ಜೀವನದಲ್ಲಿ ಸರಿಯಾಗಿ ದುಡ್ಡು ಮಾಡಬೇಕಪ್ಪಾ ಅನ್ನೋದು ಕೋಟ್ಯಾಂತರ ಜನರ ಹಂಬಲ ಆಗಿರುತ್ತದೆ. ಆದರೆ ದುಡ್ಡು ಮಾಡೋದು ಹೇಗೆ ಅನ್ನೋದು ತುಂಬಾ ಕಾಡುವ ಪ್ರಶ್ನೆ.
ದುಡ್ಡು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ. ಈ ಜಗತ್ತಿನಲ್ಲಿ ಅತಿಹೆಚ್ಚು ಇಷ್ಟ ಪಡುವ ವಸ್ತು ಇದ್ರೆ ಅದು ದುಡ್ಡೆ ಇರಬೇಕು. ಅದಕ್ಕೆ ಇರಬೇಕು ಹಣ ಕಂಡ್ರೆ ಹೆಣಾನೂ ಬಾಯಿ ಬಿಡತ್ತೆ ಅಂದಿದ್ದು.!
ಜೀವನದಲ್ಲಿ ಸರಿಯಾಗಿ ದುಡ್ಡು ಮಾಡಬೇಕಪ್ಪಾ ಅನ್ನೋದು ಕೋಟ್ಯಾಂತರ ಜನರ ಹಂಬಲ ಆಗಿರುತ್ತದೆ. ಆದರೆ ದುಡ್ಡು ಮಾಡೋದು ಹೇಗೆ ಅನ್ನೋದು ತುಂಬಾ ಕಾಡುವ ಪ್ರಶ್ನೆ. ಹಾಸಿಗೆ ಇದ್ದಷ್ಟು ಕಾಲು ಚಾಚು. ಹಗಲುಗನಸು ಕಾಣಬೇಡಪ್ಪಾ ಅನೋರು ಇದ್ದಾರೆ.
ಏನೇ ಆಗಲಿ ದುಡ್ಡು ಮಾಡೋಕೆ ಅನೇಕ ಮಾರ್ಗಗಳಿವೆ. ಕೆಲವರಿಗೆ ಪಿತ್ರಾರ್ಜಿತವಾಗಿ ತಲೆಮಾರುಗಳಿಂದ ಆಸ್ತಿ ಬಂದಿದ್ದರೆ, ಕೆಲವರು ವಾಮಮಾರ್ಗಗಳಿಂದ ಹಣ ಗಳಿಸಿರುತ್ತಾರೆ. ಇನ್ನೂ ಕೆಲವರು ತಮ್ಮ ಸ್ವಂತ ಸಾಮರ್ಥ್ಯದಿಂದ, ಸ್ವಾಭಿಮಾನದಿಂದ ನ್ಯಾಯಸಮ್ಮತವಾಗಿ ಹಣ ಸಂಪಾದನೆ ಮಾಡುತ್ತಾರೆ. ಸ್ವಂತ ಸಾಮರ್ಥ್ಯದಿಂದ ಹಣ ಮಾಡುವುದು ಯಾವಾಗಲೂ ಶ್ರೇಷ್ಠ ಮಾರ್ಗ. ಹಾಗಿದ್ದರೆ ಹೆಚ್ಚು ದುಡ್ಡು ಮಾಡುವುದು ಹೇಗೆ? ಅದಕ್ಕಾಗಿ ಗಮನಿಸಬೇಕಾದ ಸಂಗತಿಗಳಾವುವು ಎನ್ನುವುದನ್ನು ನೋಡೋಣ...
1. ಟೈಮ್ ವೇಸ್ಟ್ ಮಾಡಲೇಬಾರದು
ಜೀವನದಲ್ಲಿ ಅದೇನೆ ಮಾಡಬೇಕಂದ್ರೂ ಟೈಮ್ ಮ್ಯಾನೆಜ್ಮೆಂಟ್ ಮಾತ್ರ ಪಕ್ಕಾ ಇರ್ಬೇಕು. ಸಮಯ ವ್ಯರ್ಥ ಮಾಡೋದನ್ನ ವಿಷದಂತೆ ವರ್ಜಿಸಬೇಕು. ಟೈಮ್ ವೇಸ್ಟ್ ಮಾಡಿದ್ರೆ, ಕೆಲಸಗಳು ಮುಗಿಸೋದಕ್ಕೆ ಲೇಟ್ ಆಗತ್ತೆ, ಲೇಟ್ ಆದ್ರೆ ಎಲ್ಲಾ ಉಲ್ಟಾ ಪಲ್ಟಾ ಆಗೋದಕ್ಕೆ ಶುರು ಆಗತ್ತೆ. ಆಮೇಲೆ ಟೈಮ್ ಅಂದ್ರೆ ಪಕ್ಕಾ 420 ಆಗಿಬಿಡತ್ತೆ.
ಒಬ್ಬ ರಾಜ ಹೇಳಿದ್ದು 'ನಾನು ರಾಜನೇ ಆಗಿರಬಹುದು ಆದರೆ ಸಮಯವನ್ನು ವ್ಯರ್ಥ ಮಾಡುವಷ್ಟು ಶ್ರೀಮಂತ ನಾನಲ್ಲ' ಈ ಮಾತುಗಳು ಸಮಯದ ಮಹತ್ವ ತಿಳಿಸುತ್ತದೆ. ಹೀಗಾಗಿ ಟೈಮ್ ನ್ನು ಗೌರವಿಸಿ, ಪಾಲಿಸಿದರೆ ಮುಂದಿನದೇಲ್ಲವೂ ನಾವು ಅಂದುಕೊಂಡ ಹಾಗೇ ಸಾಗುತ್ತದೆ.
2. ಅರಾಮಾಗಿರಬೇಕು ಅನ್ನೋ ಮನಸ್ಥಿತಿ ಇರಬಾರದು
ತುಂಬಾ ದುಡ್ಡು ಮಾಡಬೇಕು ಅನ್ನೋರು ಜೀವನದಲ್ಲಿ ಕಷ್ಟಪಡದೇ ಅರಾಮಾಗಿ ಕಾಲ ಕಳೆದರೆ ಹೇಗೆ ಸಾಧ್ಯ? ರಿಲ್ಯಾಕ್ಸ್ ಅನ್ನೋದು ಮಾಡುವ ಕೆಲಸದಲ್ಲೇ ಕಾಣುವಂತಿರಬೇಕು. ಪ್ರತಿ ತಿಂಗಳ ಸಂಬಳಕ್ಕಾಗಿ ಕಾಯುವ ಮನಸ್ಥಿತಿ ಮನುಷ್ಯನನ್ನು ಬೆಳೆಯೋದಕ್ಕಾಗಲಿ, ನಾವು ಅಂದುಕೊಂಡಷ್ಟು ಹಣ ಗಳಿಸುವುದಕ್ಕಾಗಲಿ ಬಿಡಲ್ಲ. ಅರಾಮಾಗಿರಬೇಕು ಅನ್ನೋದೇ ನಮ್ಮೊಳಗಿನ ಶತ್ರು. ನಮ್ಮ ಇಚ್ಛೆಯ ಮಾರ್ಗದಲ್ಲಿ ಹೊಸತನ ಹುಡುಕುತ್ತಾ ಮುನ್ನಡೆಯಬೇಕು.
3. ಸ್ವತಂತ್ರವಾಗಿ ಏನ್ ಮಾಡಬಹುದು?
ಹೌದು... ಈ ಪ್ರಶ್ನೆ ಹೆಚ್ಚು ದುಡ್ಡು ಮಾಡಬೇಕು ಅನ್ನೊರ ತಲೆಯೊಳಗೆ ಬರಬೇಕು. ಹೊಸ ಹೊಸ ಪ್ರಶ್ನೆಗಳು, ಐಡಿಯಾಗಳು ಹೊಳೆದಾಗ ಅದು ಹೊಸತನಕ್ಕೆ ನಾಂದಿ ಆಗುತ್ತದೆ. ಉದಾ: ನಿಮ್ಮದೇ ಒಂದು ಸ್ವಂತ ಕಂಪನಿ ಇದ್ರೆ? ಹೆಚ್ಚೆಚ್ಚು ದುಡಿಬಹುದು ಅಲ್ವಾ. ನಿಮ್ಮ ಬಳಿ ಹೊಸ ಐಡಿಯಾ ಇದ್ರೆ ಒಂದು ಕೈ ನೋಡಿ. ಪ್ರಾರಂಭದಲ್ಲಿ ಕಷ್ಟ ಖಂಡಿತ ಇರತ್ತೆ. ಆದರೆ ಕೊನೆಯಲ್ಲಿ ಸುಖಾನೂ ಸಿಗತ್ತೆ. ಇಲ್ಲಾಂದ್ರೆ ತಿಂಗಳ ಸಂಬಳಕ್ಕಾಗಿ ಸೈಕಲ್ ತುಳಿತಾನೇ ಇರಬೇಕು. ನಮ್ಮ ಬಳಿ ಲಭ್ಯವಿರುವಂತ ಸಂಪನ್ಮೂಲ ಬಳಸಿ ಹೊಸ ಸಾಹಸಕ್ಕೆ ಮುಂದಾಗಬೇಕು. ಜೀವನ ನಿಂತ ನೀರಾಗಬಾರದು ಅಷ್ಟೇ. ಅದೇನೇ ಆಗಲಿ ಒಂದು ಕೈ ನೋಡೆಬಿಡೋಣ ಅಂತಾ ಮುನ್ನುಗ್ಗಿ ಯಶಸ್ಸು ನಮಗಾಗಿಯೇ ಕಾದಿರುತ್ತದೆ.
4. ಯರ್ರಾಬಿರ್ರಿ ಖರ್ಚು ಮಾಡೋದು ಬೇಡ
ಬೇಕು ಬೇಡಿಕೆಗಳ ಮೇಲೆ ನಮಗೆ ನಿಗಾ ಇರಬೇಕು. ಇಲ್ಲದಿದ್ದರೆ ಹಳಿ ತಪ್ಪಿದ ರೈಲಿನಂತೆ ಜೀವನ ಹಳ್ಳ ಹಿಡಿಯುತ್ತದೆ. ಜೇಬಲ್ಲಿ ದುಡ್ಡು ಇದೆಯಂತಾ ಹೇಗೆ ಬೇಕೊ ಹಾಗೇ ಖರ್ಚು ಮಾಡಿ ಕೈ ಒರೆಸ್ಕೊಬಾರದು. ಬೇಕಾಗಿರೋದು, ಬೇಡಾ ಆಗಿರೋದು ಹೀಗೆ ಎಲ್ಲವೂ ಖರೀದಿಸುತ್ತಾ ಹೋಗಬಾರದು. ಹೀಗೆ ದುಡಿದು ಹಾಗೇ ಖರ್ಚು ಮಾಡ್ತಾ ಇದ್ರೆ ಏನ್ ಬಂತು? ದುಡ್ಡು ಮಾಡಲೇಬೇಕು ಅನ್ನೋರಿಗೆ ಮನಿ ಮ್ಯಾನೆಜಮೆಂಟ್ ತುಂಬಾನೇ ಮುಖ್ಯ ಆಗಿರುತ್ತದೆ. ದುಡಿಯೋದಕ್ಕಾಗಿ ರಿಸ್ಕ್ ತಗೊಳಿ, ಉಳಿತಾಯ ಮಾಡೋಕ್ಕಾಗಿ ಕೇರ್ ತಗೊಳಿ.
5. ಇನ್ನೊಬ್ಬರಿಂದ ಒಳ್ಳೆಯದನ್ನ ಕಲಿರಿ
ಇದು ತುಂಬಾ ಮುಖ್ಯವಾದ ಸಂಗತಿ. ಜೀವನದಲ್ಲಿ ಏಳ್ಗೆ ಬಯಸುವ ವ್ಯಕ್ತಿ ಸುತ್ತಮುತ್ತಲಿನವರಿಂದ ತುಂಬಾ ಕಲಿಯಬೇಕಾಗುತ್ತದೆ. ಯಾಕಂದ್ರೆ ಎಲ್ಲಾ ತಪ್ಪುಗಳನ್ನು ನಾವೇ ಮಾಡಿ ಸರಿಪಡಿಸಿಕೊಂಡು ಹೋಗುವಷ್ಟು ದೀರ್ಘವಾದ ಜೀವನ ನಮ್ಮದಲ್ಲ. ಇನ್ನೊಬ್ಬರೂ ಮಾಡಿರುವ ತಪ್ಪುಗಳು ನಮ್ಮಿಂದ ಆಗದಂತೆ ಎಚ್ಚರಿಕೆ ವಹಿಸಿಕೊಳ್ಳೋದು ಕೂಡ ಮುಖ್ಯ.
ಯಾರಿಂದ ಹೊಸ ಹೊಸ ವಿಚಾರ ಕಲಿಯಬಹುದು ಅಂತವರ ಸಹವಾಸ ಮಾಡಿ. ಜಾಸ್ತಿ ದುಡೀಬೇಕು, ಹಣ ಗಳಿಸಬೇಕು ಅಂದುಕೊಂಡ್ರೆ ಅಂತಹ ವ್ಯಕ್ತಿಗಳ ಜತೆ ಹೆಚ್ಚು ಬೆರೆಯಬೇಕು. ಅದಕ್ಕೆ ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ ಅನ್ನೋದು. ನಾವು ಏನು ಆಗಬೇಕಂತ ಬಯಸುತ್ತೇವೊ ಅಂಥ ವಾತಾವರಣ ನಮ್ಮ ಸುತ್ತಮುತ್ತ ಇರುವಂತೆ ನೋಡಿಕೊಳ್ಳಬೇಕು. ನೀವೂ ದುಡ್ಡು ಮಾಡಬೇಕಾ? ಹಾಗಿದ್ರೆ ದುಡ್ಡು ಮಾಡಿರುವ ವ್ಯಕ್ತಿಗಳ ಹಾಗೇ ಯೋಚಿಸಬೇಕು..!
6. ಸಿಕ್ಕಾಪಟ್ಟೆ ಉಳಿತಾಯ ಮಾಡಿ
ಹೆಚ್ಚಿನವರು ಸಂಬಳ ಇಲ್ಲವೇ ಆದಾಯ ಬಂದ ತಕ್ಷಣ ಕ್ರೆಡಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ ಉಜ್ಜಿ ಚಿಂದಿ ಉಡಾಯಿಸಿ ಬಿಡ್ತಾರೆ. ಉಳಿತಾಯ ಮಾಡೋ ಬಗ್ಗೆ ಯೋಚನೆಯನ್ನೇ ಮಾಡಲ್ಲ. ಅಂತವರು ಕಷ್ಟ ಕಾಲದಲ್ಲಿ ಅಥವಾ ಆಕಸ್ಮಿಕ ದುರ್ಘಟನೆಗಳ ಸಂದರ್ಭದಲ್ಲಿ ಕಂಗಾಲಾಗಿ ಬಿಡುತ್ತಾರೆ. ಏನೂ ಮಾಡಬೇಕು ಅನ್ನೋದು ತೋಚುವುದಿಲ್ಲ. ಹೀಗಾಗಿ ಪ್ರತಿ ತಿಂಗಳ ಬಜೆಟ್ ಪ್ಲಾನ್ ರೂಪಿಸಿ ಅದಕ್ಕನುಗುಣವಾಗಿ ಖರ್ಚುವೆಚ್ಚ ಮಾಡುತ್ತಾ ಹೋಗಬೇಕು. ಹೆಚ್ಚೆಚ್ಚು ಹಣ ಉಳಿತಾಯ ಮಾಡುವ ಹವ್ಯಾಸ ತಪ್ಪದೇ ಅಳವಡಿಸಿಕೊಳ್ಳಬೇಕು. ಪ್ರಾರಂಭದಲ್ಲಿ ಕಷ್ಟವೆನಿಸಿದರೂ ನಿಧಾನವಾಗಿ ಸಮತೋಲನ ಸಾಧ್ಯವಾಗುತ್ತದೆ. ಅನಗತ್ಯ ವಸ್ತುಗಳ ಖರೀದಿ, ಪಾರ್ಟಿ, ಮೋಜುಮಸ್ತಿಗಳನ್ನು ವರ್ಜಿಸಬೇಕು.
7. ಲೆಕ್ಕಾಚಾರದ ವ್ಯವಹಾರ ನಿಮ್ಮದಾಗಿರಲಿ
ಪ್ರತಿಯೊಂದು ವ್ಯವಹಾರಗಳಲ್ಲಿ ನಿಮ್ಮದೆಯಾದ ಲೆಕ್ಕಾಚಾರ ಇರಲಿ. ಅವರೇನು ಅಂತಾರೆ, ಇವರೇನು ಅಂತಾರೆ ಅನ್ನೊದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಪ್ರೆಸ್ಟಿಜ್ ಗೊಸ್ಕರ ಏನೇನೋ ಮಾಡಲು ಹೋಗಿ ಇನ್ನೇನೋ ಮಾಡ್ಕೊಂಡು ಕೈ ಸುಟ್ಕೊಬಾರದು. ಯಾವುದಕ್ಕೆ ಖರ್ಚು ಮಾಡಬೇಕು ಅಥವಾ ಖರ್ಚು ಮಾಡಬಾರದು ಅನ್ನುವ ಲೆಕ್ಕಾಚಾರ ನಮ್ಮದಾಗಿರಬೇಕು. ಎಲ್ಲೆಲ್ಲೋ ಹಣ ವೇಸ್ಟ್ ಮಾಡುವ ಬದಲು ಉತ್ತಮ ಇಳುವರಿ ಕೊಡುವ ಕಡೆ ಹೂಡಿಕೆ ಮಾಡಿ.
8. ಉಳಿತಾಯ ಮಾಡುತ್ತಿರಿ, ಸಂಪಾದನೆ ಮಾಡುತ್ತಲೇ ಇರಿ
ಉಳಿತಾಯ ಮಾಡಿದ ಮೇಲೆ ಇಲ್ಲವೇ ಉಳಿತಾಯ ಮಾಡುತ್ತಿದ್ದೇವೆ ಅಂದುಕೊಂಡು ಸಂಪಾದನೆ ಮಾಡುವುದನ್ನು ನಿಲ್ಲಿಸಬಾರದು. ಸಂಪಾದನೆ ಅನ್ನೋದು ಸದಾ ಹರಿಯುವ ನದಿಯಾಗಿರಬೇಕು. ಸಂಪಾದನೆಗಾಗಿ ಅನೇಕ ಮೂಲಗಳನ್ನು ಹುಡುಕಿಕೊಳ್ಳಬೇಕು. ಬರೀ ಉಳಿತಾಯ ಮಾಡಿದ ಹಣದಿಂದ ಬೇಕಾದ್ದನ್ನು ಮಾಡುತ್ತೇನೆ ಎನ್ನದೇ ಸಂಪಾದನೆ ಮಾಡುವ ಮಂತ್ರ ಜಪಿಸಿ. ಆಗ ಹೆಚ್ಚೆಚ್ಚು ದುಡ್ಡು ನಿಮ್ಮ ಖಜಾನೆಗೆ ಸೇರುತ್ತದೆ.
9. ಹಾರ್ಡ್ ವರ್ಕ್ ಗಿಂತ ಸ್ಮಾರ್ಟ್ ವರ್ಕ್ ಮುಖ್ಯ
ನಮ್ಮಲ್ಲಿ ತುಂಬಾ ಜನರು ಸಿಕ್ಕಾಪಟ್ಟೆ ಹಾರ್ಡ್ ವರ್ಕ್ ಮಾಡ್ತಾರೆ. ಕತ್ತೆ ದುಡಿದ ಹಾಗೇ ದುಡಿದ್ರೂ ನಿನ್ನಿಂದ ಏನೂ ಮಾಡಕ್ಕೆ ಆಗ್ತಾ ಇಲ್ಲ ಅನ್ನುವ ಜನರನ್ನು ನೀವು ಕೇಳಿರ್ತಿರಿ. ತಿಂಗಳ ಸಂಬಳಕ್ಕಾಗಿ ಒಂದು ಕಂಪನಿಯಲ್ಲಿ ಕಷ್ಟಪಟ್ಟು ದುಡಿದು ಆಮೇಲೆ ಅಬ್ಬಬ್ಬಾ ಅಂದ್ರೆ ಒಂದೆರಡು ಪ್ರಮೋಷನ್ ಆಗ್ಬಹುದು. ಆದರೆ ನಿಮ್ಮದೇಯಾದ ಹೊಸ ಐಡಿಯಾದೊಂದಿಗೆ ಸ್ಮಾರ್ಟ್ ವರ್ಕ್ ಮಾಡಿದ್ರೆ ಯಶಸ್ಸು ನಿಮ್ಮದಾಗುತ್ತದೆ ಅನ್ನುವುದರಲ್ಲಿ ಸಂಶಯವಿಲ್ಲ. ಈಗೀನ ತಾಂತ್ರಿಕ ಮತ್ತು ವೈಜ್ಞಾನಿಕ ಯುಗದಲ್ಲಿ ಸ್ಮಾರ್ಟ್ ವರ್ಕ್ ಗೆ ಹೆಚ್ಚು ಬೆಲೆ. ನಿಮ್ಮ ಬಿಸಿನೆಸ್ ಅಭಿವೃದ್ಧಿ ಮಾಡಬಹುದು ಎನ್ನುವುದರ ಬಗ್ಗೆ ವಿಚಾರ ಮಾಡಿದರೆ ತುಂಬಾ ವೇಗವಾಗಿ ಬೆಳೆಯಬಹುದು.
10. ಬೇಗ ಎದ್ದೇಳಿ
ಹೆಚ್ಚೆಚ್ಚು ದುಡಿಬೇಕು, ದುಡ್ಡು ಮಾಡಬೇಕು ಅನ್ನೋರು ಮುಂಜಾನೆ ಬೇಗ ಎದ್ದೇಳುವ ಹವ್ಯಾಸ ಇಟ್ಟುಕೊಳ್ಳಬೇಕು. ಪ್ರಪಂಚದಲ್ಲಿನ ಹೆಚ್ಚಿನ ಯಶಸ್ವಿ ವ್ಯಕ್ತಿಗಳು ಬೇಗ ಎದ್ದೇಳುವ ಹವ್ಯಾಸ ಹೊಂದಿದ್ದಾರೆ. ಮುಂಜಾನೆ ಬೇಗ ಎದ್ದೇಳುವುದರಿಂದ ಹೆಚ್ಚಿನ ಸಮಯ ಸಿಗುತ್ತದೆ. ಪ್ರತಿನಿತ್ಯ ವ್ಯಾಯಾಮ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹಾಗೂ ಇಡೀ ದಿನ ಉಲ್ಲಾಸದಿಂದ ಇರುವುದು ಮುಖ್ಯವಾಗಿರುತ್ತದೆ.
ಒಟ್ಟಿನಲ್ಲಿ ರಾತ್ರೋರಾತ್ರಿ ಶ್ರೀಮಂತರಾದವರೂ, ಸಾಧನೆ ಮಾಡಿದವರೂ ಯಾರೂ ಇಲ್ಲ. ಹಾಗೇ ಯಾರಾದ್ರೂ ಇದ್ರೆ ಅವರೇಲ್ಲಾ ಜೈಲಿನಲ್ಲಿದ್ದಾರೆ. Short cut will cut you short ಅನ್ನುವ ಹಾಗೇ ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ



Click it and Unblock the Notifications