ಎಕೋ ಫ್ರೆಂಡ್ಲಿ, ಬಜೆಟ್ ಫ್ರೆಂಡ್ಲಿ ಮನೆ ಕಟ್ಟಬೇಕು ಅಂತಿದ್ದೀರಾ? ನಿಮಗೆ ನೆರವಾಗೋದು 'ಸತ್ಯ'
ಎಕೋ ಫ್ರೆಂಡ್ಲಿ ಹಾಗೂ ಬಜೆಟ್ ಫ್ರೆಂಡ್ಲಿ ಮನೆ ಕಟ್ಟಬೇಕು ಅನ್ನೋದು ನಿಮ್ಮ ಉದ್ದೇಶವಾ? ಹಾಗಿದ್ದಲ್ಲಿ ಈ ಲೇಖನದಿಂದ ನಿಮಗೆ ಖಂಡಿತಾ ಉಪಯೋಗ ಆಗುತ್ತದೆ. ಏಕೆಂದರೆ, ಪರಿಸರ ಸ್ನೇಹಿಯಾದ ಮನೆಯನ್ನು ನಮ್ಮ ಜೇಬಿಗೆ ವಜ್ಜೆ ಆಗದಂತೆ ಕಟ್ಟುವುದು ಸುಲಭದ ಮಾತಲ್ಲ. ಇನ್ನು ಇಂಥ ಮನೆಯನ್ನು ಕಟ್ಟುವುದಕ್ಕೆ ತಜ್ಞರು ಬೇಕೇಬೇಕು.
ಮನೆ ಕಟ್ಟಬೇಕು ಅಂದುಕೊಂಡ ಮೇಲೆ ಅದಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕುವುದು ಮೊದಲ ಹೆಜ್ಜೆಯಾಗಿರುತ್ತದೆ. ನಿಮ್ಮ ಪಾಲಿಗೆ ಆ ಮೊದಲ ಹೆಜ್ಜೆಯ ಹೆಸರು "ಸತ್ಯ ಕನ್ಸಲ್ಟೆಂಟ್ಸ್" ಆಗಬಹುದು. ನಿಮಗೆ ನೆನಪಿರಲಿ, ಇಲ್ಲಿ ಮಾರ್ಗದರ್ಶನ, ಸಲಹೆ- ಸೂಚನೆ, ತಾಂತ್ರಿಕ ನೆರವು ನೀಡಲಾಗುತ್ತದೆ. ಸತ್ಯ ಪ್ರಕಾಶ್ ವಾರಣಾಶಿ ಅವರು ಈ ಕೆಲಸವನ್ನು ಕೈಂಕರ್ಯ ಅನ್ನೋ ಹಾಗೆ ಮಾಡುತ್ತಿದ್ದಾರೆ.
ಬೆಂಗಳೂರಿನ ಬನಶಂಕರಿ ಮೂರನೇ ಹಂತದ ಕತ್ರಿಗುಪ್ಪೆಯಲ್ಲಿ ಸತ್ಯ ಕನ್ಸಲ್ಟೆಂಟ್ಸ್ ಕಚೇರಿ ಇದೆ. ಅಲ್ಲಿರುವ ಬಹುತೇಕರು ಯುವಕ- ಯುವತಿಯರ ಮಧ್ಯೆ ನಿಮಗೆ ಕಾಣಲು ಸಿಗುವವರು ಸತ್ಯ ಪ್ರಕಾಶ್.
ನೈಸರ್ಗಿಕ ಬೆಳಕಿನೊಂದಿಗೆ, ಗಾಳಿ ಯಥೇಚ್ಛ
ಏಸಿ ಇಲ್ಲದೆ, ನೈಸರ್ಗಿಕ ಬೆಳಕಿನೊಂದಿಗೆ, ಗಾಳಿ ಯಥೇಚ್ಛವಾಗಿರುವಂತೆ, ಪರಿಸರಸ್ನೇಹಿ ವಸ್ತುಗಳನ್ನೇ ಬಳಸಿ, ಕಡಿಮೆ ಖರ್ಚಿನಲ್ಲಿ ಮನೆ ಕಟ್ಟುವುದು ಹೇಗೆ ಎಂದು ಪಾಠ ಮಾಡುವುದನ್ನು ವೃತ್ತಿಯ ಭಾಗ ಮಾಡಿಕೊಂಡಿದ್ದಾರೆ ಸತ್ಯ ಪ್ರಕಾಶ್. "ಕೊರೊನಾ ನಂತರ ನಿರ್ಮಾಣ ವೆಚ್ಚ ದುಬಾರಿಯಾಗಿ ಹೋಯಿತು. ಡೀಸೆಲ್ ರೇಟ್ ಇಷ್ಟಾಗಿದೆ. ಇದರಿಂದ ವಸ್ತುಗಳ ಸಾಗಣೆ ವೆಚ್ಚ ಮತ್ತು ದಿನಗೂಲಿ ಜಾಸ್ತಿ ಆಯಿತು. ಬೆಂಗಳೂರಿನಲ್ಲಿ ಮನೆ ಕಟ್ಟುವುದು ಇವತ್ತಿನ ಮಟ್ಟಿಗೆ ದುಬಾರಿ ವಿಷಯವೇ. ಇನ್ನೇನು ಬಿಬಿಎಂಪಿಯಿಂದಲೂ ಕಟ್ಟಡದ ಪ್ಲ್ಯಾನ್ ಸ್ಯಾಂಕ್ಷನ್ ಮತ್ತಿತರ ಫೀ ಜಾಸ್ತಿ ಮಾಡ್ತಾರಂತೆ. ಅಲ್ಲಿಗೆ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರ ಮನೆ ಕಟ್ಟುವ ಆಸೆ ಕೈ ಬಿಟ್ಟಂತೆಯೇ," ಎಂದು ಮಾತು ಶುರು ಮಾಡಿದರು. .
ಬಜೆಟ್ ಹಾಗೂ ಎಕೋ ಫ್ರೆಂಡ್ಲಿ ಮನೆ ಕಟ್ಟುವುದರಲ್ಲೇ ನಿಷ್ಣಾತರು
ಮಂಗಳೂರು ಮೂಲದ ಈ ಎಂಜಿನಿಯರ್ ಸತ್ಯ ಪ್ರಕಾಶ್ ಅವರಿಗೆ 40 ವರ್ಷಗಳಿಗೆ ಮೀರಿದ ಅನುಭವ ಇದೆ. ಅದರಲ್ಲೂ ಬಜೆಟ್ ಹಾಗೂ ಎಕೋ ಫ್ರೆಂಡ್ಲಿ ಮನೆ ಕಟ್ಟುವುದರಲ್ಲೇ ನಿಷ್ಣಾತರು. ಇಂಥ ಮನೆ ಕಟ್ಟಬೇಕು ಎಂದು ಬರುವವರ ಜತೆ ಸೆಷನ್ ರೀತಿಯಲ್ಲಿ ತುಂಬ ತಾಳ್ಮೆಯಿಂದ ಪಾಠ ಮಾಡುತ್ತಾರೆ. ಮನೆಗೆ ಬಳಸಬಹುದಾದ ಇಟ್ಟಿಗೆ, ಫ್ಲೋರಿಂಗ್, ಪಾಯ- ರೂಫಿಂಗ್ ನ ವಿವಿಧ ಬಗೆಗಳು, ಆಕರ್ಷಕವಾದ ವಿನ್ಯಾಸಗಳ ಮಾದರಿ ಇತ್ಯಾದಿಯನ್ನು ವಿಸ್ತಾರವಾಗಿ ವಿವರಿಸುತ್ತಾರೆ. ಮಾಹಿತಿ ಪಡೆಯಲು ಬಂದವರು ಸತ್ಯ ಅವರ ಬಳಿಯೇ ಕೆಲಸ ಮಾಡಿಸಬೇಕು ಎಂಬ ಕಡ್ಡಾಯ ಇಲ್ಲ.
ಸಾಧಕ- ಬಾಧಕ, ಬಜೆಟ್, ಸವಾಲುಗಳು ಗೊತ್ತಿರುವುದಿಲ್ಲ
"ಹಲವರಿಗೆ ಎಕೋ ಫ್ರೆಂಡ್ಲಿ ಮನೆ ಕಟ್ಟಬೇಕು ಅಂತ ಉದ್ದೇಶ ಮಾತ್ರ ಇರುತ್ತದೆ. ಅದರ ಸಾಧಕ- ಬಾಧಕ, ಬಜೆಟ್, ಸವಾಲುಗಳು ಏನೇನೂ ಗೊತ್ತಿರುವುದಿಲ್ಲ. ಅವರಿಗೆ ಮೊದಲು ಮಾಹಿತಿ ನೀಡಬೇಕು. ಅದಕ್ಕಾಗಿಯೇ ಎರಡು- ಮೂರು ಸೆಷನ್ ಗಳಷ್ಟು ಅವರ ಜತೆ ಮಾತನಾಡುತ್ತೇನೆ. ಅವರ ಅಗತ್ಯ ತಿಳಿದು, ನಿರ್ಧಾರ ಗಟ್ಟಿಯಾದ ಮೇಲೆ ನಮ್ಮ ಕೆಲಸ ಶುರು ಮಾಡುತ್ತೇವೆ," ಎಂದರು ಸತ್ಯ. ಆಗಲೂ ಅಷ್ಟೇ. ಇವರ ಬಳಿ ಹೋಗುವವರಿಗೆ ಪರಿಚಿತರು ಅಥವಾ ಅದಾಗಲೇ ಗೊತ್ತು ಮಾಡಿದ ಬಿಲ್ಡರ್ ಇದ್ದಲ್ಲಿ ಅವರ ಜತೆಯೂ ಮಾತುಕತೆ ನಡೆಸಿ, ವಿವರಿಸುತ್ತಾರೆ. ಇನ್ನು ಕಟ್ಟಡ ನಿರ್ಮಾಣದ ವಸ್ತುಗಳು, ಅಂಥ ನಿರ್ಮಾಣಕ್ಕೆ ಸೂಕ್ತವಾದ ವ್ಯಕ್ತಿಗಳು ಎಲ್ಲಿ ಸಿಗುತ್ತಾರೆ ಎಂಬ ಮಾಹಿತಿ ಬೇಕೆಂದಲ್ಲಿ ಅದನ್ನೂ ನೀಡುತ್ತಾರೆ.
ವೆಬ್ ಸೈಟ್, ಯೂಟ್ಯೂಬ್ ಚಾನೆಲ್, ಫೇಸ್ ಬುಕ್ ಪೇಜ್
ಸತ್ಯ ಅವರು ಪತ್ರಿಕೆಗಳ ಅಂಕಣಕಾರರು. ಯೂಟ್ಯೂಬ್ ನಲ್ಲಿ ಅವರ ವಿಡಿಯೋ ಮತ್ತು ಸಂದರ್ಶನ ಸಹ ಸಿಗುತ್ತದೆ. ಕನ್ನಡದಲ್ಲೇ ಮಾತುಕತೆ ನಡೆಸಬಹುದಾದ ಎಂಜಿನಿಯರ್ ಇವರು. ವಾಸ್ತು ವಿಚಾರವಾಗಿಯೂ ಆತಂಕ ಪಡುವ ಅಗತ್ಯ ಇಲ್ಲ. ಸತ್ಯ ಕನ್ಸಲ್ಟೆಂಟ್ಸ್ ಹೆಸರಲ್ಲಿ ವೆಬ್ ಸೈಟ್, ಫೇಸ್ ಬುಕ್ ಪೇಜ್, ಇನ್ ಸ್ಟಾಗ್ರಾಮ್ ಹಾಗೂ ದೇಶ ಫೋರಂ ಎಂಬ ಯೂಟ್ಯೂಬ್ ಚಾನೆಲ್ ಇದೆ. ಇವೆಲ್ಲವೂ ಸತ್ಯ ಪ್ರಕಾಶ್ ವಾರಣಾಶಿ ಅವರ ಬಗ್ಗೆ ಮತ್ತು ಆಲೋಚನಾ ಕ್ರಮಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡುತ್ತವೆ. ಒಂದು ವೇಳೆ ಭೇಟಿ ಮಾಡಬೇಕು ಎಂದಿದ್ದಲ್ಲಿ ಮಾತ್ರ ಮುಂಚಿತವಾಗಿಯೇ ಅಪಾಯಿಂಟ್ ಮೆಂಟ್ ಪಡೆಯಬೇಕು. ಕೊನೆಗೊಂದು ಮಾತು: ಕಟ್ಟಡ ನಿರ್ಮಾಣದ ವಿಚಾರಕ್ಕೆ ಬಂದಲ್ಲಿ ಯಾವುದೇ ಬೈ ಲಾಗಳನ್ನು ಮೀರುವವರಲ್ಲ. ಇದನ್ನು ಸ್ಪಷ್ಟವಾಗಿ ಹೇಳಿಬಿಡುತ್ತಾರೆ.