತಿಯಾ ಎಚ್ಚರಿಸುತ್ತಾರೆ. ಒಂದು ದೇಶದ ಕೇಂದ್ರ ಬ್ಯಾಂಕ್ ನಿಂದ ಮತ್ತೊಂದು ದೇಶದ ಆಸ್ತಿಯನ್ನು ಖರೀದಿಸುವುದು ಸಾಮಾನ್ಯ ಸಂಗತಿ ಅಲ್ಲ. ಬ್ಲೂಮ್ ಬರ್ಗ್ ವರದಿ ಪ್ರಕಾರ, ಜಾಗತಿಕ ಬ್ಯಾಂಕ್ ಗಳು 1ಲಕ್ಷ ಕೋಟಿ ಅಮೆರಿಕನ್ ಡಾಲರ್ ನಷ್ಟು ಈಕ್ವಿಟಿಯನ್ನು ಹೊಂದಿವೆ. ಜೂನ್ 2020ರಲ್ಲಿ ಭಾರತೀಯ ಈಕ್ವಿಟಿಯಲ್ಲಿ ಕೇಂದ್ರ ಬ್ಯಾಂಕ್ ಗಳು 67,090 ಕೋಟಿ ಅಸೆಟ್ಸ್ ಅಂಡರ್ ಮ್ಯಾನೇಜ್ ಮೆಂಟ್ (AUM) ಹೊಂದಿವೆ. ವರ್ಷದ ಹಿಂದೆ ಈ ಪ್ರಮಾಣ 64,600 ಕೋಟಿ ರುಪಾಯಿ ಇತ್ತು.