ಬೆಂಗಳೂರಿಗೆ ಹತ್ತಿರದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಿಂದ ಜನರು ಬರುತ್ತಿದ್ದರು. ಬೆಂಗಳೂರಲ್ಲೇ ಹಗಲು- ರಾತ್ರಿ ಅಂತ ನೋಡದೆ ದುಡಿಯುತ್ತಿದ್ದರು. ಇದು ಕೆಲವರ ಪಾಲಿಗೆ ಫುಲ್ ಟೈಮ್ ದುಡಿಮೆ ಆಗಿದ್ದರೆ, ಹಲವರಿಗೆ ಪಾರ್ಟ್ ಟೈಮ್ ಆಗಿರುತ್ತಿತ್ತು.
ತಮ್ಮ ಮೂಲ ಕಸುಬು ಅಷ್ಟೇನೂ ಬಿಜಿ ಆಗಿರದ ಕಾಲದಲ್ಲಿ ಬೆಂಗಳೂರಿಗೆ ಬಂದುಬಿಡುತ್ತಿದ್ದರು. ಏಕೆಂದರೆ ದುಡಿಮೆಗೆ ಸಿಕ್ಕಾಪಟ್ಟೆ ಅವಕಾಶ ಇರುತ್ತಿತ್ತು. ಆದರೆ ಬೆಂಗಳೂರು ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ. ಮುಂಚಿನಂತೆ ಉದ್ಯೋಗ- ಕಸುಬಿಗಾಗಿ ಬೆಂಗಳೂರು ಹುಡುಕಿಕೊಂಡು ಕರ್ನಾಟಕದ ನಾನಾ ಭಾಗಗಳಿಂದ ಹಾಗೂ ಭಾರತದ ನಾನಾ ರಾಜ್ಯಗಳಿಂದ ಜನರು ಇನ್ನು ಮುಂದೆಯೂ ಬರಬಹುದಾ ಎಂಬ ಬಗ್ಗೆಯೂ ಪ್ರಶ್ನೆಗಳಿವೆ.
ಕೊರೊನಾದ ಹೊಡೆತಕ್ಕೆ ಎಲ್ಲ ವರ್ಗದವರೂ ತತ್ತರಿಸಿ ಹೋಗಿದ್ದಾರೆ. ಬೆಂಗಳೂರಿನಲ್ಲಿ ಇನ್ನು ಕೆಲಸಕ್ಕೆ ಹೋಗಿ, ಸಂಬಳ ದುಡಿದು, ಬಾಡಿಗೆ ಕಟ್ಟಿಕೊಂಡು, ತಮ್ಮ ಊರಿಗೆ ಹಣ ಕಳುಹಿಸಿ... ಅದರ ಮೇಲೆ ಉಳಿತಾಯ ಮಾಡುವುದು ಅಸಾಧ್ಯದ ಮಾತು ಎಂದೆನಿಸಿ ಆಗಿದೆ. ಉತ್ತರ ಭಾರತದ ರಾಜ್ಯಗಳಿಂದ ಹಾಗೂ ಪಕ್ಕದ ತಮಿಳುನಾಡು, ಆಂಧ್ರದಿಂದ ಬಂದಿದ್ದವರು ಸಹ ಕಂತು ಕಂತಿನಲ್ಲಿ ಟೆಂಟನ್ನೇ ಕಿತ್ತುಕೊಂಡು, ಬೆಂಗಳೂರಿನಿಂದ ಹೊರಬಿದ್ದಿದ್ದಾರೆ.
ಮನೆಗಳು ಖಾಲಿ ಖಾಲಿ
ಹೋಟೆಲ್ ಗಳನ್ನು ಖಾಲಿ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಶಾಪಿಂಗ್ ಮಾಲ್ ಗಳಲ್ಲಿ ಮಳೆಗೆಗಳು ಖಾಲಿ. ಕೆಲವು ಬಡಾವಣೆಗಳಲ್ಲಿ ಬಾಡಿಗೆಗೆ ಮನೆಗಳು ಸಿಕ್ಕಾಪಟ್ಟೆ ಇವೆ. ಕೇಳುವವರೇ ಇಲ್ಲದಂತಾಗಿದೆ. ಅದರಲ್ಲೂ ಕೈಗಾರಿಕೆ ಪ್ರದೇಶಗಳಿಗೆ ಹತ್ತಿರ ಇದ್ದ ಕಡೆಗಳಲ್ಲಿ ಮನೆಗಳು ಖಾಲಿ ಇವೆ. ಆದರೆ ಅವುಗಳನ್ನು ಕೇಳುವವರಿಲ್ಲ. ಬಾಡಿಗೆಯನ್ನು ಆದಾಯವಾಗಿ ನೆಚ್ಚಿಕೊಂಡಿದ್ದವರು ಸಹ ಕಂಗಾಲಾಗಿದ್ದಾರೆ. ಊರುಗಳಿಗೆ ವಾಪಸಾದ ಬಾಡಿಗೆದಾರರು ಹಿಂತಿರುಗಿಲ್ಲ. ಇನ್ನೂ ಕೆಲವರು ಮನೆಗಳನ್ನೇ ಖಾಲಿ ಮಾಡಿದ್ದಾರೆ. ಪೇಯಿಂಗ್ ಗೆಸ್ಟ್ ಗಳಾಗಿ ಇದ್ದವರದು ಸಹ ಇದೇ ಕಥೆ. ಆದರೆ ಇದಕ್ಕೆ ವಿರುದ್ಧ ಎಂಬಂತೆ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳು ಸೇರಿದಂತೆ ಇತರ ಕೆಲಸ- ಕಾರ್ಯಗಳು ಜೀವ ಪಡೆದಿವೆ.
ಬೇಸಾಯಕ್ಕೆ ಬೇಕಾದಷ್ಟು ಜನರು ಸಿಗುತ್ತಿದ್ದಾರೆ
"ಇದೇ ಮೊದಲ ಬಾರಿಗೆ ನಮ್ಮ ಜಮೀನಿನಲ್ಲಿ ಬೇಸಾಯಕ್ಕೆ ಏನೂ ಸಮಸ್ಯೆ ಆಗಲಿಲ್ಲ. ಎಲ್ಲರೂ ಹುಡುಗರು. ಬೆಂಗಳೂರಿನಿಂದ ಬಂದಿದ್ದವರು ಹೆಚ್ಚು. ಉಡುಪಿ, ಮುಂಬೈ, ಚೆನ್ನೈ ಹೀಗೆ ನಾನಾ ಕಡೆಗಳಿಂದ ವಾಪಸ್ ಮನೆಗೆ ಬಂದಿದ್ದಾರೆ. ಇವರಿಗೆಲ್ಲ ಬೇಸಾಯ ಗೊತ್ತು. ಆದರೆ ಸಂಪಾದನೆ ಅಂದುಕೊಂಡು ಬೇರೆ ಬೇರೆ ಪಟ್ಟಣ- ನಗರಗಳಿಗೆ ಹೋಗಿದ್ದರು. ನಮಗೆ ಬೇಸಾಯಕ್ಕೆ ಜನರೇ ಸಿಗುವುದೇ ಕಷ್ಟವಾಗಿ ಹೋಗಿತ್ತು. ಈ ಸಲ ಆ ಸಮಸ್ಯೆ ಆಗಲಿಲ್ಲ. ಜತೆಗೆ ಕೂಲಿ ಹಣಕ್ಕೂ ಬಹಳ ಬೇಡಿಕೆ ಅಂತೇನೂ ಇಲ್ಲ. ಮನೆಯಲ್ಲಿ ಇರುವ ಬದಲು ಕೆಲಸ ಕೊಡಿ ಎಂದು ಕೇಳಿಕೊಂಡು ಬರವವರೇ ಹೆಚ್ಚು. ಕೊರೊನಾದಿಂದ ಆದ ಅನುಕೂಲ ಇದು. ನಮ್ಮ ಊರಿನ ಹುಡುಗ- ಹುಡುಗಿಯರನ್ನು ಮತ್ತೆ ದಿನವೂ ನೋಡುವ ಹಾಗಾಯಿತು. ಜತೆಗೆ ಕೃಷಿ ವೃತ್ತಿ ಉಳಿಯಬಹುದು ಎಂಬ ನಂಬಿಕೆ ಕೂಡ ಬರುತ್ತಿದೆ" ಎಂದರು ತೀರ್ಥಹಳ್ಳಿ ತಾಲೂಕಿನ ನೆಂಪೆಯಲ್ಲಿ ಅಡಿಕೆ ಕೃಷಿ ಮಾಡುವ ಕೃಷಿಕ ಕೃಷ್ಣಸ್ವಾಮಿ.
ಬೆಂಗಳೂರು ಸುತ್ತಮುತ್ತಲಿಂದ ಬರುತ್ತಿದ್ದರು
ಬೆಂಗಳೂರಿಗೆ ಹತ್ತಿರದ ಜಿಲ್ಲೆಗಳಿಂದ ಶನಿವಾರ- ಭಾನುವಾರಗಳಂದು ಬಂದು, ಕ್ಯಾಬ್ - ಆಟೋಗಳನ್ನು ಓಡಿಸುತ್ತಿದ್ದವರು, ಗಾರ್ಮೆಂಟ್ ಗಳಿಗೆ ಕೆಲಸಕ್ಕೆ ಬರುತ್ತಿದ್ದವರು ಇದ್ದರು. ಇದೀಗ ಈ ಎಲ್ಲಕ್ಕೂ ಪೆಟ್ಟು ಬಿದ್ದಿದೆ. ಇನ್ನು ಬೇಡಿಕೆ ಕಡಿಮೆ ಆಗಿರುವುದರಿಂದ ಕೆಲವು ಫ್ಯಾಕ್ಟರಿಗಳಲ್ಲಿ ಕೆಲಸದಿಂದ ತೆಗೆದು ಹಾಕಲಾಗಿದೆ. ಇನ್ನು ಏಕಾಏಕಿ ಕಾರ್ಮಿಕರ ಲಭ್ಯತೆ ಪ್ರಮಾಣ ಹೆಚ್ಚಾಗಿದ್ದು, ಅವರಿಗೆ ಕೆಲಸ ಕೊಡಬೇಕಾದ ಉದ್ಯಮ, ವೃತ್ತಿಗಳಲ್ಲಿ ಅಗತ್ಯವು ಮಿತಿಯಾಗಿದೆ. ಬೆಂಗಳೂರಿನಲ್ಲಿ ಸ್ವಂತ ಅಂಗಡಿ, ವ್ಯಾಪಾರ ನಡೆಸುತ್ತಿದ್ದವರಿಗೂ ಭವಿಷ್ಯದ ಬಗ್ಗೆ ಆತಂಕ ಶುರುವಾಗಿದೆ. ಈಗಿನ ಕೊರೊನಾ ಭೀತಿ ಯಾವಾಗ ಕೊನೆಯಾಗುತ್ತದೆ ಎಂಬುದೇ ಗೊತ್ತಾಗುತ್ತಿಲ್ಲ. ಕೆಲವು ಐಟಿ, ಬಿಪಿಒ ಕಂಪೆನಿಗಳಿಗಾಗಿ ಕಾರು, ಟೆಂಪೋ ಟ್ರಾವೆಲರ್ ಮತ್ತಿತರ ವಾಹನಗಳನ್ನು ಬಿಟ್ಟಿದ್ದವರಿಗೂ ಈಗ ವ್ಯವಹಾರ ನಿಂತುಹೋಗಿರುವುದರಿಂದ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ.
ಆಕರ್ಷಣೆ ಕಳೆದುಕೊಳ್ಳುತ್ತಿದೆಯಾ?
ಕಟ್ಟಡ ನಿರ್ಮಾಣಗಳಿಗೆ ಅನುಭವಿ- ಕೌಶಲ ಇರುವ ಕೆಲಸಗಾರರು ಸಿಗುತ್ತಿಲ್ಲ. ಈಗ ಸಿಗುತ್ತಿರುವವರು ಹೆಚ್ಚಿನ ಹಣ ಕೇಳುತ್ತಿದ್ದಾರೆ. ಈ ಕಾರಣಕ್ಕೆ ಹೊಸದಾಗಿ ಕೆಲಸ ಶುರು ಮಾಡುವುದಕ್ಕೇ ಜನ ಹಿಂದೆ- ಮುಂದೆ ಆಲೋಚನೆ ಮಾಡುತ್ತಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಬೇಕಾದ ವಸ್ತುಗಳ ಉತ್ಪಾದನೆಯೂ ಕಡಿಮೆ ಆಗಿರುವುದು ಸಹ ಚಿಂತೆಗೆ ಕಾರಣವಾಗಿದೆ. ಮದುವೆ ಇತರ ಸಮಾರಂಭಗಳು ನಡೆಯುತ್ತಿಲ್ಲ. ಅಷ್ಟೇ ಏಕೆ, ಕೆಲ ಸಮುದಾಯಗಳು ಸಂಪ್ರದಾಯಬದ್ಧವಾಗಿ ಮಾಡುತ್ತಿದ್ದ ಅಂತ್ಯ ಸಂಸ್ಕಾರವೂ ಆಗುತ್ತಿಲ್ಲ. ಅಡುಗೆ ಕೆಲಸದವರು ಸೇರಿದಂತೆ ಬೇರೆ ಕೆಲಸದವರಿಗೆ ಸಮಸ್ಯೆಗಳಾಗಿದ್ದು, ತಂತಮ್ಮ ಊರುಗಳಿಗೆ ಹಿಂತಿರುಗಿದ್ದಾರೆ. ಇನ್ನೂ ಮುಂದುವರಿದು ಹೇಳಬೇಕು ಅಂದರೆ, ಸಿನಿಮಾ ರಂಗದಲ್ಲಿ ಇದ್ದ ಕಾರ್ಮಿಕರು ಸಹ ಊರುಗಳಿಗೆ ವಾಪಸಾಗಿದ್ದು, ಫೋನ್ ನಾಟ್ ರೀಚಬಲ್- ಸ್ವಿಚ್ಡ್ ಆಫ್ ಆಗಿದೆ. ಕೊರೊನಾ ತೊಲಗಿ, ಮತ್ತೆ ಸಹಜ ಸ್ಥಿತಿಗೆ ಎಲ್ಲವೂ ಯಾವಾಗ ಮರಳಬಹುದು ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ಈ ಕಾರಣಕ್ಕೇ ಹೇಳಿದ್ದು, ಬೆಂಗಳೂರು ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿದೆಯಾ?
More From GoodReturns

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Bengaluru Airport: ಇರಾನ್-ಇಸ್ರೇಲ್ ಯುದ್ಧ ಪರಿಣಾಮ ಬೆಂಗಳೂರು ಏರ್ಪೋರ್ಟ್ನಲ್ಲಿ 37 ವಿಮಾನಗಳು ರದ್ದು!



Click it and Unblock the Notifications