ಈರುಳ್ಳಿ ಖರೀದಿಗೆ 'ಸಾಲ'; ಆಧಾರ್ ಕಾರ್ಡ್ 'ಅಡಮಾನ'
ಈರುಳ್ಳಿ ಬೆಲೆ ಅಟ್ಟಕ್ಕೆ, ಅದಕ್ಕೂ ಮೇಲಕ್ಕೆ, ಗಗನಕ್ಕೆ... ಹೀಗೆ ದಿನವೂ ಸುದ್ದಿ ನೋಡಿ, ಓದಿ ರೋಸತ್ತಿರುವವರಿಗೆ ಈ ಪ್ರತಿಭಟನೆ ಸುದ್ದಿ ವಿಭಿನ್ನ ಅನ್ನಿಸಬಹುದು. ಜತೆಗೆ ಎಂಥ ವಿಶಿಷ್ಟ ಆಲೋಚನೆ ಅಂತಲೂ ಅನಿಸಬಹುದು. ಸಮಾಜವಾದಿ ಪಕ್ಷದ ಕಾರ್ಯಕರ್ತರು ವಾರಾಣಸಿಯಲ್ಲಿ (ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಲೋಕಸಭೆ ಕ್ಷೇತ್ರ) ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿದ್ದಾರೆ.
ಈರುಳ್ಳಿಯನ್ನು ಸಾಲದ ಆಧಾರದಲ್ಲಿ ನೀಡಿದ್ದಾರೆ. ಜನರು ಈರುಳ್ಳಿಯನ್ನು ಸಾಲವಾಗಿ ಪಡೆಯುವುದಕ್ಕೆ ತಮ್ಮ ಆಧಾರ್ ಅನ್ನು ಭದ್ರತೆಯಾಗಿ ಅಡಮಾನ ಇಡಬಹುದು. "ಏರುತ್ತಿರುವ ಈರುಳ್ಳಿ ಬೆಲೆಯ ವಿರುದ್ಧ ಪ್ರತಿಭಟನೆ ನಡೆಸಲು ಹೀಗೆ ಮಾಡಿದ್ದೇವೆ. ಆಧಾರ್ ಅಥವಾ ಬೆಳ್ಳಿ ಆಭರಣವನ್ನು ಅಡಮಾನವಾಗಿ ಇಟ್ಟುಕೊಂಡು ಈರುಳ್ಳಿ ಮಾರುತ್ತಿದ್ದೇವೆ. ಕೆಲವು ಮಳಿಗೆಗಳಲ್ಲಿ ಲಾಕರ್ ಗಳಲ್ಲಿ ಈರುಳ್ಳಿಗಳನ್ನು ಇಡಲಾಗಿದೆ" ಎಂದು ಪ್ರತಿಭಟನಾನಿರತರು ಹೇಳಿದ್ದಾರೆ.
ಲಖನೌದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೇಜಿ ಈರುಳ್ಳಿಗೆ ನಲವತ್ತು ರುಪಾಯಿಯಂತೆ ಮಾರಾಟ ಮಾಡಿದ್ದಾರೆ. ಉತ್ತರಪ್ರದೇಶದ ಹಲವು ಜಿಲ್ಲೆಗಳಲ್ಲಿ ಒಂದು ಕೇಜಿ ಈರುಳ್ಳಿ ಬೆಲೆಯು ನೂರು ರುಪಾಯಿ ದಾಟಿದೆ. ಒಂದು ಲಕ್ಷ ಮೆಟ್ರಿಕ್ ಟನ್ ಗೂ ಹೆಚ್ಚು ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಉತ್ತರಪ್ರದೇಶ ಸರ್ಕಾರ ತೀರ್ಮಾನ ಮಾಡಿದೆ. ಖರ್ಚಿನ ಪ್ರಯಾರಿಟಿ ಹೇಗಿರಬೇಕು?