ಬಜೆಟ್ 2018: ಭಾರತಕ್ಕೆ ಪ್ರಧಾನಿ ಮೋದಿಯವರ ಕೊಡುಗೆಗಳೇನು? ಇಲ್ಲಿವೆ 10 ಸಂಗತಿ
ಪ್ರತಿಯೊಂದು ಬಜೆಟ್ ಕೂಡ ಹಲವಾರು ನಿರೀಕ್ಷೆಗಳಿಗೆ ಕಾರಣವಾಗಿರುತ್ತದೆ. ಈ ವರ್ಷದ ಬಜೆಟ್ ಸಹ ಹಲವು ಅಚ್ಚರಿಗಳನ್ನು ಪ್ರಕಟಿಸಿದ್ದು, ಕೆಲವರ ಮೊಗದಲ್ಲಿ ಸಂತಸ ಅರಳಿಸಿದರೆ ಇನ್ನೂ ಕೆಲವರ ಮುಖದಲ್ಲಿ ಸಂತಸ ಮೂಡಿಸುವಲ್ಲಿ ವಿಫಲವಾಗಿದೆ.
ಪ್ರತಿಯೊಂದು ಬಜೆಟ್ ಕೂಡ ಹಲವಾರು ನಿರೀಕ್ಷೆಗಳಿಗೆ ಕಾರಣವಾಗಿರುತ್ತದೆ. ಈ ವರ್ಷದ ಬಜೆಟ್ ಸಹ ಹಲವು ಅಚ್ಚರಿಗಳನ್ನು ಪ್ರಕಟಿಸಿದ್ದು, ಕೆಲವರ ಮೊಗದಲ್ಲಿ ಸಂತಸ ಅರಳಿಸಿದರೆ ಇನ್ನೂ ಕೆಲವರ ಮುಖದಲ್ಲಿ ಸಂತಸ ಮೂಡಿಸುವಲ್ಲಿ ವಿಫಲವಾಗಿದೆ.
ಫೆಬ್ರವರಿ 1ರಂದು ಹಣಕಾಸು ಸಚಿವರು ಮಂಡಿಸಿದ 2018ರ ಬಜೆಟ್ ಬಡವರ ಪಾಲಿಗೆ ನಿಸ್ಸಂದೇಹವಾಗಿ ಕೆಲವು ಒಳ್ಳೆಯ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಪ್ರಮುಖವಾಗಿ ವೇತನದಾರರಿಗೆ ರೂ. 40 ಸಾವಿರದ ಸಾಮಾನ್ಯ ಕಡಿತದ ಮರು ಸೇರ್ಪಡೆ, ಹಿರಿಯ ನಾಗರಿಕರಿಗೆ ವೈದ್ಯಕೀಯ ಖರ್ಚುಗಳ ವಿನಾಯಿತಿಯಲ್ಲಿ ಏರಿಕೆ ಹೆಚ್ಚು ಸಂತಸ ಮೂಡಿಸಿದೆ. ವಿಶೇಷವಾಗಿ ಬಡವರ್ಗದ ಸುಮಾರು ಹತ್ತು ಕೋಟಿ ಕುಟುಂಬಗಳಿಗೆ ಹಣ ರಹಿತ 5 ಲಕ್ಷದವರೆಗಿನ ಆರೋಗ್ಯ ವಿಮಾ ಯೋಜನೆಯೊಂದನ್ನು ಪ್ರಾರಂಭಿಸುವ ಘೋಷಣೆ ಮನಗೆದ್ದಿದೆ. ಇದು ಭಾರತದ ಆರೋಗ್ಯ ಕಾಳಜಿ ವ್ಯವಸ್ಥೆಯಲ್ಲಿಯೇ ಒಂದು ಕ್ರಾಂತಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
2018-19ರ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ನೀಡಿರುವ ಪ್ರಮುಖ ಉಡುಗೊರೆಗಳು ಹೀಗಿವೆ..
1. ಸ್ಟಾಂಡರ್ಡ್ ಡಿಡಕ್ಷನ್
ಫೆಬ್ರವರಿ 1ರಂದು ವಿತ್ತ ಸಚಿವ ಅರುಣ್ ಜೇಟ್ಲಿಯವರು ಮಂಡಿಸಿದ ಬಜೆಟ್ 2018-19 ರಲ್ಲಿ ವೇತನದಾರರು ಇನ್ನು ಮುಂದೆ ತಮ್ಮ ಸಂಬಳದ ಮೊತ್ತದಿಂದ ನೇರವಾಗಿ ರೂ 40,000 ಸ್ಟಾಂಡರ್ಡ್ ಡಿಡಕ್ಷನ್ ಹೆಸರಿನಲ್ಲಿ ಕಳೆಯಬಹುದಾಗಿದೆ. ಆದರೆ ಇದಕ್ಕಾಗಿ ತಮ್ಮ ಪ್ರಯಾಣ ಹಾಗೂ ವೈದ್ಯಕೀಯ ವೆಚ್ಚಗಳನ್ನು ಕೈಬಿಡಬೇಕಾಗುತ್ತದೆ. ತೆರಿಗೆಗೆ ಒಳಗಾಗುವ ಮೊತ್ತದಲ್ಲಿ ಈ ವೆಚ್ಚಗಳನ್ನು ಮೊದಲು ಕಳೆಯಲಾಗುತ್ತಿತ್ತು. ಆದರೆ ಇದು ಅಷ್ಟು ಆಕರ್ಷಕವಲ್ಲ. ಏಕೆಂದರೆ ಇದರೊಂದಿಗೆ ಈ ಮೊದಲು ಉದ್ಯೋಗಿಗಳಿಗೆ ಪ್ರಯಾಣ ವೆಚ್ಚದ ಮೇಲೆ ಸಿಗುತ್ತಿದ್ದ ವಾರ್ಷಿಕ ರೂ. 19,200 ಹಾಗೂ ಬಿಲ್ ತೋರಿಸಿ ವೈದ್ಯಕೀಯ ವೆಚ್ಚಕ್ಕೆ ಸಿಗುತ್ತಿದ್ದ ವಾರ್ಷಿಕ ರೂ. 15,000 (ಒಟ್ಟು ರೂ.34,200) ವಿನಾಯಿತಿ ಇನ್ನು ಮುಂದೆ ಇಲ್ಲವಾಗುತ್ತದೆ. ಅಂದರೆ ಈ ಮೊದಲು ರೂ. 34,200ರ ವಿನಾಯಿತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದವರಿಗೆ ಈಗಿನ ಒಟ್ಟಾರೆ ವಿನಾಯಿತಿ ರೂ. 5,800 ಮಾತ್ರ. (40000-34200). ಹಾಗಾಗಿ ಹಿಂದೆ ಈ ವೆಚ್ಚಗಳನ್ನು ಪಡೆಯುತ್ತಿದ್ದವರಿಗೆ ಮಾತ್ರವೇ ಲಾಭವಾಗುತಿತ್ತು. ಈಗ ಈ ವೆಚ್ಚಗಳನ್ನು ಬಳಸದೇ ಇರುವ ಅಥವಾ ಕೊಡದೇ ಇರುವವರಿಗೂ ಏಕಪ್ರಕಾರವಾಗಿ ಲಾಭವಾಗಲಿದೆ. ಒಟ್ಟಿನಲ್ಲಿ ಒಂದು ಕ್ಡೆ ಕೊಟ್ಟು ಇನ್ನೊಂದು ಕಡೆ ಕಿತ್ತುಕೊಂಡಿದ್ದಾರೆ. ಉದ್ಯೋಗಿಗಳಿಗೆ ಆಶ್ಚರ್ಯಕರ ಸೌಲಭ್ಯಗಳನ್ನು ನೀಡುವ 15 ಕಂಪನಿಗಳು
2. 5 ಲಕ್ಷ ಗ್ರಾಮಗಳಿಗೆ ವೈ-ಫೈ ಸೌಲಭ್ಯ
ನಮ್ಮ ದೇಶವನ್ನು ಡಿಜಿಟಲ್ ಯುಗದಲ್ಲಿ ಮುನ್ನಡೆಯುವಂತಾಗಲು ವಿತ್ತ ಸಚಿವರು ಗ್ರಾಮಗಳಲ್ಲಿಯೂ ಬ್ರಾಡ್ ಬ್ಯಾಂಡ್ ಸೇವೆಯನ್ನು ಒದಗಿಸುವ ಘೋಷಣೆ ಮಾಡಿದ್ದಾರೆ. ದೇಶದಾದ್ಯಂತ ಸುಮಾರು 5 ಲಕ್ಷ ಗ್ರಾಮಗಳಿಗೆ ವೈ ಫೈ ಹಾಟ್ ಸ್ಪಾಟ್ ಗಳನ್ನು ನೀಡುವ ಮೂಲಕ ಸುಮಾರು ಐದು ಕೋಟಿ ಗ್ರಾಮೀಣ ಜನತೆಗೆ ಅಂತರ್ಜಾಲ ಸಂಪರ್ಕ ಒದಗಿಸುವ ಮೂಲಕ ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಮಹತ್ವದ ಮೆಟ್ಟಿಲೊಂದನ್ನು ನೀಡಿದಂತಾಗಿದೆ. ಈ ಮೂಲಕ ಡಿಜಿಟಲ್ ಇಂಡಿಯಾಗೆ ಮಹತ್ವದ ಉತ್ತೇಜನ ಸಿಗಲಿದೆ.
3. ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆ
ಬಡವರಿಗಾಗಿ ಮಹಾ ಆರೋಗ್ಯ ಯೋಜನೆಯೊಂದನ್ನು ಪ್ರಾರಂಭಿಸಲಾಗಿದ್ದು, ಈ ಮೂಲಕ ಕನಿಷ್ಟ 10 ಕೋಟಿ ಬಡ ಕುಟುಂಬಗಳಿಗೆ ಲಾಭವಾಗಲಿದೆ. ಪ್ರತಿ ಕುಟುಂಬಕ್ಕೂ 5 ಲಕ್ಷ ರೂಪಾಯಿ ಮೊತ್ತವನ್ನು ವಿಮೆಯ ರೂಪದಲ್ಲಿ ಮೀಸಲಾಗಿಡಲಾಗುತ್ತದೆ. (ನಗದಾಗಿ ಕೈಗೆ ಕೊಡಲಾಗುವುದಿಲ್ಲ) ಇದರಿಂದ ದ್ವಿತೀಯ ಹಾಗೂ ತೃತೀಯ ದರ್ಜೆಯ ವೈದ್ಯಕೀಯ ನೆರವನ್ನು ಪಡೆಯಬಹುದು. ಆದರೆ ಈಗಾಗಲೇ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ನೆರವು ಉಚಿತವಾಗಿದೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಹೆಚ್ಚೂ ಕಡಿಮೆ ಉಚಿತವಾಗಿಯೇ ಇರುತ್ತದೆ ಎಂದು ಕೆಲವರು ವಾದಿಸಬಹುದು. ಆದರೆ ಈ ಯೋಜನೆಯಲ್ಲಿ ತೃತೀಯ ದರ್ಜೆಯ ನೆರವು ಅಂದರೆ ಯಕೃತ್, ಹೃದಯ ಸಂಬಂಧಿತ ಮೊದಲಾದ ಚಿಕಿತ್ಸೆಗಳೂ ಉಚಿತವಾಗುತ್ತವೆ. ಅಲ್ಲದೇ ಈ ಯೋಜನೆಯ ಕೆಲವು ಭಾಗಗಳನ್ನು ಖಾಸಗಿ ಆಸ್ಪತ್ರೆಗಳಿಗೆ ವಹಿಸಿಕೊಡುವ ಮೂಲಕ ಈಗ ಸರ್ಕಾರಿ ಆಸ್ಪತ್ರೆಗಳ ಮೇಲಿರುವ ಒತ್ತಡವನ್ನು ಕಡಿಮೆ ಮಾಡುವುದೂ ಈ ಯೋಜನೆಯ ಇನ್ನೊಂದು ಉದ್ದೇಶವಾಗಿದೆ. ಆರೋಗ್ಯ ವಿಮೆ ಪಡೆದಿರುವವರಿಗೆ ಈ ಸೌಲಭ್ಯ ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ ದೊರಕುತ್ತಿದೆ. ಈಗ ಬಡವರಿಗೂ ಈ ಸೌಲಭ್ಯ ದೊರಕಲಿದೆ.
"ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆಯಿಂದ ಹತ್ತು ಕೋಟಿ ಬಡ ಕುಟುಂಬಗಳಿಗೆ ನೆರವಾಗಲಿದೆ (ಅಂದಾಜು ಐವತ್ತು ಕೋಟಿ ಜನರು) ಹಾಗೂ ಪ್ರತಿ ಕುಟುಂಬಕ್ಕೂ ದ್ವಿತೀಯ ಹಾಗೂ ತೃತೀಯ ದರ್ಜೆಯ ವೈದ್ಯಕೀಯ ನೆರವಿಗಾಗಿ ವಾರ್ಷಿಕ ಸುಮಾರು ಐದು ಲಕ್ಷ ರೂಪಾಯಿಯವರೆಗಿನ ಆರ್ಥಿಕ ನೆರವು ನೀಡಲಾಗುತ್ತದೆ" ಎಂದು ಸರ್ಕಾರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 2022ರ ಒಳಗೆ ಪ್ರತಿಯೊಬ್ಬ ಭಾರತೀಯರಿಗೆ ಸ್ವಂತ ಮನೆ
4. ಆಧಾರ್ ಕಡ್ಡಾಯದ ಮೂಲಕ ಕಾನೂನು ಸುವ್ಯವಸ್ಥೆ
ಭಾರತದ ಪ್ರತಿಯೊಂದು ವಹಿವಾಟು ಸಹ ಆಧಾರ್ ಕಾರ್ಡ್ ಆಧರಿಸಿದ ಒಂದು ವಿಶಿಷ್ಟ ಐಡಿ ಅಥವಾ ಗುರುತನ್ನು ಹೊಂದಲು ಭಾರತ ಸರ್ಕಾದ ಮಹತ್ವದ ಯೋಜನೆಯೊಂದನ್ನು ಪ್ರಸ್ತುತಪಡಿಸುತ್ತಿದೆ. ಈ ಮೂಲಕ ತೆರಿಗೆ ಹಾಗೂ ಪರವಾನಿಗೆಗಳಿಗೆ ಸಂಬಂಧಿಸಿದ ಕೆಲಸಗಳು ಸುಲಭವಾಗುತ್ತವೆ. ಕಾನೂನನ್ನು ಕಾರ್ಯಗತಗೊಳಿಸುವ ಸಂಸ್ಥೆಗಳು ವಹಿವಾಟುದಾರರಿಗೆ ನೀಡುವ ಕಿರುಕುಳ ತಪ್ಪಿಸಲು ಇದು ನೆರವಾಗುತ್ತದೆ. ವಹಿವಾಟು ನಡೆಸುವ ವ್ಯಕ್ತಿಗಳಿಗೆ ಇನ್ನು ಮುಂದೆ ಈ ಸಂಸ್ಥೆಗಳ ಮೂಲಕ ವ್ಯವಹರಿಸಬೇಕಾದ ಅಗತ್ಯವೇ ಇಲ್ಲದ ಕಾರಣ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯಲು ಸಾಧ್ಯವಾಗುತ್ತದೆ. ಈ ಸ್ಥಿತಿಯಲ್ಲಿ ಪ್ರತಿ ಸಂಸ್ಥೆಯೂ ತನ್ನ ಗಾತ್ರ ಅಥವಾ ಕಾರ್ಯ ವಿಧಾನಗಳನ್ನು ಪರಿಗಣಿಸದೆ ಕಾನೂನಿನ ದೃಷ್ಟಿಯಲ್ಲಿ ಸಮಾನವಾದ ಕಾನೂನುಬದ್ಧ ಘಟಕವಾಗಿ ಪರಿಗಣಿಸಲ್ಪಡುತ್ತದೆ. ಸರ್ಕಾರ ಆಧಾರ್ ಮೂಲಕ ನೀಡುವ ಸವಲತ್ತುಗಳಾದ ಸಹಾಯಧನ (ಸಬ್ಸಿಡಿ), ಬಡ್ಡಿಯಲ್ಲಿ ಕಡಿತ ಮೊದಲಾದವು ಸರಿಯಾದ ವ್ಯಕ್ತಿಗಳಿಗೆ ಸಿಗುವಂತಾಗುತ್ತದೆ. ತನ್ಮೂಲಕ ಚಿಕ್ಕ ಪ್ರಮಾಣದಲ್ಲಿ ಹಣವನ್ನು ಕದಿಯುವುದು ಇಲ್ಲವಾಗುತ್ತದೆ. ಈ ವಿಶಿಷ್ಟ ಐಡಿ ಮೂಲಕ ತೆರಿಗೆ ಸಂಬಂಧಿತ ಅನುಕೂಲತೆಗಳನ್ನು ಆಯಾ ಸಂಸ್ಥೆಗೆ ತಲುಪಿಸುವಂತಾಗುತ್ತದೆ. ಈ ಎಲ್ಲಾ ಸೌಲಭ್ಯಗಳು ವಿಶಿಷ್ಟ ಐಡಿ ಯೋಜನೆಯ ಸಾಫಲ್ಯವನ್ನು ಅವಲಂಬಿಸಿದೆ.
5. ಆರ್ಥಿಕ ಬಲವರ್ಧನೆ
2017-18ಬಜೆಟ್ ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿಯವರು ಪ್ರಕಟಿಸಿದ ಪ್ರಕಾರ ಬಂಡವಾಳ ಹಿಂತೆಗೆತ (disinvestment) ದ ಗುರಿಯಾದ ರೂ. 72,500 ಕೋಟಿ ದಾಟಿ 1,00,000 ಕೋಟಿ ರೂಪಾಯಿಗಳನ್ನು ತಲುಪಿದೆ. 2018-19 ವರ್ಷಕ್ಕೆ ಅವರು ಬಂಡವಾಳ ಹಿಂತೆಗೆತ ಗುರಿಯನ್ನು 80,000 ಕೋಟಿ ರೂಗಳಿಗೆ ಏರಿಸಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ಆರ್ಥಿಕ ಬಲವರ್ಧನೆ ಪಡೆಯಲು ಸಾಧ್ಯವಾಗುತ್ತದೆ ಹಾಗೂ 2018-19ನೇ ವರ್ಷದ ಹಣಕಾಸಿನ ಕೊರತೆಯಾದ 3.3% ಮೊತ್ತವನ್ನು ದಾಟಿ ಆರ್ಥಿಕ ಸಬಲತೆ ಪಡೆಯಲು ನೆರವಾಗಲಿದೆ.
6. ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆ
ಅರುಣ್ ಜೇಟ್ಲಿಯವರು ತಿಳಿಸಿದ ಪ್ರಕಾರ ಈ ವರ್ಷ ಆದಾಯ ತೆರಿಗೆ ಪಾವತಿಸಿದವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. 2014-15ರಲ್ಲಿ ರೂ. 6.47 ಕೋಟಿ ಇದ್ದಿದ್ದು, 2016-17ರಲ್ಲಿ 8.27 ಕೋಟಿ ಆಗಿದೆ. ಇದರಿಂದ ತೆರೆದ ಮಾರುಕಟ್ಟೆಯಿಂದ ಬಾಂಡ್ ರೂಪದಲ್ಲಿ ಅಥವಾ ಇತರ ರೂಪಗಳಿಂದ ಹಣವನ್ನು ಸಾಲ ಪಡೆಯುವ ಅಗತ್ಯವಿಲ್ಲದೇ ಹೋಗುತ್ತದೆ. ಹೆಚ್ಚು ಹೆಚ್ಚು ತೆರಿಗೆದಾರರು ತೆರಿಗೆ ಪಾವತಿಸುತ್ತಾ ಹೋದರೆ ಭಾರತದ ರೂಪಾಯಿ ಮೌಲ್ಯವನ್ನೂ ಹೆಚ್ಚಿಸಬಹುದು ಹಾಗೂ ಹಣದುಬ್ಬರವನ್ನು ಕಡಿಮೆಗೊಳಿಸಬಹುದು.
7. ಬಡ್ಡಿ ತೆರಿಗೆ ವಿನಾಯಿತಿ ಮಿತಿ
ಹಿರಿಯ ನಾಗರಿಕರಿಗೆ ಈ ಬಜೆಟ್ ಸಂತಸ ತಂದಿದೆ. ಇವರು ಬ್ಯಾಂಕ್ ಹಾಗೂ ಅಂಚೆ ಕಛೇರಿಯಲ್ಲಿಟ್ಟಿರುವ ಮೊತ್ತಗಳ ಮೇಲೆ ಬರುವ ಬಡ್ಡಿಯ ತೆರಿಗೆ ವಿನಾಯಿತಿಯ ಮಿತಿಯನ್ನು ಹೆಚ್ಚಿಸಲಾಗಿದೆ. ಇದುವರೆಗೆ 10 ಸಾವಿರಕ್ಕೂ ಮೀರಿದ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ಇದು 50 ಸಾವಿರಕ್ಕೆ ಏರಲಿದೆ.
8. ವೈದ್ಯಕೀಯ ವೆಚ್ಚದ ಮಿತಿ ಏರಿಕೆ
ಹಿರಿಯ ನಾಗರಿಕರಿಗೆ ಇನ್ನೊಂದು ಸಂತಸದ ಸುದ್ದಿ ಎಂದರೆ ಆರೋಗ್ಯ ವಿಮೆಯ ಕಂತು ಇಳಿಕೆ ಹಾಗೂ 1961ರ ಆದಾಯ ತೆರಿಗೆ ವಿಧಿ 80D ಯ ಪ್ರಕಾರ ವೈದ್ಯಕೀಯ ವೆಚ್ಚದ ಮಿತಿಯನ್ನು 30 ಸಾವಿರದಿಂದ 50 ಸಾವಿರಕ್ಕೆ ಏರಿಸಲಾಗಿದೆ. ಇವುಗಳನ್ನು ಒಟ್ಟಾಗಿ ಪರಿಗಣಿಸಿದರೆ ಹಿರಿಯ ನಾಗರಿಕರಿಗೆ ತೆರಿಗೆ ಕಟ್ಟುವ ಆದಾಯ ಹೆಚ್ಚೂ ಕಡಿಮೆ ಇಲ್ಲವೇ ಇಲ್ಲದಂತಾಗುತ್ತದೆ. ಈ ದಿನಗಳಲ್ಲಿ ಏರುತ್ತಿರುವ ವೈದ್ಯಕೀಯ ವೆಚ್ಚವನ್ನು ಭರಿಸಲು ಸಾಧ್ಯವಾಗುವಂತೆ ಈ ವೆಚ್ಚಗಳನ್ನೂ ಹೆಚ್ಚಿಸಲಾಗಿದೆ.
9. ಹಿರಿಯ ನಾಗರಿಕರಿಗೆ ವಿನಾಯಿತಿ
ಇದುವರೆಗೆ ಕೆಲವು ಗಂಭೀರ ಅನಾರೋಗ್ಯಗಳಿಗೆ ಹಿರಿಯ ನಾಗರಿಕರಿಗೆ 60 ಸಾವಿರ ರೂಪಾಯಿಗಳವರೆಗೂ ವಿನಾಯಿತಿ ನೀಡಲಾಗುತ್ತಿತ್ತು. ಅತಿ ಹಿರಿಯ ನಾಗರಿಕರಿಗೆ (ಎಂಭತ್ತು ವರ್ಷ ದಾಟಿದವರು) ಈ ಮೊತ್ತ ರೂ. 80 ಸಾವಿರ ಆಗುತ್ತಿತ್ತು. ಈ ಬಜೆಟ್ ನಲ್ಲಿ ಈ ವಯಸ್ಸಿನ ನಿರ್ಬಂಧವಿಲ್ಲದೇ ಅರವತ್ತು ದಾಟಿದ ಎಲ್ಲರಿಗೂ 1 ಲಕ್ಷ ರೂಪಾಯಿಯವರೆಗಿನ ಮೊತ್ತದ ವಿನಾಯಿತಿ ಪಡೆಯಬಹುದು.
10. ಮೂಲಸೌಕರ್ಯ ಹಾಗು ಗ್ರಾಮೀಣಾಭಿವೃದ್ಧಿ
ಗ್ರಾಮೀಣ ಭಾಗದ ಮೂಲಸೌಕರ್ಯ ಉತ್ತಮಗೊಳಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸೌಕರ್ಯಗಳನ್ನು ಒದಗಿಸಿದ ತಕ್ಷಣವೇ ಇದರ ಪ್ರತಿಫಲವನ್ನು ಕಾಣಲು ಸಾಧ್ಯವಿಲ್ಲ ಹಾಗೂ ಅಧಿಕ ಆದಾಯ ಅಥವಾ ಕಡಿಮೆ ತೆರಿಗೆ ಯುಕ್ತ ಆದಾಯವನ್ನೂ ಕಾಣಲು ಸಾಧ್ಯವಿಲ್ಲ. ಆದರೆ ಹೆಚ್ಚಿನ ಮೂಲಸೌಕರ್ಯ ಒದಗಿಸುವ ಮೂಲಕ ಹೆಚ್ಚು ಜನರಿಗೆ ಉದ್ಯೋಗಾವಕಾಶ ಲಭಿಸುತ್ತದೆ ಹಾಗೂ ಗ್ರಾಮೀಣ ಭಾಗದಲ್ಲಿ ಸರಕು ಸಾಗಾಣಿಕ ಉತ್ತಮಗೊಳ್ಳುತ್ತದೆ. ದೀರ್ಘಾವಧಿಯಲ್ಲಿ ಗ್ರಾಮೀಣ ಭಾಗದ ಜೀವನವೂ ಉತ್ತಮಗೊಂಡು ಜನರು ಹಳ್ಳಿಯಿಂದ ನಗರಗಳಿಗೆ ಗುಳೆಹೋಗುವುದನ್ನು ತಪ್ಪಿಸಬಹುದು. 2018-19ಬಜೆಟ್ ನಲ್ಲಿ ಅರುಣ್ ಜೇಟ್ಲಿಯವರು ದೇಶದಾದ್ಯಂತ ಗ್ರಾಮೀಣ ಭಾಗದಲ್ಲಿ 17 ಲಕ್ಷ ಕಿಲೋಮೀಟರ್ ಉದ್ದದ ರಸ್ತೆ, 50 ಲಕ್ಷ ಹೊಸ ಗ್ರಾಮೀಣ ಮನೆಗಳು, 1.88 ಶೌಚಾಲಯಗಳು ಹಾಗೂ 1.75 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಆಶ್ವಾಸನೆ ನೀಡಿದ್ದಾರೆ. ಇದರೊಂದಿಗೆ ಕೃಷಿ ವಿಭಾಗದಲ್ಲಿಯೂ ಬೆಳವಣಿಗೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಮೋದಿ ಮಹಿಮೆ! ಭಾರತದ ಈ ಹಳ್ಳಿ ಏಷಿಯಾದಲ್ಲೇ ಶ್ರೀಮಂತ, ಎಲ್ಲರೂ ಕೋಟ್ಯಾಧಿಪತಿಗಳು!!