ದೆಹಲಿ ಸರ್ಕಾರದಿಂದ 40,000 ಕಾರ್ಮಿಕರಿಗೆ ತಲಾ 5,000 ರುಪಾಯಿ
ರಾಷ್ಟ್ರವ್ಯಾಪಿ ಲಾಕ್ಡೌನ್ನಿಂದಾಗಿ ಹಣದ ಕೊರತೆಯಿಂದ ಬಳಲುತ್ತಿರುವ ಕಾರ್ಮಿಕರಿಗೆ ಪರಿಹಾರ ನೀಡಲು ಮುಂದಾಗಿರುವ ದೆಹಲಿ ಸರ್ಕಾರ ದೆಹಲಿಯ ನಿರ್ಮಾಣ ಕಾರ್ಯಗಳಿಗೆ ಸಂಬಂಧಿಸಿದ ನೋಂದಾಯಿತ ಕಾರ್ಮಿಕರಿಗೆ ತಲಾ 5 ಸಾವಿರ ರುಪಾಯಿ ಪರಿಹಾರ ನೀಡಲು ನಿರ್ಧರಿಸಿದೆ.
ಈ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಬಳಿಕ ಮಾತನಾಡಿದ ದೆಹಲಿ ಕಾರ್ಮಿಕ ಸಚಿವ ಗೋಪಾಲ್ ರೈ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ನಿರ್ಮಾಣ ಕಾರ್ಮಿಕರ ಖಾತೆಗೆ ಈ ತಿಂಗಳು ಮತ್ತೆ 5 ಸಾವಿರ ರುಪಾಯಿಗಳನ್ನು ಕಳುಹಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ದೆಹಲಿ ಸರ್ಕಾರದ ಈ ನಿರ್ಧಾರದಿಂದ ಅಲ್ಲಿರುವ ಸುಮಾರು 40 ಸಾವಿರ ನೋಂದಾಯಿತ ಕಾರ್ಮಿಕರಿಗೆ ಪರಿಹಾರ ಸಿಗುತ್ತದೆ. ಕಳೆದ ತಿಂಗಳು ಸಹ ಕಾರ್ಮಿಕರಿಗೆ ದೆಹಲಿ ಸರ್ಕಾರವು 5 ಸಾವಿರ ರುಪಾಯಿಗಳ ಸಹಾಯವನ್ನು ನೀಡಿತ್ತು.
ದೆಹಲಿಯೊಳಗೆ ಹೆಚ್ಚಿನ ಸಂಖ್ಯೆಯ ಕಟ್ಟಡ ನಿರ್ಮಾಣ ಕಾರ್ಮಿಕರು ವಾಸಿಸುತ್ತಿದ್ದಾರೆ. ಲಾಕ್ಡೌನ್ ಕಾರಣ ಎಲ್ಲಾ ವ್ಯವಹಾರಗಳನ್ನು ಮುಚ್ಚಲಾಗಿದೆ. ಆದ್ದರಿಂದ ಈ ಮೊತ್ತವನ್ನು ನಾಳೆಯಿಂದ ಕಾರ್ಮಿಕರ ಖಾತೆಗೆ ಕಳುಹಿಸಲಾಗುವುದು ಎನ್ನಲಾಗಿದೆ. ದೆಹಲಿಯಲ್ಲಿ ಸುಮಾರು 39600 ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ, ಅವರ ಖಾತೆಗೆ ಹಣವನ್ನು ಕಳುಹಿಸಲಾಗುತ್ತದೆ ಎಂದು ಹೇಳಲಾಗಿದೆ.
ಈ ಹಿಂದೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ಮಾಣ ಕಾರ್ಮಿಕರ ಖಾತೆಗೆ ಹಣವನ್ನು ಕಳುಹಿಸುವಂತೆ ಆದೇಶ ನೀಡಿತ್ತು. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸುಮಾರು 52 ಸಾವಿರ ಕೋಟಿ ರುಪಾಯಿಗಳನ್ನು ಸೆಸ್ ನಿಧಿಯಲ್ಲಿ ಠೇವಣಿ ಇಡಲಾಗಿದೆ ಎಂದು ಸರ್ಕಾರ ಹೇಳಿದೆ.