ರೈಲು ತಡವಾದರೆ 100ರಿಂದ 250 ರುಪಾಯಿ ಪರಿಹಾರ, 25 ಲಕ್ಷದ ಇನ್ಷೂರೆನ್ಸ್
ಭಾರತೀಯ ರೈಲ್ವೆಯ ಬಹು ನಿರೀಕ್ಷಿತ ಮುಂಬೈ- ಅಹ್ಮದಾಬಾದ್ ಮಧ್ಯದ ತೇಜಸ್ ಎಕ್ಸ್ ಪ್ರೆಸ್ ಜನವರಿ ಹದಿನೇಳರಿಂದ ವಾಣಿಜ್ಯ ಕಾರ್ಯಾಚರಣೆ ಆರಂಭಿಸಲಿದೆ. ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್ ಸಿಟಿಸಿ) ಪೂರ್ತಿಯಾಗಿ ನಡೆಸುವ ದೇಶದ ಎರಡನೇ ರೈಲು ಇದು. ಈ ರೈಲು ಮುಂಬೈ ಮತ್ತು ಅಹ್ಮದಾಬಾದ್ ಮಧ್ಯೆ ವಾರದಲ್ಲಿ ಆರು ದಿನ ಸಂಚರಿಸುತ್ತದೆ.
ಅಂದ ಹಾಗೆ, ಈ ರೈಲು ಪ್ರಯಾಣಕ್ಕೆ ದರ ನಿಗದಿಯೇ ವಿಭಿನ್ನವಾಗಿದೆ. ಹಬ್ಬದ ಸೀಸನ್ ನಲ್ಲೇ ಬೇರೆ, ಬೇಡಿಕೆ ಇರುವಾಗ- ಕಡಿಮೆ ಇರುವಾಗಲೇ ಬೇರೆ ದರ ಇರಲಿದೆ. ಒಂದು ವೇಳೆ ಮುಂಬೈ- ಅಹ್ಮದಾಬಾದ್ ತೇಜಸ್ ಎಕ್ಸ್ ಪ್ರೆಸ್ ತಡವಾದಲ್ಲಿ ಪ್ರಯಾಣಿಕರಿಗೆ ಪರಿಹಾರ ಹಣ ನೀಡಲು ನಿರ್ಧರಿಸಿದೆ.
ನೂರರಿಂದ ಇನ್ನೂರೈವತ್ತು ರುಪಾಯಿ ಪರಿಹಾರ
ತೇಜಸ್ ಎಕ್ಸ್ ಪ್ರೆಸ್ ಒಂದು ಗಂಟೆ ತಡವಾದಲ್ಲಿ ನೂರು ರುಪಾಯಿ ಪರಿಹಾರ ನೀಡಲಾಗುತ್ತದೆ. ಎರಡು ಗಂಟೆ ಮತ್ತು ಎರಡು ಗಂಟೆಗೂ ಹೆಚ್ಚು ಸಮಯ ತಡವಾದರೆ ಪ್ರಯಾಣಿಕರಿಗೆ ಇನ್ನೂರೈವತ್ತು ರುಪಾಯಿ ಸಿಗಲಿದೆ. ಇನ್ನು 'ತತ್ಕಾಲ್' ಟಿಕೆಟ್ ವ್ಯವಸ್ಥೆಯಂತೂ ಇರುವುದಿಲ್ಲ. ರೈಲು ತಡವಾದಲ್ಲಿ ಪ್ರಯಾಣಿಕರು ಇನ್ಷೂರೆನ್ಸ್ ಅನ್ನು ಆನ್ ಲೈನ್ ನಲ್ಲಿ ಕ್ಲೇಮ್ ಮಾಡಬಹುದು. ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿಯೂ ಕ್ಲೇಮ್ ಮಾಡಬಹುದು.
ಪ್ರಯಾಣಿಕರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ
ಇನ್ಷೂರೆನ್ಸ್ ಕ್ಲೇಮ್ ಮಾಡಲು ಪ್ರಯಾಣದ ಮಾಹಿತಿಯನ್ನು ನೀಡಬೇಕಾಗುತ್ತದೆ. ಎಷ್ಟು ಗಂಟೆ ತಡವಾಯಿತು, ಪಿಎನ್ ಆರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಇನ್ಷೂರೆನ್ಸ್ ಕಂಪೆನಿಯು ಪರಿಹಾರದ ಮೊತ್ತವನ್ನು ನೇರವಾಗಿ ಪ್ರಯಾಣಿಕರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ ಎಂದು ಐಆರ್ ಸಿಟಿಸಿ ತಿಳಿಸಿದೆ.
ಈಗಾಗಲೇ ಒಮ್ಮೆ ಪರಿಹಾರವನ್ನು ವಿತರಿಸಲಾಗಿದೆ
ಲಖನೌ- ದೆಹಲಿ ಮಧ್ಯದ ತೇಜಸ್ ಎಕ್ಸ್ ಪ್ರೆಸ್ ತಡವಾದಲ್ಲಿ ಪ್ರಯಾಣಿಕರಿಗೆ ಪರಿಹಾರ ನೀಡುವ ಪದ್ಧತಿಯನ್ನು ಐಆರ್ ಸಿಟಿಸಿ ಆರಂಭಿಸಿತು. ಕಳೆದ ಅಕ್ಟೋಬರ್ ಹತ್ತೊಂಬತ್ತನೇ ತಾರೀಕು ದೆಹಲಿ- ಲಖನೌ ರೈಲು ಮೂರು ಗಂಟೆಗೂ ಹೆಚ್ಚು ಸಮಯ ತಡವಾಯಿತು. ಅದಕ್ಕಾಗಿ ಪ್ರಯಾಣಿಕರಿಗೆ ಐಆರ್ ಸಿಟಿಸಿಯಿಂದ ಒಂದೂವರೆ ಲಕ್ಷಕ್ಕೂ ಹೆಚ್ಚು ಪರಿಹಾರ ವಿತರಿಸಲಾಯಿತು ಎಂದು ವರದಿ ಆಗಿದೆ.
ಇಪ್ಪತ್ತೈದು ಲಕ್ಷದ ಉಚಿತ ಇನ್ಷೂರೆನ್ಸ್
ಇದೇ ಮೊದಲ ಬಾರಿಗೆ, ಮುಂಬೈ- ಆಹ್ಮದಾಬಾದ್ ಮಧ್ಯೆ ಸಂಚರಿಸುವ ಪ್ರಯಾಣಿಕರಿಗೆ ಐಆರ್ ಸಿಟಿಸಿ ಇಪ್ಪತ್ತೈದು ಲಕ್ಷದ ಉಚಿತ ಇನ್ಷೂರೆನ್ಸ್ ನೀಡುತ್ತಿದೆ. ಇದರಲ್ಲಿ ಪ್ರಯಾಣದ ವೇಳೆ ಕಳುವು ಅಥವಾ ದರೋಡೆ ಆದಲ್ಲಿ ಒಂದು ಲಕ್ಷ ರುಪಾಯಿ ಕವರ್ ಆಗುತ್ತದೆ. ಪ್ರಯಾಣಿಕರ ಬೇಡಿಕೆ ಅನುಗುಣವಾಗಿ ಐಆರ್ ಸಿಟಿಸಿಯಿಂದ ಟ್ಯಾಕ್ಸಿ ಬಾಡಿಗೆ ಮತ್ತು ಹೋಟೆಲ್ ಬುಕ್ಕಿಂಗ್ ಮಾಡಿಕೊಡಲಾಗುತ್ತದೆ. ಮುಂಬೈ ಮೂಲದ ಲಿಬರ್ಟಿ ಜನರಲ್ ಇನ್ಷೂರೆನ್ಸ್ ಕಂಪೆನಿ ಕೂಡ ಮುಂಬೈ- ಅಹ್ಮದಾಬಾದ್ ತೇಜಸ್ ಎಕ್ಸ್ ಪ್ರೆಸ್ ಗೆ ಕಾಂಪ್ಲಿಮೆಂಟರಿ ವಿಮೆ ಒದಗಿಸುತ್ತಿದೆ.