ತಿರುಪತಿ ತಿರುಮಲ ದೇಗುಲದ ದಿನದ ಗಳಿಕೆ ಎಷ್ಟು ಕೋಟಿ ಗೊತ್ತೆ?
ಭಾರತದಲ್ಲೇ ಅತ್ಯಂತ ಶ್ರೀಮಂತ ಹಿಂದೂ ದೇವಾಲಯ, ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಾಲಯದ ಆದಾಯದ ಬಗ್ಗೆ ಒಂದಿಷ್ಟು ಆಸಕ್ತಿಕರವಾದ ಡೀಟೇಲ್ಸ್ ಇಲ್ಲಿದೆ. ಕಳೆದ ವರ್ಷ, 2019ರಲ್ಲಿ ಭಕ್ತ ಮಹಾಜನರು ಶ್ರೀವಾರಿ ಹುಂಡಿಗೆ ಪ್ರತಿ ಸೆಕೆಂಡ್ ಗೆ ರು. 368.38 ಅನ್ನು ದೇಣಿಗೆ ಕೊಟ್ಟಿದ್ದಾರೆ. ಪ್ರತಿ ವರ್ಷ ಹತ್ತಾರು ಲಕ್ಷ ಮಂದಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ನಗದು, ಬೆಲೆ ಬಾಳುವ ವಸ್ತುಗಳನ್ನು ದೇವರಿಗೆ ಅರ್ಪಣೆ ಮಾಡುತ್ತಾರೆ. ಅದರಲ್ಲಿ ಬೆಳ್ಳಿ, ಬಂಗಾರ ಎಲ್ಲವೂ ಒಳಗೊಂಡಿರುತ್ತದೆ. ಶತಮಾನಗಳಿಂದಲೂ ವೆಂಕಟೇಶ್ವರ ಸ್ವಾಮಿಗೆ ಹರಕೆ ಹೊರುವುದು ಹಾಗೂ ಅದನ್ನು ಪೂರೈಸುವುದು ನಡೆದುಕೊಂಡು ಬಂದಿದೆ. 2019ನೇ ಇಸವಿಯ ಜನವರಿಯಿಂದ ಡಿಸೆಂಬರ್ ವರೆಗೆ ಭಕ್ತಾದಿಗಳು 1,161.74 ಕೋಟಿ ರುಪಾಯಿಯನ್ನು ಭಕ್ತರು ನೀಡಿದ್ದಾರೆ.
ತಿರುಪತಿಯಿಂದ ಪುರಿ ತನಕ ಭಾರತದ ಟಾಪ್ 5 ಶ್ರೀಮಂತ ದೇವಾಲಯಗಳು
2018ನೇ ಇಸವಿಯಲ್ಲಿ ತಿರುಪತಿ ತಿರುಮಲ ದೇವಾಲಯಕ್ಕೆ 1,066.98 ಕೋಟಿ ರುಪಾಯಿ ಆದಾಯ ಬಂದಿದೆ. 2018ಕ್ಕೆ ಹೋಲಿಕೆ ಮಾಡಿದರೆ 2019ರಲ್ಲಿ ಹುಂಡಿ ಸಂಗ್ರಹದ ಮೊತ್ತ 6 ಪರ್ಸೆಂಟ್ ಅಂದರೆ, 95.25 ಕೋಟಿ ರುಪಾಯಿ ಹೆಚ್ಚಳವಾಗಿದೆ. 2019ನೇ ಇಸವಿಯಲ್ಲಿ ಹುಂಡಿಗೆ ಬಿದ್ದ ಸರಾಸರಿ ಮೊತ್ತ ಪ್ರತಿ ನಿಮಿಷಕ್ಕೆ 22,103 ರುಪಾಯಿ. 2018ರಲ್ಲಿ ಪ್ರತಿ ನಿಮಿಷಕ್ಕೆ 20,290.71 ರುಪಾಯಿ ಸಂಗ್ರಹ ಆಗಿತ್ತು.
ಹುಂಡಿ ಮೂಲಕ ಸಂಗ್ರಹ ಆಗುವ ಹಣವನ್ನು ಹೊರತುಪಡಿಸಿ, ಎಫ್ ಡಿ ಮೇಲೆ ಬರುವ ಬಡ್ಡಿ ಹಣ, ಪ್ರಸಾದದ ಮಾರಾಟದಿಂದ ಬರುವ ಮೊತ್ತ, ದರ್ಶನ ಟಿಕೆಟ್ ಮಾರಾಟ, ವಾಸ್ತವ್ಯಕ್ಕೆ ಪಾವತಿಸುವ ಹಣ, ಭೋಗ್ಯ ಹಾಗೂ ಬಾಡಿಗೆ ಮೂಲಕವೂ ಆದಾಯ ಬರುತ್ತದೆ. ಎಫ್ ಡಿ ಮೇಲಿನ ಬಡ್ಡಿ 857.28 ಕೋಟಿ ರುಪಾಯಿ, ಪ್ರಸಾದದ ಮಾರಾಟದಿಂದ 330 ಕೋಟಿ, ದರ್ಶನ ಟಿಕೆಟ್ ನಿಂದ 233 ಕೋಟಿ ರುಪಾಯಿ ಹಣ 2019-20ನೇ ಆರ್ಥಿ ವರ್ಷದಲ್ಲಿ ಹಣ ಸಂಗ್ರಹ ಆಗುವ ಅಂದಾಜು ಮಾಡಲಾಗಿದೆ.
ಇನ್ನು ಅನ್ನ ಪ್ರಸಾದದ ವಿಚಾರಕ್ಕೆ ಬಂದರೆ ದೇವಸ್ಥಾನದಿಂದ ಪ್ರತಿ ನಿಮಿಷಕ್ಕೆ ಸರಾಸರಿ 122.85 ಮಂದಿಗೆ ಆಹಾರ ಒದಗಿಸಲಾಗಿದೆ. 2019ರಲ್ಲಿ 6.45 ಕೋಟಿ ಮಂದಿ ಭಕ್ತರಿಗೆ ಅನ್ನ ಪ್ರಸಾದವನ್ನು ಪೂರೈಸಲಾಗಿದೆ.