ರಾಷ್ಟ್ರವ್ಯಾಪಿ ಲಾಕ್ಡೌನ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ ದೇಶದ ಆರ್ಥಿಕತೆಗೆ ಚೇತರಿಕೆ ನೀಡಿದ್ದ 20 ಲಕ್ಷ ಕೋಟಿ ಆರ್ಥೀಕ ಪ್ಯಾಕೇಜ್ನಲ್ಲಿ ಈಗಾಗಲೇ 18 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಶನಿವಾರ (ಮೇ 16) ನಾಲ್ಕನೇ ಹಂತದಲ್ಲಿ ಪ್ಯಾಕೇಜ್ ವಿವರಿಸಿದರು. ಇಂದು ಸಾಂಸ್ಥಿಕ ಸುಧಾರಣೆಗಳಿಗೆ ಆದ್ಯತೆ ನೀಡುವ ಮೂಲಕ 8 ವಲಯಗಳ ಸುಧಾರಣೆಗೆ ಒತ್ತು ನೀಡಲಾಗಿದೆ.
ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದ್ದು, ಹೂಡಿಕೆ ಉತ್ತೇಜನಕ್ಕೆ ಕೇಂದ್ರ/ರಾಜ್ಯಗಳ ಜೊತೆ ಸಮನ್ವಯಕ್ಕೆ ಪ್ರಯತ್ನ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರವು, 5 ಲಕ್ಷ ಎಕರೆ ಕೈಗಾರಿಕಾ ಪ್ರದೇಶವನ್ನು ಪರಿಣಾಮಕಾರಿ ಬಳಕೆಗೆ ಯೋಜಿಸಿದೆ.
ಕಲ್ಲಿದ್ದಲು, ಖನಿಜ ಸಂಪತ್ತು, ರಕ್ಷಣಾ ಉತ್ಪಾದನೆ, ವೈಮಾನಿಕ, ಇಂಧನ ಪೂರೈಕೆ ಕಂಪನಿಗಳು, ಬಾಹ್ಯಾಕಾಶ, ಅಣುಶಕ್ತಿ ಸೇರಿದಂತೆ ಎಂಟು ವಲಯಗಳ ಸುಧಾರಣೆಗೆ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಈ ಎಂಟು ವಲಯಗಳಿಗೆ ವಿದೇಶಿ ಹೂಡಿಕೆ ಆಕರ್ಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಕಲ್ಲಿದ್ದಲು ವಲಯಕ್ಕೆ 50 ಸಾವಿರ ಕೋಟಿ ರುಪಾಯಿ
ವಿಶ್ವದಲ್ಲಿ ಅತಿ ಹೆಚ್ಚು ಕಲ್ಲಿದ್ದಲು ಸಂಪನ್ಮೂಲ ಹೊಂದಿರುವ ಮೂರನೇ ರಾಷ್ಟ್ರ ಭಾರತ ಆಗಿದ್ದು, ಆದರೂ ಕಲ್ಲಿದ್ದಲ್ಲನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಕಲ್ಲಿದ್ದಲು ಆಮದು ತಗ್ಗಿಸಿ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಕಲ್ಲಿದ್ದಲು ವಲಯಕ್ಕೆ 50 ಸಾವಿರ ಕೋಟಿ ರುಪಾಯಿ ಘೋಷಣೆ ಮಾಡಲಾಗಿದೆ.
ಕಲ್ಲಿದ್ದಲು ವಲಯವನ್ನು ಖಾಸಗೀಕರಣ ಮಾಡಿದ ಕೇಂದ್ರ ಸರ್ಕಾರ
ಕಲ್ಲಿದ್ದಲು ಗಣಿಯನ್ನು ಯಾರು ಬೇಕಾದರೂ ಬಿಡ್ ಮಾಡಿ ಪಡೆಯಬಹುದು. ಯಾರು ಮುಂಗಡ ಹಣ ನೀಡುತ್ತಾರೋ ಅವರಿಗೆ ಕಲ್ಲಿದ್ದಲು ಗಣಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿರುವ ಕೇಂದ್ರ ಸರ್ಕಾರವು ಮುಕ್ತ ಮಾರುಕಟ್ಟೆಯಲ್ಲಿ ಕಲ್ಲಿದ್ದಲು ಪೂರೈಸಲು ಕ್ರಮ ಕೈಗೊಂಡಿದೆ. ಜೊತೆಗೆ ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾವನ್ನು ಖಾಸಗೀಕರಣ ಮಾಡುವ ಸುಳಿವು ನೀಡಿದೆ.
ಹರಾಜು ಮೂಲಕ ಶೀಘ್ರದಲ್ಲೇ 50 ಕಲ್ಲಿದ್ದಲು ಗಣಿ ಮಾರಾಟ ಮಾಡಲು ಮುಂದಾಗಿದೆ. ಕಲ್ಲಿದ್ದಲು ಜೊತೆಗೆ ಬಾಕ್ಸೈಟ್ ಅನ್ನು ಜಂಟಿಯಾಗಿ ಹರಾಜು ಹಾಕಲಾಗುತ್ತದೆ.
ಖನಿಜ ಗಣಿಗಾರಿಕೆ ಖಾಸಗೀಕರಣ
500 ಖನಿಜ ಗಣಿಗಾರಿಕೆಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಲ್ಯೂಮಿನಿಯಂ ಕೈಗಾರಿಕೆಯ ವಿದ್ಯುತ್ ಬಿಲ್ ಕಡಿತಗೊಳಿಸಲಾಗಿದ್ದು, ಖನಿಜ ಕ್ಷೇತ್ರದಲ್ಲಿ ಸುಧಾರಣೆ ಮುಂದಾಗಿದೆ.
ಭಾರತದಲ್ಲೇ ರಕ್ಷಣಾ ಸಾಮಾಗ್ರಿಗಳ ಉತ್ಪಾದನೆ
ಭಾರತದಲ್ಲೇ ರಕ್ಷಣಾ ಸಾಮಾಗ್ರಿಗಳ ಉತ್ಪಾದನೆ ಸುಧಾರಣೆಗೆ ಒತ್ತು ನೀಡಲಾಗಿದೆ. ಮೇಕ್ ಇನ್ ಇಂಡಿಯಾ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣದ ಜೊತೆಗೆ ರಕ್ಷಣಾ ಉತ್ಪನ್ನದ ಆಮದು ಕಡಿಮೆ ಮಾಡಲಾಗುತ್ತದೆ.
ರಕ್ಷಣಾ ವಲಯದ ಕಂಪನಿಗಳ ಷೇರು ಮಾರುಕಟ್ಟೆ ಪ್ರವೇಶಿಸಲು ಕ್ರಮ
ರಕ್ಷಣಾ ವಲಯದ FDI 49 ಪರ್ಸೆಂಟ್ರಿಂದ 74 ಪರ್ಸೆಂಟ್ಗೆ ಏರಿಕೆಗೆ ನಿರ್ಧಾರ ಮಾಡಲಾಗಿದೆ. ಭಾರತದಲ್ಲಿಯೇ ರಕ್ಷಣಾ ಸಾಮಗ್ರಿಗಳನ್ನು ಉತ್ಪಾದನೆ ಮಾಡುವ ಜೊತೆಗೆ, ರಕ್ಷಣಾ ಸಾಮಗ್ರಿಗಳನ್ನು ಖರೀದಿಸಲು ಬಜೆಟ್ನಲ್ಲಿ ಅವಕಾಶ ನೀಡಲು ಮುಂದಾಗಿದೆ. ಮಂಡಳಿಯ ಮೂಲಕ ಶಸ್ತ್ರಾಸ್ತ್ರ ಪೂರೈಕೆ ಹೆಚ್ಚಿಸಲಾಗುವುದು.
ಜೊತೆಗೆ ರಕ್ಷಣಾ ವಲಯದ ಕಂಪನಿಗಳ ಷೇರು ಮಾರುಕಟ್ಟೆ ಪ್ರವೇಶಿಸಲು ಕ್ರಮ ಕೈಗೊಳ್ಳಲಾಗಿದೆ.
ನಾಗರಿಕ ವಿಮಾನಯಾನದಲ್ಲಿ ದಕ್ಷತೆ
ನಾಗರಿಕ ವಿಮಾನಯಾನದಲ್ಲಿ ದಕ್ಷತೆ ನಿರ್ವಹಿಸಿ ವೆಚ್ಚ ಕಡಿಮೆ ಮಾಡಲಾಗುವುದು. ವಾಯುನೆಲೆ ದಕ್ಷವಾಗಿ ಬಳಕೆ ಮಾಡುವುದರ ಜೊತೆಗೆ, ಪಿಪಿಪಿ ಮೂಲಕ ಮತ್ತಷ್ಟು ವಿಶ್ವದರ್ಜೆಯ ವಿಮಾನನಿಲ್ದಾಣ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
12 ವಿಮಾನ ನಿಲ್ದಾಣದಲ್ಲಿ ಖಾಸಗಿ ಹೂಡಿಕೆಯಿಂದ 13 ಸಾವಿರ ಕೋಟಿ ನಿರೀಕ್ಷೆ ಮಾಡಲಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ವಿಮಾನ ನಿರ್ವಹಣಾ ವೆಚ್ಚವು ಹೆಚ್ಚಾಗುವುದು ಎಂದು ತಿಳಿಸಲಾಗಿದೆ. ವಿಮಾನಗಳ ನಿರ್ವಹಣೆ, ದುರಸ್ಥಿಗೆ 800 ಕೋಟಿಯಿಂದ 2,000 ಕೋಟಿಗೆ ಏರಿಕೆಯಾಗುವುದು. ಏರ್ಕ್ರಾಫ್ಟ್ಗಳು ದುರಸ್ಥಿಗೆ ಭಾರತವು ಜಾಗತಿಕ ಹಬ್ ಆಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದಕ್ಕಾಗಿ ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ಮುಂಗಡವಾಗಿ 2,300 ಕೋಟಿ ರುಪಾಯಿ ಸಿಗಲಿದೆ.
ವಿದ್ಯುತ್ ವಲಯದಲ್ಲಿ ಸುಧಾರಣೆ
ಕೇಂದ್ರಾಡಳಿತ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಕಂಪನಿಗಳ ಖಾಸಗೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಡಿಸ್ಕಾಂಗಳ ಅಸಮರ್ಥತೆಯಿಂದ ಗ್ರಾಹಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಿದ್ದು, ಡಿಸ್ಕಾಂಗಳಿಂದ ತೊಂದರೆಯಾದರೆ ಕಂಪನಿಗಳಿಗೆ ದಂಡ ವಿಧಿಸಲಾಗುವುದು. ಡಿಸ್ಕಾಂಗಳು ನಿಗದಿತ ವಿದ್ಯುತ್ ಪೂರೈಸದಿದ್ರೆ, ಲೋಡ್ ಶೆಡ್ಡಿಂಗ್ ಮಾಡಿದ್ರೆ ದಂಡ. ಇದಕ್ಕಾಗಿ ಸ್ಮಾರ್ಟ್ ಪ್ರೀಪೇಯ್ಡ್ ಮೀಟರ್ ಅಳವಡಿಸಲು ಚಿಂತನೆ ಮಾಡಲಾಗಿದೆ. ವಿದ್ಯುತ್ ಸಬ್ಸಿಡಿಯನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲು ಕ್ರಮಕ್ಕೆ ಮುಂದಾಗಿದೆ.


Click it and Unblock the Notifications