ಎರಡನೇ ಹಂತದ ಮೆಟ್ರೋ ಯೋಜನೆಗೆ ಹಣಕಾಸಿನ ಕೊರತೆ; ಬಾಂಡ್ ವಿತರಣೆಗೆ ಚಿಂತನೆ
ಹಣಕಾಸಿನ ಕೊರತೆ ಎದುರಿಸುತ್ತಿರುವ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ ಸಿಎಲ್) ಇದೀಗ ಹೊಸದಾಗಿ ಬಾಂಡ್ ವಿತರಿಸುವ ಮೂಲಕ ಹಣ ಸಂಗ್ರಹಿಸಲು ಯೋಜನೆ ಹಾಕಿಕೊಂಡಿದೆ. ಸಾರ್ವಜನಿಕರ ಮೂಲಕ ಹಣ ಸಂಗ್ರಹಿಸಿ, ಎರಡನೇ ಹಂತದ ಎಪ್ಪತ್ತೆರಡು ಕಿ.ಮೀ. ವ್ಯಾಪ್ತಿಯ ಮೆಟ್ರೋ ಯೋಜನೆ ಪೂರ್ಣಗೊಳಿಸುವ ಚಿಂತನೆಯಲ್ಲಿ ಇದೆ.
ಆದರೂ ಈಗಿನ ಪ್ರಸ್ತಾವಿತ ಯೋಜನೆಯಿಂದ ದೊಡ್ಡ ಮಟ್ಟದಲ್ಲಿ ಹಣಕಾಸಿನ ಅನುಕೂಲ ಆಗಲಿಕ್ಕಿಲ್ಲ. ಏಕೆಂದರೆ, ಪ್ರಸ್ತಾವಿತ ಬಜೆಟ್ 16% ಹೆಚ್ಚಾಗಿ, 30,695 ಕೋಟಿ ರುಪಾಯಿ ತಲುಪಿದೆ. ಬಿಎಂಆರ್ ಸಿಎಲ್ ನ ವೆಬ್ ಸೈಟ್ ನಲ್ಲಿ ಲಭ್ಯವಿರುವ ವಾರ್ಷಿಕ ವರದಿಯಂತೆ, ಬಾಂಡ್ ವಿತರಿಸುವ ಮೂಲಕ ಹಣ ಸಂಗ್ರಹಕ್ಕೆ ಕಂಪೆನಿ ಯೋಚಿಸಿದೆ.
"ಎರಡನೇ ಹಂತದ ಯೋಜನೆ ಪೂರ್ಣಗೊಳಿಸಲು ಕಂಪೆನಿಯು ಇತರ ಆಯ್ಕೆಗಳನ್ನೂ ಪರಿಶೀಲಿಸುತ್ತಿದೆ. ಅತ್ಯಾಕರ್ಷಕ ಬಡ್ಡಿ ದರದಲ್ಲಿ ಸೆಕ್ಯೂರ್ಡ್, ನಾನ್ ಕನ್ವರ್ಟಬಲ್, ಡಿಬೆಂಚರ್ ಗಳ ಸರಣಿ ವಿತರಣೆ ಮೂಲಕ ಹಣ ಸಂಗ್ರಹಿಸಲು ಸಹ ಯೋಜನೆ ಇದೆ" ಎಂದು ಬಿಎಂಆರ್ ಸಿಎಲ್ ಅಧ್ಯಕ್ಷ ದುರ್ಗಾಶಂಕರ್ ಶರ್ಮಾ ಹೇಳಿರುವುದಾಗಿ ವರದಿ ಆಗಿದೆ.
ಎರಡನೇ ಹಂತದ ಯೋಜನೆಗೆ ಬಜೆಟ್ 26,405.14 ಕೋಟಿ ನಿಗದಿ ಮಾಡಲಾಗಿತ್ತು. ಆ ನಂತರ ಈ ವರ್ಷದ ಮಾರ್ಚ್ ನಲ್ಲಿ 30,695 ಕೋಟಿಗೆ ಪರಿಷ್ಕೃತಗೊಳಿಸಲಾಯಿತು. ಭೂಸ್ವಾಧೀನಕ್ಕೆ ಹೆಚ್ಚಿನ ವೆಚ್ಚ ತಗುಲುವ ಕಾರಣಕ್ಕೆ ಈ ರೀತಿ ಬೆಲೆ ಏರಿಕೆ ಆಯಿತು. ಇನ್ನು ನಿರ್ಮಾಣ ವೆಚ್ಚವೂ ಹೆಚ್ಚಾಗಿದ್ದು, ಎರಡನೇ ಹಂತದ ಯೋಜನೆಗೆ ಎಷ್ಟು ಮೊತ್ತ ಬೇಕಾಗಬಹುದು ಎಂಬುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
ವಿಸ್ತೃತ ಯೋಜನಾ ವರದಿ (ಡಿಪಿಆರ್) ಪ್ರಕಾರ, ನಮ್ಮ ಮೆಟ್ರೋದಿಂದ 12,141 ಕೋಟಿ ರುಪಾಯಿ ಸಂಗ್ರಹಿಸುವ ಗುರಿ ಇದೆ. ಇದು ಬಹಳ ಮುಖ್ಯವಾದ ಮೊತ್ತ ಏಕೆಂದರೆ, ಒಂದು ವೇಳೆ ಮೆಟ್ರೋ ಬಳಿ ಹಣ ಬರಿದಾಗುವ ಮುನ್ನ ಇಷ್ಟು ಬೇಕೇಬೇಕು. ವಿವಿಧ ಸಂಸ್ಥೆಗಳ ಮೂಲಕ 7,914 ಕೋಟಿ ಈವರೆಗೆ ಸಂಗ್ರಹಿಸಲಾಗಿದೆ.
ಬಿಎಂಆರ್ ಸಿಎಲ್ ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಹಣಕಾಸಿನ ಅನುದಾನ ದೊರೆಯುತ್ತದೆ. ಬಾಂಡ್ ವಿತರಿಸುವ ಮೂಲಕ ಎಷ್ಟು ಹಣ ಸಂಗ್ರಹಿಸಲು ಉದ್ದೇಶಿಸಿದೆ ಎಂಬುದನ್ನು ತಿಳಿಸಿಲ್ಲ್. 13,500 ಕೋಟಿ ಮೊತ್ತದ ಮೊದಲ ಹಂತದ ಯೋಜನೆ ಅನುಷ್ಠಾನದ ವೇಳೆಯಲ್ಲಿ ನಮ್ಮ ಮೆಟ್ರೋ ಅಧಿಕಾರಿಗಳು ಬಾಂಡ್ ವಿತರಿಸುವ ಮೂಲಕ 300 ಕೋಟಿ ಸಂಗ್ರಹಿಸಿತ್ತು. 2014ರ ವೇಳೆಯಲ್ಲಿ 8.79 ಪರ್ಸೆಂಟ್ ಬಡ್ಡಿ ದರ ನೀಡಿತ್ತು.