ಹೂಡಿಕೆ ಗೊಂದಲ - ಲಭ್ಯವಿರುವ ವೈವಿಧ್ಯಮಯ ಪರ್ಯಾಯ ಯೋಜನೆಗಳು
ಸೆನ್ಸೆಕ್ಸ್ ಜೂನ್ ೪ ರಂದು ೪೦,೩೧೨.೦೭ ರ ಸರ್ವಕಾಲೀನ ಗರಿಷ್ಠವನ್ನು ತಲುಪಿ ಹೊಸ ದಾಖಲೆಯನ್ನು ನಿರ್ಮಿಸಿತ್ತು.
ಸೆನ್ಸೆಕ್ಸ್ ಜೂನ್ ೪ ರಂದು ೪೦,೩೧೨.೦೭ ರ ಸರ್ವಕಾಲೀನ ಗರಿಷ್ಠವನ್ನು ತಲುಪಿ ಹೊಸ ದಾಖಲೆಯನ್ನು ನಿರ್ಮಿಸಿತ್ತು. ಫೆಬ್ರವರಿ ತಿಂಗಳ ಮಧ್ಯಂತರದಲ್ಲಿ ಸೆನ್ಸೆಕ್ಸ್ ೩೫,೮೦೦ ರ ಸಮೀಪವಿದ್ದು ಮೇ ಮಧ್ಯಂತರದಲ್ಲಿ ೩೭ ಸಾವಿರ ಪಾಯಿಂಟುಗಳ ಸಮೀಪದಲ್ಲಿದ್ದಂತಹ ಸೆನ್ಸೆಕ್ಸ್ ಕೇವಲ ಕೆಲವೇ ದಿನಗಳಲ್ಲಿ ಸರ್ವಕಾಲೀನ ಮಟ್ಟಕ್ಕೆ ಜಿಗಿತ ಕಂಡಿದೆ. ಮಧ್ಯಮ ಶ್ರೇಣಿಯ ಸೂಚ್ಯಂಕವು ವಿಭಿನ್ನ ರೀತಿಯ ನಡೆಯನ್ನು ಪ್ರದರ್ಶಿಸಿದೆ. ವಿಸ್ಮಯವೆಂದರೆ ೨೦೧೮ ರ ಸೆಪ್ಟೆಂಬರ್ ೩ ರಂದು ಈ ಮಧ್ಯಮ ಶ್ರೇಣಿ ಸೂಚ್ಯಂಕವು ೧೭,೦೧೭.೨೬ ರ ವಾರ್ಷಿಕ ಗರಿಷ್ಟ ತಲುಪಿ ನಂತರದಲ್ಲಿ ಕೇವಲ ಒಂದೇ ತಿಂಗಳ ಸಮಯದಲ್ಲಿ ಅಂದರೆ ೯ ನೇ ಅಕ್ಟೊಬರ್ ದಂದು ೧೩,೫೩೮.೬೨ ಕ್ಕೆ ಕುಸಿದು ವಾರ್ಷಿಕ ಕನಿಷ್ಠ ದಾಖಲಿಸಿತು. ಇವುಗಳಲ್ಲಿ ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪನಿಗಳು ಆರ್ಥಿಕ ಒತ್ತಡಗಳ ಕಾರಣದಿಂದ ಅಗಾಧವಾದ ಕುಸಿತಕ್ಕೊಳಗಾದವು. ಮಹಿಂದ್ರಾ ಅಂಡ್ ಮಹಿಂದ್ರಾ ಫೈನಾನ್ಸ್, ಶ್ರೀರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್, ಪಿ ಎನ್ ಬಿ ಹೌಸಿಂಗ್, ರಿಲಯನ್ಸ್ ಕ್ಯಾಪಿಟಲ್, ದಿವಾನ್ ಹೌಸಿಂಗ್ ಫೈನಾನ್ಸ್, ಎಡೆಲ್ವಿಸ್ ಫೈನಾನ್ಷಿಯಲ್ ಸರ್ವಿಸಸ್ ಗಳು ಭಾರಿ ಕುಸಿತಕ್ಕೊಳಗಾಗಿ ಕೆಲವು ವಾರ್ಷಿಕ ಕನಿಷ್ಠದ ದಾಖಲೆ ಮಾಡಿದವು. ಬ್ಯಾಂಕಿಂಗ್ ವಲಯದ ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಆರ್ ಬಿ ಎಲ್ ಬ್ಯಾಂಕ್, ಪಿ ಎನ್ ಬಿ, ಬಂಧನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಕರ್ನಾಟಕ ಬ್ಯಾಂಕ್, ಮುಂತಾದವುಗಳು ಭಾರಿ ಕುಸಿತಕ್ಕೊಳಗಾದವು. ಟಿ ವಿ ಎಸ್ ಮೋಟಾರ್ಸ್, ಅಪೋಲೋ ಟೈರ್ಸ್, ಹೆಚ್ ಈ ಜಿ, ಗ್ರಾಫೈಟ್ ಇಂಡಿಯಾ, ಫಿಲಿಪ್ಸ್ ಕಾರ್ಬನ್, ಕೇರ್ ರೇಟಿಂಗ್ಸ್, ಮೈಂಡ್ ಟ್ರೀ, ಟಾಟಾ ಎಲೆಕ್ಸಿ, ಕ್ವೆಸ್ ಕಾರ್ಪ್, ಎಕ್ಸೈಡ್ , ಬಯೋಕಾನ್, ಗ್ಲೇನ್ ಮಾರ್ಕ್ ಫಾರ್ಮ, ಮಹಿಂದ್ರಾ ಅಂಡ್ ಮಹಿಂದ್ರಾ, ಮಾರುತಿ ಸುಜುಕಿ, ಅಶೋಕ್ ಲೇಲ್ಯಾಂಡ್, ಕೋಲ್ ಇಂಡಿಯಾ, ಗೇಲ್ ಇಂಡಿಯಾ ಮುಂತಾದ ಅಗ್ರಮಾನ್ಯ ಕಂಪನಿಗಳು ಸಹ ಹೆಚ್ಚಿನ ಕುಸಿತಕ್ಕೊಳಗಾಗಿವೆ.
ಮಾರುಕಟ್ಟೆಯಾಧಾರಿತ ಹೂಡಿಕೆ ಆಯ್ಕೆ
ಅಗ್ರಮಾನ್ಯ ಕಂಪೆನಿಗಳನೇಕವು ಅನಿರೀಕ್ಷಿತವಾದ ರೀತಿಯಲ್ಲಿ ಅಪರೂಪದ ಕನಿಷ್ಠ ದರಗಳಿಗೆ ಕುಸಿದಿರುವಾಗ ಸಾಧನೆಯಾಧಾರಿತ, ಆಕರ್ಷಕ ಕಾರ್ಪೊರೇಟ್ ಫಲಗಳನ್ನು ವಿತರಿಸುವಂತಹ ಕಂಪನಿಗಳನ್ನು ದೀರ್ಘಕಾಲೀನ ಹೂಡಿಕೆಯಾಗಿ ಆಯ್ಕೆಮಾಡಿಕೊಳ್ಳಬಹುದು. ಸೆನ್ಸೆಕ್ಸ್ ಕಳೆದ ಒಂದೂವರೆ ತಿನಗಳಲ್ಲಿ ಸುಮಾರು ಎರಡೂವರೆ ಸಾವಿರ ಪಾಯಿಂಟುಗಳನ್ನು ಕುಸಿತ ಕಂಡಿದ್ದರು, ಸೆನ್ಸೆಕ್ಸ್ ಮಟ್ಟದ ಕುಸಿತಕ್ಕಿಂತ ಭಾರಿ ಪ್ರಮಾಣದ ಕುಸಿತವನ್ನು ಕಂಡಿರುವ ಅನೇಕ ಅಗ್ರಮಾನ್ಯ ಕಂಪನಿಗಳಿವೆ. ಈ ಹಂತದಲ್ಲಿ ಒಂದು ಅಂಶವನ್ನು ಗಮನಿಸಬೇಕು. ಅದೆಂದರೆ ೨೦೦೮ ರ ಜನವರಿ ೧೦ ರಂದು ಸೆನ್ಸೆಕ್ಸ್ ೨೧,೨೦೬ ಪಾಯಿಂಟುಗಳ ಅಂದಿನ ಸರ್ವಕಾಲೀನ ಗರಿಷ್ಟ ದಾಖಲಿಸಿತಾದರೂ ೨೦೦೮ ರ ಡಿಸೆಂಬರ್ ನಲ್ಲಿ ೯,೫೩೦ ಪಾಯಿಂಟುಗಳಿಗೆ ಕುಸಿಯಿತು. ಆದರೆ ೨೦೧೦ ರ ಸೆಪ್ಟೆಂಬರ್ ವೇಳೆಗೆ ಮತ್ತೆ ಸೆನ್ಸೆಕ್ಸ್ ೨೦ ಸಾವಿರದ ಗಡಿ ದಾಟಿತು. ಇಂತಹ ಅಗಾಧ ಪ್ರಮಾಣದ ಏರಿಳಿತಗಳ ರಭಸದಲ್ಲಿ ಅನೇಕ ಕಂಪನಿಗಳ ಪ್ರವರ್ತಕರ ಭಾಗಿತ್ವಕ್ಕನುಗುಣವಾದ ಸಂಪತ್ತು ಸಹ ಕರಗಿಹೋಯಿತಾದರೂ, ಕರಗಿದ ಸಂಪತ್ತು ಅದೇ ರೀತಿಯಲ್ಲಿ ಚೇತರಿಸಿಕೊಳ್ಳುವುದು ಸಾಧ್ಯವಾಗದೆ ಇತರೆ ಕಂಪನಿಗಳು ಕಂಡ ಏರಿಕೆಯ ಕಾರಣ ಸೆನ್ಸೆಕ್ಸ್ ಪುಟಿದೆದ್ದಿತು. ಇದಕ್ಕೆ ಎಡಿಎಜಿ ಸಮೂಹ, ಯುನಿಟೆಕ್, ಕೆ ಪಿ ಸಿಂಗ್, ಮುಕೇಶ್ ಅಂಬಾನಿ, ಭಾರತಿ ಏರ್ ಟೆಲ್, ಸ್ಟರ್ ಲೈಟ್ ಮುಂತಾದ ಉದ್ಯಮಿಗಳು ಸಹ ಆ ದಿನಗಳಲ್ಲಿ ತಮ್ಮ ಸಂಪತ್ತು ಕರಗುವುದನ್ನು ಕಂಡಿದ್ದಾರೆ.
ಈ ಸಂದರ್ಭದಲ್ಲಿ ಷೇರುಪೇಟೆಯಲ್ಲಿ ಹೂಡಿಕೆ ಮಾಡುವುದು ಯಾವುದು ಸೂಕ್ತ?
ಸತತವಾಗಿ ಇಳಿಕೆಯನ್ನು ಕಾಣುತ್ತಿರುವ ಈಗಿನ ಷೇರುಪೇಟೆಯಲ್ಲಿ ಸ್ವಲ್ಪಮಟ್ಟಿನ ಸುರಕ್ಷತೆಯ ವಹಿವಾಟು ನಡೆಸುವುದು ಹೇಗೆ ಎಂಬ ಪ್ರಶ್ನೆ ಹೆಚ್ಚಿನವರಲ್ಲಿ ಉದ್ಭವವಾಗಿರುವುದು ಸಹಜ.
ಸಾಮಾನ್ಯವಾಗಿ ಎಲ್ಲರು ಎಸ್ ಐ ಪಿ ವಿಧದಲ್ಲಿ ಹೂಡಿಕೆ ಮಾಡುವುದು ಸರಿಯೆಂಬುದನ್ನು ಗಮನಿಸಿರುತ್ತೀರಿ. ಎಸ್ ಐ ಪಿ ಮಾಧರಿಯ ಹೂಡಿಕೆ ಹೆಚ್ಚಿನವರು ಮ್ಯುಚುಯಲ್ ಫಂಡ್ ಗಳಿಗೆ ಅನ್ವಯಿಸುತ್ತದೆ ಎಂಬ ಕಲ್ಪನೆಯಲ್ಲಿರುತ್ತಾರೆ. ಆದರೆ ಸಹಜವಾಗಿ ಎಸ್ ಐ ಪಿ ವಿಧದಲ್ಲಿ ಈಕ್ವಿಟಿ ಷೇರುಗಳಲ್ಲಿ ನೇರವಾಗಿ ಹೂಡಿಕೆಮಾಡಿ ನಮ್ಮ ಹೂಡಿಕೆಯ ಗುಚ್ಛವನ್ನು ಸದೃಢ ರೀತಿಯಲ್ಲಿ ಬೆಳೆಸಬಹುದು. ಇದಕ್ಕೆ ನಾವು ಮಾಡಬಹುದಾದ ಕ್ರಮಗಳೇನು?
ಕೈಗೊಳ್ಳಬಹುದಾದ ಕ್ರಮಗಳೇನು?
1. ಮೊದಲನೆಯದಾಗಿ ಮಾಸಿಕ ಕಂತುಗಳಲ್ಲಿ ಎಸ್ಐಪಿ ವಿಧದಲ್ಲಿ ಷೇರು ಕೊಳ್ಳಲು ಮೀಸಲಿಡುವ ಹಣವೆಷ್ಟು ಎಂಬುದನ್ನು ನಿರ್ಧರಿಸಿಕೊಳ್ಳಿರಿ.
2. ನಂತರ ನಿಮ್ಮ ಎಸ್ ಐ ಪಿ ಕಂತಿನ ಹಣಕ್ಕೆ ತಕ್ಕಂತೆ ಹತ್ತರಿಂದ ಇಪ್ಪತ್ತು ಸುಭದ್ರ ಕಂಪನಿಗಳ ಪಟ್ಟಿ ಸಿದ್ಧಗೊಳಿಸಿಕೊಳ್ಳಿರಿ.
3. ನಿಮ್ಮ ಹೂಡಿಕೆಯ ಕಂತು ಸಿದ್ಧವಿದ್ದಾಗ, ನೀವು ತಯಾರಿಸಿದ ಪಟ್ಟಿಯಲ್ಲಿ ಯಾವ ಕಂಪನಿಯ ಷೇರು ಹೆಚ್ಚು ಕುಸಿತದಲ್ಲಿದೆ ಎಂಬುದನ್ನು ಪರಿಶೀಲಿಸಿಕೊಳ್ಳಿರಿ.
4. ನಿಮ್ಮ ಎಸ್ ಐ ಪಿ ಹಣಕ್ಕೆ ಆ ಉತ್ತಮ, ಬೆಲೆಕುಸಿತ ಕಂಡಿರುವ ಕಂಪನಿಯ ಷೇರುಗಳನ್ನು ಖರೀದಿಸಿರಿ.
5. ಮುಂದಿನ ಕಂತಿನ ಸಮಯದಲ್ಲಿ, ಪಟ್ಟಿಯಲ್ಲಿ ಇರುವ ಯಾವ ಕಂಪನಿಯ ಷೇರು ಕಡಿಮೆ ದರದಲ್ಲಿದೆ ಎಂಬುದನ್ನು ಪರಿಶೀಲಿಸಿ ಅದನ್ನು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಿರಿ.
6. ಈ ರೀತಿಯ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಹೋದಲ್ಲಿ ಕೆಲವು ವರ್ಷಗಳ ನಂತರದಲ್ಲಿ ಹೂಡಿಕೆ ಗುಚ್ಛವು ಸುಭದ್ರವಾದ ಷೇರುಗಳಿಂದ ಕೂಡಿರುತ್ತದೆ.
7. ಒಂದು ವೇಳೆ ಈ ಹೂಡಿಕೆಗುಚ್ಛದಲ್ಲಿರುವ ಕಂಪನಿಯೊಂದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಅನುಮಾನ ಬಂದಲ್ಲಿ ಅಂತಹ ಷೇರುಗಳನ್ನು ಮಾರಾಟಮಾಡಿ ಮತ್ತೊಂದು ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡಲು ಅವಕಾಶವಾಗುತ್ತದೆ.
8. ಭಾವನಾತ್ಮಕ ಬಾಂಧವ್ಯಕ್ಕೊಳಗಾಗದೆ ಕಂಪೆನಿಯಲ್ಲಡಕವಾಗಿರುವ ಅಂತರ್ಗತವಾದ ಅಂಶಗಳನ್ನರಿತು, ಯೋಗ್ಯತೆಯನ್ನು ನಿರ್ಧರಿಸಿರಿ.
ಉಳಿತಾಯ ಮಾಧರಿಯಾಗಿ ರಚಿಸಿಕೊಂಡ ಈ ಹೂಡಿಕೆ ಗುಚ್ಛದ ಕಂಪೆನಿಗಳಾಗಿ ಆಯ್ಕೆ ಮಾಡಿಕೊಳ್ಳುವಂತಹ ಕಂಪನಿಗಳು, ಉತ್ತಮ ಕಾರ್ಯ ಸಾಧನೆಯ ಸಚ್ಚಾರಿತ್ರತೆಯುಳ್ಳದ್ದಾಗಿದ್ದು , ಆಕರ್ಷಕ ಕಾರ್ಪೊರೇಟ್ ಫಲಗಳನ್ನು ನೀಡುವಂತಾಗಿದ್ದಲ್ಲಿ ಉತ್ತಮ. ಜಾಗತಿಕ, ಸ್ಥಳೀಯ ಬದಲಾವಣೆಗಳ ಪ್ರಭಾವದಿಂದ ಏರುಪೇರು ಪ್ರದರ್ಶಿತವಾದಾಗ ಹೆಚ್ಚು ಸೂಕ್ಷ್ಮತೆಯಿಂದ ಸಂದರ್ಭಕ್ಕನುಗುಣವಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಅತ್ಯವಶ್ಯಕ.
ಫಿಕ್ಸೆಡ್ ಇನ್ ಕಮ್ ಯೋಜನೆಗಳು
ಬ್ಯಾಂಕ್ ಬಡ್ಡಿದರ ಫ್ಲೋಟ್, ಪೆಟ್ರೋಲ್ ದರ ಫ್ಲೋಟ್, ಬಸ್ ಪ್ರಯಾಣದ ದರ ಫ್ಲೋಟ್, ಗ್ರಾಹಕರ ನಿರ್ಧಾರವು ಫ್ಲೋಟ್, ಇನ್ನು ಷೇರಿನ ದರಗಳು ಸಹ ಫ್ಲೋಟ್ ಆಗುವುದು ಸಹಜವಲ್ಲವೇ? ಹಾಗಿದ್ದಲ್ಲಿ ಪರ್ಯಾಯವಾಗಿ ಸ್ಥಿರವಾದ, ಪೂರ್ವ ನಿಗದಿತ ಆದಾಯ ಗಳಿಕೆಗೆ ಯೋಜನೆಗಳು ಲಭ್ಯವೇ ಎಂಬುದು ಪ್ರಶ್ನೆಯಾಗುತ್ತದೆ. ಇತ್ತೀಚಿಗೆ ಬೆಳಕಿಗೆ ಬಂದ ಐ ಎಲ್ ಎಫ್ ಎಸ್ ಸಂಸ್ಥೆಯ ಸುಮಾರು ರೂ.೯೦ ಸಾವಿರ ಕೋಟಿ ಹಗರಣದ ಕಾರಣ ಹೆಚ್ಚಿನ ಮ್ಯುಚುಯಲ್ ಫಂಡ್ ಗಳು, ನಾನ್ ಬ್ಯಾಂಕಿಂಗ್ ಸಂಸ್ಥೆಗಳಲ್ಲದೆ ಸಂಪದ್ಭರಿತ ಉತ್ಪಾದನಾ ಕಂಪನಿಗಳು ಆರ್ಥಿಕ ಒತ್ತಡಕ್ಕೊಳಗಾಗಿವೆ. ಇದರ ನಂತರದಲ್ಲಿ ದಿವಾನ್ ಹೌಸಿಂಗ್ ಫೈನಾನ್ಸ್ ಕಂಪೆನಿಯಿಂದಲೂ ಸಹ ಹೆಚ್ಚಿನ ಕಂಪನಿಗಳಿಗೆ ಆತಂಕ ಮೂಡಿದೆ. ಈ ನಕಾರಾತ್ಮಕ ಪ್ರಭಾವವು ಕೆಲವು ಕಂಪನಿಗಳಿಗೆ ನೇರವಾಗಿ ಮತ್ತೆ ಕೆಲವಕ್ಕೆ ಪರೋಕ್ಷವಾಗಿರುತ್ತದೆ. ಕೆಲವು ಉತ್ಪಾದನಾ ಕಂಪನಿಗಳು ತಮ್ಮಲ್ಲಿರುವ ಹೆಚ್ಚುವರಿ ನಗದನ್ನು, ಅಧಿಕ ಬಡ್ಡಿ ಗಳಿಸುವ ಆಸೆಯಿಂದ ಇಂತಹ ಕಂಪೆನಿಗಳಲ್ಲಿ ಠೇವಣಿ ಕೊಟ್ಟು ಅಪಾಯ ತಂದುಕೊಂಡಿರುತ್ತವೆ. ನಮಗೆ ನಿಗಧಿತ ಪ್ರಮಾಣದ ಆದಾಯ ಬರುತ್ತದೆಂದು ಕೆಲವು ವೇಳೆ ಕಾರ್ಪೊರೇಟ್ ಗಳಲ್ಲಿ ಡಿಪಾಜಿಟ್ ಕೊಡುವುದುಂಟು. ಈಗಿನ ಆರ್ಥಿಕತೆಯಲ್ಲಿ ಇದು ಹೆಚ್ಚು ಅಪಾಯಕಾರವಾಗಿದೆ. ಇನ್ನು ಕಾರ್ಪೊರೇಟ್ ಗಳು ತೇಲಿಬಿಡುವ ಬಾಂಡ್ ಗಳಲ್ಲಿಯಾಗಲಿ, ಎನ್ ಸಿ ಡಿ ಗಳಲ್ಲಾಗಲಿ ಹೂಡಿಕೆ ಮಾಡುವಾಗ ಅತಿ ಹೆಚ್ಚಿನ ಎಚ್ಚರ ಅಗತ್ಯ. ಕಾರಣ ಆರ್ಥಿಕ ಪರಿಸ್ಥಿತಿಯು ಹೆಚ್ಚು ಅಸ್ಥಿರತೆಯತ್ತ ವಾಲಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಕಾರ್ಪೊರೇಟ್ ಗಳು ನಿರಂತರವಾಗಿ ಸಾರ್ವಜನಿಕರಿಂದ ಎನ್ ಸಿ ಡಿ ಮೂಲಕ ಹಣ ಸಂಗ್ರಹಿಸುತ್ತಿವೆ. ಈ ಸಂದರ್ಭದಲ್ಲಿ ಓದುಗರ ಗಮನಕ್ಕೆ ಕೆಲವು ಅಂಶಗಳನ್ನು ತರಬಯಸುತ್ತೇನೆ.
ಶೆಡ್ಯೂಲ್ಡ್ ಬ್ಯಾಂಕ್ ಗಳ ಠೇವಣಿ ಸುರಕ್ಷಿತವೇ?
ಶೆಡ್ಯೂಲ್ಡ್ ಬ್ಯಾಂಕ್ ಗಳಲ್ಲಿ ಇತ್ತೀಚಿಗೆ ಕೆಲವು ಆಕರ್ಷಕ ಬಡ್ಡಿ ದರದಲ್ಲಿ ಎನ್ ಸಿ ಡಿ ಗಳನ್ನು ತೇಲಿಬಿಟ್ಟಿವೆ. ಅದರಲ್ಲಿ ಪ್ರಮುಖವಾದವೆಂದರೆ ೧೨% ರಂತೆ ವಾರ್ಷಿಕ ಬಡ್ಡಿ ನೀಡುವ ಕರ್ನಾಟಕ ಬ್ಯಾಂಕ್, ೧೧.೯೫% ರಂತೆ ವಾರ್ಷಿಕ ಬಡ್ಡಿ ನೀಡುವ ಕರೂರ್ ವೈಶ್ಯ ಬ್ಯಾಂಕ್, ೧೧.೭೫ ರಂತೆ ಪ್ರತಿ ಆರು ತಿಂಗಳಿಗೊಮ್ಮೆ ಬಡ್ಡಿ ನೀಡುವ ಸೌತ್ ಇಂಡಿಯನ್ ಬ್ಯಾಂಕ್ ಗಳಾಗಿವೆ. ಈ ಎನ್ ಸಿ ಡಿ ಗಳು ಆನ್ ಸೆಕ್ಯೂರ್ಡ್ ಎಂಬ ಹಣೆಪಟ್ಟಿ ಹೊಂದಿದ್ದರು ಸಹ, ಇವು ಬ್ಯಾಂಕ್ ಗಳು ವಿತರಿಸಿದ ಕಾರಣ ನಂಬಿಕಾರ್ಹವಾಗಿವೆ. ಈ ಸಂದರ್ಭದಲ್ಲಿ ಬ್ಯಾಂಕ್ ಠೇವಣಿದಾರರ ಗಮನಕ್ಕೆ ತರಬಯಸುವುದೆಂದರೆ ಬ್ಯಾಂಕ್ ಠೇವಣಿಗಳಿಗೆ ರೂ.೧ ಲಕ್ಷ ದವರೆಗೂ ಮಾತ್ರ ಭಾರತೀಯ ರಿಸರ್ವ್ ಬ್ಯಾಂಕ್ ಅಂಗ ಸಂಸ್ಥೆ ಡಿಪಾಜಿಟ ಇಂಶುರಾನ್ಸ್ ಕಾರ್ಪೊರೇಷನ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಆಫ್ ಇಂಡಿಯಾ ವಿಮಾ ಸೌಲಭ್ಯ ನೀಡುತ್ತದೆ. ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಈ ವಿಮೆ ಸೌಲಭ್ಯ ವಿರುವುದಿಲ್ಲ. ಆದರೂ ಸಹ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ನಂಬಿಕೆಯಿಂದ ಲಕ್ಷಗಟ್ಟಲೆ ಠೇವಣಿ ಸಂಗ್ರಹವಾಗುತ್ತಿದೆ. ಇದು ಒಂದು ರೀತಿಯ ಅನಭಿಷಕ್ತ ಸೆಕ್ಯೂರ್ಡ್ ಪಟ್ಟ ಹೊಂದಿದೆ.
ಓದುಗರು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಅಲಂಕಾರಿಕ ಪ್ರಚಾರವೇ ಬೇರೆ- ವಾಸ್ತವವೇ ಬೇರೆ. ಹಾಗಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ತುಲನಾತ್ಮಕ ಪರಿಶೀಲನೆ ಅಗತ್ಯ.