2020ರ ಕೇಂದ್ರ ಬಜೆಟ್ ತಯಾರಿ ಹಿಂದಿದೆ ಈ 'ಪಂಚ' ಅಧಿಕಾರಿಗಳ ಶ್ರಮ
ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2020 ಮಂಡಿಸಲಿದ್ದಾರೆ. ಆರ್ಥಿಕ ಹಿಂಜರಿತವನ್ನು ತಗ್ಗಿಸಲು ಮೋದಿ ಸರ್ಕಾರವು ಟಾನಿಕ್ ನೀಡಲು ಸಿದ್ಧತೆ ಮಾಡಿಕೊಂಡಿದೆ. ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯ ಬೆಳವಣಿಗೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮುಂಬರುವ ಬಜೆಟ್ ತಯಾರಿಕೆಯಲ್ಲಿ ಏನೆಲ್ಲಾ ಕಾರ್ಯ ತಂತ್ರಗಳನ್ನು ಹೆಣೆದುಕೊಂಡಿದೆ ಎಂಬುದು ಜನಸಾಮಾನ್ಯರಲ್ಲಿ ತೀವ್ರ ಆಸಕ್ತಿ ಮೂಡಿಸಿದೆ.
ಈಗಾಗಲೇ ಪ್ರಧಾನಿ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವಾರು ಮಂದಿ ಅರ್ಥಶಾಸ್ತ್ರಜ್ಞರು ಮತ್ತು ಉದ್ಯಮ ಮುಖಂಡರು ಹಾಗೂ ರೈತರ ಗುಂಪುಗಳೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ. ಬಿಜೆಪಿ ಸರ್ಕಾರದ ಎರಡನೇ ಅವಧಿಯ ಎರಡನೇ ಬಜೆಟ್ ಮಂಡಿಸಲು ನಿರ್ಮಲಾ ಸೀತಾರಾಮನ್ ಸಿದ್ಧತೆ ನಡೆಸುತ್ತಿದ್ದು, ಈ ಬಜೆಟ್ ರೂಪಿಸಲು ಪ್ರಮುಖವಾಗಿ ಈ ಐದು ಅಧಿಕಾರಿಗಳ ಶ್ರಮ ಬಹಳಷ್ಟಿದೆ.
ಬಜೆಟ್ಗೆ ಸಂಬಂಧಪಟ್ಟಂತೆ ಆದಾಯ ಮತ್ತು ಖರ್ಚು ಯೋಜನೆಯನ್ನು ರೂಪಿಸಲು ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವ ಸರ್ಕಾರದ ಐದು ಪ್ರಮುಖ ಅಧಿಕಾರಿಗಳ ಪರಿಚಯ ಮಾಡುವ ಪ್ರಯತ್ನ ಈ ಲೇಖನದಲ್ಲಿದೆ ಓದಿ.
ರಾಜೀವ್ ಕುಮಾರ್, ಹಣಕಾಸು ಕಾರ್ಯದರ್ಶಿ
ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿ ರಾಜೀವ್ ಕುಮಾರ್ ಅವರು ಜಾರ್ಖಂಡ್ನ ಕೇಡರ್ನ ೧೯೮೪ನೇ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದಾರೆ. ಬ್ಯಾಂಕಿಂಗ್ ಸುಧಾರಣೆಗಳಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಇವರ ಅಡಿಯಲ್ಲಿ ವಿತ್ತ ಸಚಿವಾಲಯದ ಆರ್ಥಿಕ ವ್ಯವಹಾರಗಳು, ಆದಾಯ, ಖರ್ಚು, ಮತ್ತು ಸಾರ್ವಜನಿಕ ಸ್ವತ್ತುಗಳ ನಿರ್ವಹಣೆ ವಿಭಾಗಗಳು ಕಾರ್ಯ ನಿರ್ವಹಿಸುತ್ತವೆ.
ಸರ್ಕಾರಿ ಬ್ಯಾಂಕುಗಳ ವಿಲೀನಗೊಳಿಸುವ ಯೋಜನೆ ಮತ್ತು ವಸೂಲಾಗದ ಸಾಲಗಳಿಂದ (ಎನ್ಪಿಎ) ದಿಕ್ಕೆಟ್ಟಿರುವ ಬ್ಯಾಂಕುಗಳಿಗೆ ಮರುಬಂಡವಾಳ ತುಂಬುವ ಮೂಲಕ ಹೊಸ ಜೀವ ಕೊಟ್ಟವರಾಗಿದ್ದಾರೆ. ಸದ್ಯ ತುಂಬಾ ಸಂಕಷ್ಟದಲ್ಲಿರುವ ಬ್ಯಾಂಕುಗಳ ಪುನಶ್ಚೇತನಕ್ಕೆ ಬಜೆಟ್ನಲ್ಲಿ ರಾಜೀವ್ ಕುಮಾರ್ ಏನು ಮಾಡಿರಬಹುದು ಎಂದು ನಿರೀಕ್ಷೆ ಹೆಚ್ಚಿದೆ.
ಜೊತೆಗೆ ಬ್ಯಾಂಕುಗಳು ಸಾಲ ನೀಡುವ ವ್ಯವಸ್ಥೆಯಲ್ಲಿ ಸುಧಾರಣೆ ತರುವುದರ ಜೊತೆಗೆ ಆರ್ಥಿಕತೆ ಪುನಶ್ಚೇತನಕ್ಕೆ ಹೊಸ ಹಾದಿ ಹುಡುಕುವ ಪ್ರಯತ್ನ ಇವರದ್ದಾಗಿದೆ.
ಅತನು ಚಕ್ರವರ್ತಿ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ
ಜುಲೈನಲ್ಲಿ ಆರ್ಥಿಕ ವ್ಯವಹಾರಗಳ ವಿಭಾಗದ ಉಸ್ತುವಾರಿ ವಹಿಸಿಕೊಂಡ ಸರ್ಕಾರಿ-ಸ್ವತ್ತುಗಳ ಮಾರಾಟ ತಜ್ಞ ಅತನು ಚಕ್ರವರ್ತಿ ಕೂಡ ಬಜೆಟ್ ಹಿಂದೆ ತೆರೆಮರೆಯಲ್ಲಿ ಕೆಲಸ ಮಾಡುವ ಐವರು ಅಗ್ರ ಅಧಿಕಾರಿಗಳಲ್ಲಿ ಒಬ್ಬರು.
ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಿ, ಬಂಡವಾಳ ಸಂಚಯಿಸುವ ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಅತನು ಚಕ್ರವರ್ತಿ ಆರ್ಥಿಕ ವ್ಯವಹಾರಗಳ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುಜರಾತ್ ಕೇಡರ್ನ ೧೯೮೫ನೇ ಬ್ಯಾಚ್ ಐಎಎಸ್ ಅಧಿಕಾರಿ ಆಗಿರುವ ಇವರು ವಿದೇಶಗಳಲ್ಲಿ ಭಾರತದ ಬಾಂಡ್ಗಳನ್ನು ಮಾರಾಟ ಮಾಡುವ ಯೋಜನೆಯನ್ನು ಮುಂದೂಡುವ ನಿರ್ಧಾರ ಹಿಂದೆ ಇವರ ಸಲಹೆ ಇತ್ತು.
ಆದರೆ ಇವರ ಅವಧಿಯಲ್ಲಿ ಆರ್ಥಿಕ ಪ್ರಗತಿ 5 ಪರ್ಸೆಂಟ್ ಕುಸಿದಿದೆ ಎಂಬುದು ಮತ್ತೊಂದು ಪ್ರಮುಖ ಅಂಶ. ಕೇಂದ್ರ ಸರ್ಕಾರದ ಆದಾಯ ಮತ್ತು ವ್ಯಯ ನಡುವಣ ಅಂತರವನ್ನು ಸರಿದೂಗಿಸುವ ವಿಚಾರ ಮತ್ತು ಆರ್ಥಿಕ ಪುನಶ್ಚೇತನದ ವಿಷಯಗಳಲ್ಲಿ ಇವರ ಸಲಹೆಗಳು ನಿರ್ಣಾಯಕ ಪಾತ್ರ ವಹಿಸಲಿವೆ.
ಅತನು ನೇತೃತ್ವದ ಸಮಿತಿಯು ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕಾಗಿ ಮೂಲಸೌಕರ್ಯ ಯೋಜನೆಗಳಲ್ಲಿ 1 ಟ್ರಿಲಿಯನ್ (1 ಲಕ್ಷ ಕೋಟಿ) ಡಾಲರ್ ಮೊತ್ತದ ಹೂಡಿಕೆ ಕಾರ್ಯತಂತ್ರವನ್ನು ಸಿದ್ಧಪಡಿಸಿತು.
ಬಜೆಟ್ ವೇಳೆ ಬಳಸುವ ಬ್ರೀಫ್ಕೇಸ್ ಸಂಸ್ಕೃತಿ ಹೇಗೆ ಬಂತು ಗೊತ್ತಾ?
ಟಿ.ವಿ. ಸೋಮನಾಥನ್, ವ್ಯಯ ವಿಭಾಗದ ಕಾರ್ಯದರ್ಶಿ
ಹಣಕಾಸು ಸಚಿವಾಲಯಕ್ಕೆ ಇತ್ತೀಚಿಗಷ್ಟೇ ಎಂಟ್ರಿ ಕೊಟ್ಟಿರುವ ಟಿ.ವಿ ಸೋಮನಾಥನ್ ಅವರು 1987ನೇ ಬ್ಯಾಚ್ನ ತಮಿಳುನಾಡು ಕೇಡರ್ ಐಎಎಸ್ ಅಧಿಕಾರಿ. ಸರ್ಕಾರದ ಖರ್ಚುಗಳನ್ನು ಕಡಿತಗೊಳಿಸುವುದು ಮತ್ತು ಚಿಲ್ಲರೆ ಬೇಡಿಕೆ ಹೆಚ್ಚಾಗಲು ಸರ್ಕಾರದ ಖರ್ಚು ಹೇಗಿರಬೇಕು ಎಂದು ನಿರ್ಧರಿಸುವ ಮಹತ್ವದ ಹೊಣೆಗಾರಿಕೆ ಇವರ ಮೇಲಿದೆ.
ಈ ಹಿಂದೆ ಪ್ರಧಾನಿ ಮಂತ್ರಿ ಕಚೇರಿಯಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿರುವ ಇವರಿಗೆ ಮೋದಿಯವರು ಯಾವ ರೀತಿಯ ಬಜೆಟ್ ಬಯಸುತ್ತಿದ್ದಾರೆ ಎಂಬುದರ ಬಗ್ಗೆ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ.
ವಿತ್ತೀಯ ಕೊರತೆ ಎಂದರೇನು? ಸರ್ಕಾರ ಹೇಗೆ ನಿಭಾಯಿಸುತ್ತದೆ?
ಅಜಯ್ ಭೂಷಣ್ ಪಾಂಡೆ, ಕಂದಾಯ ಕಾರ್ಯದರ್ಶಿ
1984ನೇ ಬ್ಯಾಚ್ ಮಹಾರಾಷ್ಟ್ರ ಕೇಡರ್ನ ಐಎಎಸ್ ಅಧಿಕಾರಿಯಾಗಿರುವ ಅಜಯ್ ಭೂಷಣ್ ಪಾಂಡೆ ಸದ್ಯ ಹೆಚ್ಚು ಒತ್ತಡ ಅನುಭವಿಸುತ್ತಿರುವ ಅಧಿಕಾರಿ. ಏಕೆಂದರೆ ಪಾಂಡೆ ಅವರನ್ನು ಸಂಪನ್ಮೂಲಗಳನ್ನು ಸಂಗ್ರಹಿಸುವುದರೊಂದಿಗೆ ನಿಯೋಜಿಸಲಾಗಿದೆ. ಆರ್ಥಿಕತೆ ಮಂದಗತಿಯ ನಡುವೆ ಅಂದಾಜಕ್ಕಿಂತ ಕಡಿಮೆ ಆದಾಯವು ಸೃಷ್ಟಿಯಾಗಿರುವುದರಿಂದ ಈ ಅಧಿಕಾರಿ ಮೇಲೆ ಒತ್ತಡ ಹೆಚ್ಚಿದೆ.
ಕಳೆದ ವರ್ಷದ 20 ಬಿಲಿಯನ್ (20 ಶತಕೋಟಿ ಡಾಲರ್)ನಷ್ಟು ಕಾರ್ಪೋರೇಟ್ ತೆರಿಗೆಗಳನ್ನು ಕಡಿತಗೊಳಿಸಲಾಗಿತ್ತು. ಇದರಿಂದ ಉದ್ಯಮ ಚಟುವಟಿಕೆಗಳು ಚುರುಕಾದವು ಆದರೆ ಸರ್ಕಾರದ ಆದಾಯ ಹೆಚ್ಚಲು ಸಮಯ ಬೇಕಿದೆ. ನೇರ ತೆರಿಗೆ ವ್ಯಾಪ್ತಿಗೆ ಒಳಪಡದ ಕೆಲವು ವ್ಯವಹಾರಗಳ ಮೇಲೆ ಮತ್ತೆ ತೆರಿಗೆ ವಿಧಿಸುವ ಅಥವಾ ಕೆಲವು ವಿನಾಯಿತಿಗಳನ್ನು ತೆಗೆದುಹಾಕುವಂತೆ ಸಲಹೆಗಳನ್ನು ನೀಡಿರುವ ಸಾಧ್ಯತೆ ಹೆಚ್ಚಿದೆ.
ಟ್ಯುಹಿನ್ ಕಂಟಾ ಪಾಂಡೆ, ಹೂಡಿಕೆ ಹಿಂತೆಗೆತ ಮತ್ತು ನಿರ್ವಹಣಾ ವಿಭಾಗದ ಕಾರ್ಯದರ್ಶಿ
ಟ್ಯುಹಿನ್ ಪಾಂಡೆ ಏರ್ ಇಂಡಿಯಾ ಲಿಮಿಟೆಡ್ ಮತ್ತು ಇತರೆ ಸರ್ಕಾರಿ ಸ್ವಾಮ್ಯದ ಕಂಪನಿಗಳ ಕಾರ್ಯತಂತ್ರದ ಮಾರಾಟದ ಜವಾಬ್ದಾರಿಯನ್ನು ಹೊಂದಿದ್ದಾರೆ. ಜೊತೆಗೆ ಸರ್ಕಾರದ ಆದಾಯ ಕ್ರೂಢೀಕರಣದ ಪ್ರಯತ್ನಗಳು ಪ್ರಮುಖ ಭಾಗವಾಗಿದೆ.
1987ನೇ ಬ್ಯಾಚ್ನ ಒಡಿಶಾ ಕೇಡರ್ನ ಐಎಎಸ್ ಅಧಿಕಾರಿಯಾಗಿರುವ ಪಾಂಡೆ ಮುಂದಿನ ವರ್ಷದ ಬಂಡವಾಳ ಹಿಂತೆಗೆತ ರೂಪುರೇಷಗಳ ನಿರ್ಧಾರ ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಗಳ ಮಾರಾಟ ವಿಚಾರದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಬಂಡವಾಳ ಹಿಂತೆಗೆತದಿಂದ 1.05 ಲಕ್ಷ ಕೋಟಿ ರುಪಾಯಿ ಸಂಗ್ರಹದ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ.