ದೇಶದ ಆರ್ಥಿಕತೆ ಪ್ರಗತಿ ಹಿಂಜರಿತದಲ್ಲಿ ಸಿಲುಕಿಕೊಂಡಿದೆ: ರಘುರಾಂ ರಾಜನ್
ದೇಶದ ಆರ್ಥಿಕತೆಯ ಪ್ರಗತಿಯು ಹಿಂಜರಿತದಲ್ಲಿ ಸಿಲುಕಿಕೊಂಡಿದೆ. ಗ್ರಾಮೀಣ ಪ್ರದೇಶಗಳು ತೀವ್ರ ಸಂಕಷ್ಟದಲ್ಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ರಘುರಾಂ ರಾಜನ್ ಹೇಳಿದ್ದಾರೆ
ಪ್ರಧಾನಿ ಕಚೇರಿಯಲ್ಲಿ(ಪಿಎಂಒ) ಅತಿಯಾದ ಅಧಿಕಾರ ಕೇಂದ್ರಿಕರಣ ಮತ್ತು ಅಧಿಕಾರವೇ ಇಲ್ಲದ ಸಚಿವರು ಅರ್ಥ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದಾರೆ ಎಂದು ಅವರು ಇಂಡಿಯಾ ಟುಡೆಗೆ ನಿಯತಕಾಲಿಕದಲ್ಲಿ ಬರೆದ ಲೇಖನದಲ್ಲಿ ತಿಳಿಸಿದ್ದಾರೆ.
'ದೇಶದ ಆರ್ಥಿಕತೆಯು ಮಂದಗತಿಯ ಬೆಳವಣಿಗೆ ಕಾಣುತ್ತಿರುವುದಕ್ಕೆ ಕೇಂದ್ರ ಸರ್ಕಾರದಲ್ಲಿನ ಕೇಂದ್ರಿಕೃತ ವ್ಯವಸ್ಥೆಯನ್ನು ಅರ್ಥೈಸಿಕೊಳ್ಳಬೇಕು. ಅಧಿಕಾರವು ಕೇವಲ ಪ್ರಧಾನಿ ಸುತ್ತ ಇರುವ ಕೆಲವೇ ಕೆಲವರಲ್ಲಿ ಕೇಂದ್ರಿಕೃತಗೊಂಡಿದೆ. ಪ್ರಧಾನಿ ಕಚೇರಿಯಲ್ಲಿಯೇ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ವ್ಯವಸ್ಥೆ ಪಕ್ಷದ ರಾಜಕೀಯ ಮತ್ತು ಸಾಮಾಜಿಕ ಕಾರ್ಯಸೂಚಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಇದು ಆರ್ಥಿಕ ವಿದ್ಯಮಾನಗಳಿಗೆ ಸರಿ ಹೊಂದುವುದಿಲ್ಲ' ಎಂದು ರಘುರಾಂ ರಾಜನ್ ಹೇಳಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಕುಂಠಿತ ಆರ್ಥಿಕತೆಯ ಸಮಸ್ಯೆಯ ತೀವ್ರತೆಯನ್ನು ಒಪ್ಪಿಕೊಳ್ಳಬೇಕಾಗಿದೆ. ಆರ್ಥಿಕ ವಿದ್ಯಮಾನಗಳನ್ನು ಸಮರ್ಥವಾಗಿ ನಿರ್ವಹಿಸದ ಸರ್ಕಾರದ ವಿರುದ್ಧದ ಟೀಕೆಗಳನ್ನು ರಾಜಕೀಯ ಪ್ರೇರಿತ ಎಂದು ಬ್ರ್ಯಾಂಡ್ ಮಾಡುವುದನ್ನು ನಿಲ್ಲಿಸಬೇಕು. ಪ್ರಧಾನಿ ಕಚೇರಿ ಇತರೆ ಸಂಗತ್ತಿಗಳತ್ತ ಗಮನ ಹರಿಸಿದಾಗ ಸುಧಾರಣೆಗೆ ಆದ್ಯತೆ ಸಿಗದೆ ಹೋಗುತ್ತದೆ' ಎಂದಿದ್ದಾರೆ.