ಹೂ ಬೆಳೆಗಾರರಿಗೆ 25 ಸಾವಿರ, ಡ್ರೈವರ್ ಗಳಿಗೆ 5 ಸಾವಿರ...ಇನ್ನೂ ಏನೇನು?
ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರವು ಬುಧವಾರದಂದು ಕೊರೊನಾ ಬಾಧಿತ ವರ್ಗಕ್ಕೆ 1600 ಕೋಟಿ ರುಪಾಯಿಯ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಈ ಪ್ಯಾಕೇಜ್ ನಲ್ಲಿ ವಲಸಿಗ ಕಾರ್ಮಿಕರಿಗಾಗಿ ಹೆಚ್ಚಿನದೇನನ್ನೂ ನೀಡಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಆದರೆ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಸಂಸ್ಥೆಗಳು, ಕೈಮಗ್ಗ ನೇಕಾರರು, ಹೂವು ಬೆಳೆಗಾರರು, ಧೋಬಿ (ಅಗಸ ವೃತ್ತಿಯಲ್ಲಿ ಇರುವವರು), ಕ್ಷೌರಿಕರು, ಆಟೋ ಮತ್ತು ಟ್ಯಾಕ್ಸಿ ಚಾಲಕರು ಸೇರಿದಂತೆ ಹಲವ ವರ್ಗಗಳಿಗೆ ನೆರವಾಗಲು ಸರ್ಕಾರ ಮುಂದಾಗಿದೆ. ಈಗ ಯಾರಿಗೆ ಏನು ಪರಿಹಾರ ನೀಡಲಾಗುವುದು ಎಂಬ ವಿವರ ಹೀಗಿದೆ.
ಯಾರಿಗೆ, ಎಷ್ಟು ಪರಿಹಾರ ಪ್ಯಾಕೇಜ್?
ಹೂವು ಬೆಳೆಗಾರರಿಗೆ ಒಂದು ಹೆಕ್ಟೇರ್ ಗೆ 25 ಸಾವಿರ ರುಪಾಯಿ ಪರಿಹಾರ ನೀಡಲಾಗುತ್ತದೆ. ಆದರೆ ಅದಕ್ಕೆ ಗರಿಷ್ಠ ಒಂದು ಹೆಕ್ಟೇರ್ ನಲ್ಲಿ ಆದ ಬೆಳೆನಾಶದ ಮಿತಿ ವಿಧಿಸಲಾಗಿದೆ. ಧೋಬಿ ಹಾಗೂ ಕ್ಷೌರಿಕರಿಗೆ ಒಂದು ಸಲದ ಪರಿಹಾರವಾಗಿ 5 ಸಾವಿರ ರುಪಾಯಿ ನೀಡಲಾಗುತ್ತದೆ. ಆಟೋ- ಟ್ಯಾಕ್ಸಿ ಚಾಲಕರಿಗೆ ಕೂಡ ಒಂದು ಸಲದ ಪರಿಹಾರವಾಗಿ 5 ಸಾವಿರ ರುಪಾಯಿಯನ್ನು ನೀಡಲಾಗುತ್ತದೆ. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಈಗಾಗಲೇ 2 ಸಾವಿರ ರುಪಾಯಿಯನ್ನು ನೀಡಲಾಗಿದ್ದು, ಅದರ ಜತೆಗೆ ಈಗ ಹೆಚ್ಚುವರಿಯಾಗಿ 3 ಸಾವಿರ ರುಪಾಯಿ ನೀಡಲಾಗುತ್ತದೆ.
ಎರಡು ತಿಂಗಳು ವಿದ್ಯುತ್ ಬಿಲ್ ಮನ್ನಾ
ಇನ್ನು ಕೈ ಮಗ್ಗ ಕಾರ್ಮಿಕರ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ರುಪಾಯಿ ವರ್ಗಾವಣೆ ಮಾಡಲಾಗುತ್ತದೆ. ಕಿರು, ಸಣ್ಣ ಮತ್ತು ಮಧ್ಯಮ (MSME) ಕೈಗಾರಿಕೆಗಳ ವಿದ್ಯುತ್ ಬಿಲ್ ಎರಡು ತಿಂಗಳು ಮನ್ನಾ ಮಾಡಲಾಗುತ್ತದೆ. ಇನ್ನು ಬೃಹತ್ ಕೈಗಾರಿಕೆಗಳು ಎರಡು ತಿಂಗಳ ವಿದ್ಯುತ್ ಬಿಲ್ ಸಂಗ್ರಹವನ್ನು ಎರಡು ತಿಂಗಳು ಮುಂದಕ್ಕೆ ಹಾಕಲಾಗಿದೆ. ಈಗ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಯೋಜನೆಯಿಂದ 60 ಸಾವಿರಕ್ಕೂ ಹೆಚ್ಚು ಅಗಸ ವೃತ್ತಿಯಲ್ಲಿ ಇರುವವರಿಗೆ, 2,30,000ರಷ್ಟು ಇರುವ ಕ್ಷೌರಿಕ ವೃತ್ತಿಯಲ್ಲಿ ಇರುವವರಿಗೆ ಅನುಕೂಲ ಆಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.
ಒಂದು ಲಕ್ಷದಷ್ಟು ಜನರನ್ನು ವಾಪಸ್ ಕಳುಹಿಸಲಾಗಿದೆ
ಕಾರ್ಮಿಕರನ್ನು ಸ್ವಂತ ಸ್ಥಳಗಳಿಗೆ ಕಳುಹಿಸಲು ಇದ್ದ ರೈಲುಗಳನ್ನು ರದ್ದು ಮಾಡಿದ್ದರ ಬಗ್ಗೆ ಕರ್ನಾಟಕದ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ ಇದಕ್ಕೆ ಉತ್ತರ ನೀಡಿರುವ ಮುಖ್ಯಮಂತ್ರಿ ಬಿಎಸ್ ವೈ, ನಾವು 3500 ಬಸ್ ಹಾಗೂ ರೈಲುಗಳಲ್ಲಿ ಒಂದು ಲಕ್ಷದಷ್ಟು ಜನರನ್ನು ಅವರ ಸ್ಥಳಗಳಿಗೆ ಕಳುಹಿಸಿದ್ದೇವೆ. ನಿರ್ಮಾಣ ಕಾರ್ಯ ಮತ್ತೆ ಆರಂಭ ಆಗಿರುವುದರಿಂದ ಇಲ್ಲೇ ಉಳಿದುಕೊಳ್ಳಿ ಅಂತಲೂ ವಲಸಿಗ ಕಾರ್ಮಿಕರಲ್ಲಿ ಮನವಿ ಮಾಡಿಕೊಂಡೆ ಎಂದಿದ್ದಾರೆ. ಅಂದ ಹಾಗೆ ಕರ್ನಾಟಕದಲ್ಲಿ ಈಗಲೂ ಮೂರು ಜಿಲ್ಲೆಗಳಲ್ಲಿ ರೆಡ್ ಝೋನ್ ಗಳಿವೆ. ಈ ತನಕ 671 ಕೊರೊನಾ ಪ್ರಕರಣ ದಾಖಲಾಗಿದ್ದು ಹಾಗೂ 29 ಮಂದಿ ಸಾವನ್ನಪ್ಪಿದ್ದಾರೆ.