ಚುನಾವಣೆಗಳ ಸಂದರ್ಭದಲ್ಲಿ ಕಾರ್ಪೊರೇಟ್ ಫಂಡಿಂಗ್ ಮಾಡುವುದರ ಮೇಲೆ ಸಂಪೂರ್ಣ ನಿಷೇಧ ಹೇರಬೇಕು ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಎಸ್ಸೆಂ ಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ. ರಾಜಕೀಯ ಭ್ರಷ್ಟಾಚಾರ ಕೊನೆ ಮಾಡಬೇಕಿದೆ ಹಾಗೂ ದೇಶದ ಚುನಾವಣೆ ವ್ಯವಸ್ಥೆಯನ್ನು ಸ್ವಚ್ಛಗೊಳಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ಆಡಳಿತ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ತಾಯಿಬೇರು ರಾಜಕೀಯದ ಭ್ರಷ್ಟಾಚಾರದಲ್ಲಿ ಇದೆ. ಇನ್ನು ರಾಜಕೀಯ ಭ್ರಷ್ತಾಚಾರದ ಬೇರು ಚುನಾವಣೆ ಭ್ರಷ್ಟಾಚಾರದಲ್ಲಿದೆ ಎಂದು ಹಿರಿಯ ರಾಜಕಾರಣಿಯಾದ ಎಸ್ಸೆಂ ಕೃಷ್ಣ ಹೇಳಿದ್ದಾರೆ. "ನಾವು ಮೊದಲಿಗೆ ಚುನಾವಣೆ ವ್ಯವಸ್ಥೆಯನ್ನು ಸ್ವಚ್ಛಗೊಳಿಸಬೇಕು. ಈ ಪ್ರಕ್ರಿಯೆ ಅಲ್ಲಿ ಇಲ್ಲಿ ನಡೆಯುತ್ತಿದೆ. ಆರಂಭಿಕ ಹಂತದಲ್ಲಿ ಕೆಲವು ಸುಧಾರಣೆಗಳು ಆದವು" ಎಂದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಪಗಳೇ ಇಲ್ಲ
ಕೇಂದ್ರದ ಉನ್ನತ ಮಟ್ಟದಲ್ಲಿ ರಾಜಕೀಯ ಭ್ರಷ್ಟಾಚಾರ ಇಲ್ಲ ಎಂಬ ಕಾರಣಕ್ಕೆ ನಾನು ಸಂತೋಷವಾಗಿದ್ದೇನೆ. ಸ್ವಜನಪಕ್ಷಪಾತ ಅಥವಾ ಭ್ರಷ್ಟಾಚಾರ ಎಂದು ಒಂದೇ ಒಂದು ಆರೋಪ ಕೂಡ ಇಲ್ಲ. ಸ್ವತಃ ಪ್ರಧಾನಮಂತ್ರಿಗಳು (ನರೇಂದ್ರ ಮೋದಿ) ಸಂಪುರ್ಣವಾಗಿ ಹಾಗೂ ನಿರ್ವಿವಾದವಾಗಿ ಸ್ವಚ್ಛವಾಗಿದ್ದಾರೆ ಹಾಗೂ ಪ್ರಾಮಾಣಿಕರಾಗಿದ್ದಾರೆ. ಇದು ಅತಿ ದೊಡ್ಡ ಸಕಾರಾತ್ಮಕ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.
ಹಣದ ಶಕ್ತಿ ತೊಡೆದುಹಾಕಬೇಕು
ಹಣದ ಶಕ್ತಿಯನ್ನು ತೊಡೆದು ಹಾಕದಿದ್ದಲ್ಲಿ ಸ್ವಚ್ಛ ರಾಜಕಾರಣ ಸಾಧ್ಯವಿಲ್ಲ. ಮುಖ್ಯವಾಗಿ ಹಣದ ಶಕ್ತಿಯ ಬಗ್ಗೆ ಹೇಳುತ್ತಿದ್ದೇನೆ. ಅದು ನಾವಿಡಬೇಕಾದ ಮೊದಲ ಹೆಜ್ಜೆ. ಚುನಾವಣೆಗೆ ಸಾರ್ವಜನಿಕ ಹಣಕಾಸು ನೆರವನ್ನು ತರಬೇಕು. ಖಾಸಗಿ ಫಂಡಿಂಗ್ ಗೆ ಸಂಪೂರ್ಣ ಹಾಗೂ ಒಟ್ಟಾರೆ ನಿಷೇಧ ಹೇರಬೇಕು. ನಾನು ಹೇಳುತ್ತಿರುವುದು ಕಾರ್ಪೊರೇಟ್ ಕಂಪೆನಿಗಳ ಬಗ್ಗೆ ಎಂದು ಅವರು ಹೇಳಿದ್ದಾರೆ.
ಧರ್ಮ, ಜಾತಿ ಆಧಾರದಲ್ಲಿ ಮತ ಕೇಳಿದರೆ ಶಿಕ್ಷೆಯಾಗಬೇಕು
ಧರ್ಮ ಹಾಗೂ ಜಾತಿ ಆಧಾರದಲ್ಲಿ ಮತ ಕೇಳುವುದನ್ನು ಶಿಕ್ಷಾರ್ಹ ಅಪರಾಧ ಎಂದು ಮಾಡಬೇಕು ಎಂದು ಹೇಳಿರುವ ಅವರು, ರಾಜಕಾರಣವು ಸರ್ಕಾರಿ ಉದ್ಯೋಗ ಅಲ್ಲ. ಆದ್ದರಿಂದ ಅದಕ್ಕೆ ನಿವೃತ್ತಿ ವಯಸ್ಸಿನ ಅಗತ್ಯ ಇಲ್ಲ. ಮೊರಾರ್ಜಿ ದೇಸಾಯಿ ಅವರು ಈ ದೇಶದ ಪ್ರಧಾನಿ ಆದಾಗ ವಯಸ್ಸು 81. ಪ್ರಧಾನಿಯಾಗಿ ಅದ್ಭುತವಾಗಿಯೇ ಕೆಲಸ ಮಾಡಿದರು ಎಂದು 88 ವರ್ಷದ ಕೃಷ್ಣ ರಾಜಕೀಯ ನಿವೃತ್ತಿ ಬಗ್ಗೆ ಉತ್ತರಿಸಿದ್ದಾರೆ.


Click it and Unblock the Notifications