ದೇಶದ ಶ್ರೀಮಂತ ದೇಗುಲದ ನಿರ್ವಹಣೆ ಬಗ್ಗೆ ಸುಪ್ರೀಂ ಮಹತ್ವದ ತೀರ್ಪು
ದೇಶದ ಶ್ರೀಮಂತ ದೇಗುಲಗಳಲ್ಲಿ ಒಂದಾದ ಕೇರಳದ ರಾಜಧಾನಿ ತಿರುವನಂತಪುರದ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಆಡಳಿತದಲ್ಲಿ ತಿರುವಾಂಕೂರು ರಾಜ ಮನೆತನದ ಹಕ್ಕನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ದೇವಾಲಯದ ಆಡಳಿತಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಿದೆ.
ಪದ್ಮನಾಭಸ್ವಾಮಿ ದೇವಾಲಯದಲ್ಲಿ ಹಣಕಾಸು ಅವ್ಯವಹಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಆಡಳಿತ ಮತ್ತು ನಿರ್ವಹಣೆ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ಬಾಕಿ ಇತ್ತು. ಕೇರಳದ ತಿರುವನಂತಪುರದಲ್ಲಿನ ಈ ದೇವಾಲಯದ ಆಡಳಿತವನ್ನು ತಿರುವಾಂಕೂರ್ ರಾಜ ಮನೆತನದವರು ಸ್ವಾತಂತ್ರ್ಯಪೂರ್ವದಿಂದಲೂ ನೋಡಿಕೊಳ್ಳುತ್ತಿದ್ದರು.
ಆ ನಂತರ ಟ್ರಸ್ಟ್ ವೊಂದನ್ನು ನೇಮಿಸಲಾಯಿತು. ಆದರೂ ಇದೇ ರಾಜಮನೆತನದ ಹಿಡಿತದಲ್ಲಿ ದೇವಾಲಯ ಇತ್ತು. ಅಂದ ಹಾಗೆ ಪದ್ಮನಾಭ (ವಿಷ್ಣು) ಈ ರಾಜ ಮನೆತನ ನಡೆದುಕೊಳ್ಳುವ ದೇವರು. ಜನವರಿ 31, 2011ರಂದು ಕೇರಳ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಯು.ಯು. ಲಲಿತ್ ಮತ್ತು ಇಂದು ಮಲ್ಹೋತ್ರ ಅವರನ್ನು ಒಳಗೊಂಡ ಪೀಠವು ಕಳೆದ ವರ್ಷದ ಏಪ್ರಿಲ್ 10ನೇ ತಾರೀಕಿನಂದು ತೀರ್ಪು ಕಾಯ್ದಿರಿಸಿತ್ತು.
ಕೇರಳ ಹೈಕೋರ್ಟ್ ಸೂಚನೆ ನೀಡಿ, ಒಂದು ಟ್ರಸ್ಟ್ ಅಥವಾ ಸಂಸ್ಥೆ ರೂಪಿಸಿ, ದೇವಾಲಯ- ಆಸ್ತಿ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ತಿಳಿಸಿತ್ತು. ಪೂಜೆಯನ್ನು ಸಾಂಪ್ರದಾಯಿಕ ಪದ್ಧತಿಯಂತೆ ಮುಂದುವರಿಸಿಕೊಂಡು ಹೋಗುವಂತೆ ಆದೇಶ ನೀಡಿತ್ತು. ಆ ನಂತರ ಮೇ 2, 2011ರಂದು ಹೈ ಕೋರ್ಟ್ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.
ಜತೆಗೆ ದೇವಾಲಯಕ್ಕೆ ಸೇರಿದ ಆಭರಣ, ಬೆಲೆ ಬಾಳುವ ಒಡವೆಗಳು ಮತ್ತಿತರ ವಸ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆಯೂ ನಿರ್ದೇಶನ ಮಾಡಿತ್ತು.