ಮನೆ ನಿರ್ಮಾಣ ಆಗಲಿದೆ ದುಬಾರಿ; ಕಾರ್ಮಿಕರು, ವಸ್ತುಗಳಿಗೆ ಸಿಕ್ಕಾಪಟ್ಟೆ ಕೊರತೆ
"ನಮ್ಮ ಹತ್ತಿರ ಇದ್ದ ಇಟ್ಟಿಗೆಯ ಹಳೇ ಸ್ಟಾಕ್ ಖಾಲಿ ಮಾಡ್ತಾ ಇದೀವಿ. ಹೊಸದಾಗಿ ಯಾವ ಕೆಲಸಕ್ಕೂ ಜನ ಸಿಗುತ್ತಿಲ್ಲ. ಉಳಿದ ಕಡೆಯೂ ಅದೇ ಥರ ಆಗಿದೆ. ಒಂದು ಸಲ ಇವೆಲ್ಲ ಖಾಲಿ ಆದ ಮೇಲೆ ಮನೆ ಕಟ್ಟುವ ಸಿಮೆಂಟ್, ಇಟ್ಟಿಗೆ, ಮರಳು ಸೇರಿದಂತೆ ಕಾರ್ಮಿಕರ ಕೂಲಿ ಸಹ ಜಾಸ್ತಿ ಆಗಬಹುದು" ಎಂದರು ರಘುವನಹಳ್ಳಿಯಲ್ಲಿ ಇಟ್ಟಿಗೆ ಗೂಡನ್ನು ನಡೆಸುವ ಬಿ. ಲೋಕೇಶ್.
ಯಾವುದಕ್ಕೂ ಕಚ್ಚಾ ವಸ್ತುಗಳು ಸಿಗುತ್ತಿಲ್ಲ. ಕೊರೊನಾ ಲಾಕ್ ಡೌನ್ ನಿಂದ ಏನೇ ವಿನಾಯಿತಿ ಕೊಟ್ಟಿದ್ದರೂ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದವರು ಕೆಲಸಕ್ಕೆ ವಾಪಸ್ ಬರುತ್ತಿಲ್ಲ. ಈಗಾಗಲೇ ಮನೆಗಳನ್ನು ಕಟ್ಟಲು ಶುರು ಮಾಡಿ, ವಿವಿಧ ಹಂತಗಳಲ್ಲಿ ಕೆಲಸ ನಿಂತಿದ್ದವರು ಹೇಗೋ ಕಷ್ಟಪಟ್ಟು ಪೂರ್ತಿ ಮಾಡಬಹುದು. ಆದರೆ ಹೊಸದಾಗಿ ಕೆಲಸ ಆರಂಭಿಸಬೇಕು ಅಂದರೆ ಕಟ್ಟಡ ಕಾರ್ಮಿಕರಿಂದ ಮೊದಲುಗೊಂಡು ಎಲ್ಲಕ್ಕೂ ಕೊರತೆ ಇದೆ ಅನ್ನೋದು ಇದೇ ವೃತ್ತಿಯಲ್ಲಿ ಇರುವವರಿಂದ ಗೊತ್ತಾಗುವ ಸಂಗತಿ.
ಬೇರೆ ಊರು, ರಾಜ್ಯಗಳ ಕಾರ್ಮಿಕರು ವಾಪಸ್ ಬಂದಿಲ್ಲ
ಬೇರೆ ಊರು ಅಥವಾ ರಾಜ್ಯಗಳಿಂದ ಕಾರ್ಮಿಕರು ವಾಪಸಾಗಿಲ್ಲ. ಸ್ಥಳೀಯವಾಗಿ ಸಿಗುವ ಕಾರ್ಮಿಕರಲ್ಲಿ ಒಂದೋ ಕೌಶಲದ ಕೊರತೆ ಇರುತ್ತದೆ. ಇಲ್ಲದಿದ್ದಲ್ಲಿ ಸಿಕ್ಕಾಪಟ್ಟೆ ಕೂಲಿ ಕೇಳುತ್ತಾರೆ. ಈ ಹಿಂದೆ ಬೇಡಿಕೆಗಿಂತ ಹೆಚ್ಚಿನ ಪೂರೈಕೆ ಇತ್ತು. ಕಾರ್ಮಿಕರ ಕೂಲಿಗೆ ಚೌಕಾಶಿ ಮಾಡುವುದಕ್ಕೆ ಅವಕಾಶ ಇತ್ತು. ಈಗಂತೂ ಅದು ಸಾಧ್ಯವೇ ಆಗುತ್ತಿಲ್ಲ. ಇನ್ನು ಏಕ ಕಾಲಕ್ಕೆ ಹಲವು ಕಡೆಯಿಂದ ಕೆಲಸ ಬರುತ್ತಿರುವುದರಿಂದ ಎಲ್ಲಿ ಹೆಚ್ಚಿನ ಹಣ ಹಾಗೂ ಕೆಲಸ ಇದೆಯೋ ಅಂಥದ್ದನ್ನೇ ಆರಿಸಿಕೊಳ್ಳಲಾಗುತ್ತಿದೆ. ಮನೆಗಳಲ್ಲಿ ಸಣ್ಣ- ಪುಟ್ಟ ಸಿವಿಲ್ ವರ್ಕ್ ಗಳಿದ್ದರಂತೂ ಪರಿಸ್ಥಿತಿ ಇನ್ನೂ ಕಷ್ಟ. ಏಕೆಂದರೆ, ಅಷ್ಟು ಕಡಿಮೆ ಕೆಲಸವೇ ಆದರೂ ಕೂಲಿ ಸೇರಿದಂತೆ ಮತ್ತಿತರ ವಸ್ತುಗಳ ಬೆಲೆ ದುಬಾರಿ ಆಗುತ್ತದೆ.
ಪೇಂಟಿಂಗ್, ಮರದ ಕೆಲಸ ಇಂಥದ್ದರಲ್ಲಿ ಉತ್ತರ ಭಾರತೀಯರೇ ಹೆಚ್ಚು
ಬೆಂಗಳೂರಿನಂಥ ನಗರ ಹಾಗೂ ದಕ್ಷಿಣ ಭಾರತದ ಪ್ರಮುಖ ನಗರ, ಪಟ್ಟಣಗಳಿಂದ ವಾಪಸ್ ತೆರಳಿದವರಲ್ಲಿ ಉತ್ತರ ಭಾರತೀಯರ ಪ್ರಮಾಣವೇ ಹೆಚ್ಚು. ಪೇಂಟಿಂಗ್, ಮರದ ಕೆಲಸ, ಫ್ಲೋರಿಂಗ್, ಎಲೆಕ್ಟ್ರಿಕ್ ಹೀಗೆ ಕಟ್ಟಡವೊಂದು ಎದ್ದು ನಿಂತ ನಂತರದ ಕೆಲಸಗಳನ್ನು ಮಾಡುತ್ತಿದ್ದವರು ಹೆಚ್ಚು. ಮನೆಯೊಂದರ ನಿರ್ಮಾಣದ ಒಟ್ಟಾರೆ ಖರ್ಚನ್ನು ಲೆಕ್ಕ ಹಾಕಿಕೊಂಡರೆ ಇವುಗಳ ವೆಚ್ಚದ ಪ್ರಮಾಣ ಕೂಡ ಹೆಚ್ಚು. ಆದರೆ ಈಗ ಈ ಕೆಲಸಗಳನ್ನು ಮಾಡುವುದಕ್ಕೆ ಕಾರ್ಮಿಕರು ಸಿಗುತ್ತಿಲ್ಲ. ಇವುಗಳಿಗೆ ಬೇಕಾದ ವಸ್ತುಗಳು ಸಹ ಮಾರುಕಟ್ಟೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಪೂರೈಕೆ ಸಹ ಆಗುತ್ತಿಲ್ಲ. ಕಟ್ಟಡ ನಿರ್ಮಾಣದ ಕೊನೆ ಹಂತದಲ್ಲಿ ಇರುವವರಿಗೆ ಅಂದುಕೊಂಡಿದ್ದಕ್ಕಿಂತ ಬೆಲೆ ಹೆಚ್ಚಾಗುತ್ತಿದೆ.
ಏಕಾಏಕಿ ಹೆಚ್ಚು ಕಾರ್ಮಿಕರ ಕೂಲಿ
ಕಟ್ಟಡ ಕಾಂಟ್ರ್ಯಾಕ್ಟರ್ ಅನ್ಬು ಎಂಬುವವರು ಗುಡ್ ರಿಟರ್ನ್ಸ್ ಕನ್ನಡದ ಜತೆ ಮಾತನಾಡಿದ್ದು, ಕಾರ್ಮಿಕರ ದಿನದ ಕೂಲಿ 600- 650 ರುಪಾಯಿಯನ್ನು ದಾಟುತ್ತಿದೆ. ಲೇಬರ್ ಕಾಂಟ್ರ್ಯಾಕ್ಟ್ ವಹಿಸಿಕೊಂಡಿದ್ದ ಕೆಲಸಗಳನ್ನು ಪೂರ್ತಿ ಮಾಡುವುದರಲ್ಲಿ ನಮಗೇ ನಷ್ಟ ಆಗುವ ಹಾಗೆ ಕಾಣುತ್ತಿದೆ. ಸದ್ಯಕ್ಕೆ ಹೊಸ ಕೆಲಸಗಳನ್ನು ಒಪ್ಪಿಕೊಳ್ಳುವುದು ನಿಲ್ಲಿಸಿ ಬಿಟ್ಟಿದ್ದೀವಿ. ಏಕೆಂದರೆ, ತಂತಮ್ಮ ಊರುಗಳಿಗೆ ವಾಪಸಾಗಿರುವವರು ಮತ್ತೆ ಕೆಲಸಕ್ಕೆ ಬರುವುದಕ್ಕೆ ಆಲೋಚಿಸುತ್ತಿದ್ದಾರೆ. ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರ್ಕಾರ ಇನ್ನೇನು ಹೊಸ ನಿಯಮ ತರಬಹುದೋ ಎಂಬ ಭಯವೂ ಅವರಲ್ಲಿ ಇದೆ. ಇನ್ನು ಸರ್ಕಾರದಿಂದ ಕೂಡ ವಲಸೆ ಕಾರ್ಮಿಕರಿಗೆ ನಾನಾ ಯೋಜನೆ ಘೋಷಣೆ ಮಾಡಿರುವುದರಿಂದ ಈಗಿನ ಸನ್ನಿವೇಶ ಇದೆ ಎನ್ನುತ್ತಾರೆ.
15 ಪರ್ಸೆಂಟ್ ವೆಚ್ಚ ಹೆಚ್ಚಾಗಬಹುದು
ಈಗ ಮನೆ ಕಟ್ಟಿಸಲು ಶುರು ಮಾಡದಿರುವುದು ಉತ್ತಮ. ದುಬಾರಿ ಆಗಬಹುದು, ಕೆಲಸ ನಿಧಾನ ಆಗಬಹುದು ಹಾಗೂ ಜತೆಗೆ ಗುಣಮಟ್ಟದ ವಸ್ತುಗಳು, ಕೆಲಸಗಾರರು ಸಿಗುವುದು ಸಹ ಕಷ್ಟವಿದೆ. ಈ ಪರಿಸ್ಥಿತಿಯಲ್ಲಿ ಚೇತರಿಕೆ ಕಾಣಿಸಿಕೊಳ್ಳುವುದಕ್ಕೆ ಎಷ್ಟು ಸಮಯ ಬೇಕಾಗಬಹುದು ಎಂಬುದನ್ನು ಈಗಲೇ ಹೇಳುವುದು ಕಷ್ಟವಿದೆ. ಬ್ಯಾಂಕ್ ಗಳಲ್ಲಿ ಹೌಸಿಂಗ್ ಲೋನ್ ಬಡ್ಡಿ ದರ ಕಡಿಮೆ ಆಗಿದೆ ಅನ್ನೋ ಕಾರಣಕ್ಕೆ ಮನೆ ಕೆಲಸವನ್ನು ಹಿಡಿದು ಬಿಟ್ಟರೆ ನಿರ್ಮಾಣ ವೆಚ್ಚದಲ್ಲಿ ಈ ಹಿಂದಿಗಿಂತ ಕನಿಷ್ಠ 15 ಪರ್ಸೆಂಟ್ ವೆಚ್ಚ ಹೆಚ್ಚಾಗಬಹುದು ಎಂಬುದು ಇದೇ ಕ್ಷೇತ್ರದಲ್ಲಿ ಇರುವವರ ಮಾತು. ಈ ಮಧ್ಯೆ ಅಪಾರ್ಟ್ ಮೆಂಟ್ ಗಳನ್ನು ಖರೀದಿಸಬೇಕು ಎಂದಿದ್ದವರಿಗೆ ವಾಸಕ್ಕೆ ಸಿದ್ಧವಾಗಿರುವ ಫ್ಲ್ಯಾಟ್ ಗಳು ಕಡಿಮೆ ದರಕ್ಕೆ ಸಿಗುತ್ತಿವೆ. ಕೆಲವು ಅಪಾರ್ಟ್ ಮೆಂಟ್ ಗಳ ಕೆಲಸ ಅರ್ಧಕ್ಕೆ ನಿಂತಿದೆ.