"20 ಲಕ್ಷ ಕೋಟಿ ಆರ್ಥಿಕ ಉತ್ತೇಜನಾ ಪ್ಯಾಕೇಜ್ ನಲ್ಲಿ 10% ಕೂಡ ವಿತರಿಸಿಲ್ಲ"
20 ಲಕ್ಷ ಕೋಟಿ ರುಪಾಯಿ ಆರ್ಥಿಕ ಉತ್ತೇಜನಾ ಪ್ಯಾಕೇಜ್ ಪೈಕಿ ಕೇವಲ 3 ಲಕ್ಷ ಕೋಟಿ ರುಪಾಯಿ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ ಮಂಜೂರು ಮಾಡಲಾಗಿದೆ ಎಂಬ ಸಂಗತಿ ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಲಾದ ಪ್ರಶ್ನೆಗೆ ಉತ್ತರ ದೊರೆತಿದೆ. ಪುಣೆ ಉದ್ಯಮಿ ಪ್ರಫುಲ್ಲಾ ಸರ್ದಾ ಎಂಬುವರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗಿದೆ.
ಮಂಜೂರಾದ ಮೊತ್ತದಲ್ಲಿ 1.20 ಲಕ್ಷ ಕೋಟಿ ರುಪಾಯಿಯನ್ನು ವಿವಿಧ ರಾಜ್ಯಗಳಿಗೆ ಈ ತನಕ ಸಾಲವನ್ನು ವಿತರಿಸಲಾಗಿದೆ. 130 ಕೋಟಿ ಜನಸಂಖ್ಯೆಯುಳ್ಳ ಭಾರತದಲ್ಲಿ ತಲಾ ಒಬ್ಬರಿಗೆ 8 ರುಪಾಯಿ ಸಾಲ ಬಂದಂತಾಗುತ್ತದೆ.
"ಆತ್ಮನಿರ್ಭರ್ ಭಾರತ್" ಪ್ಯಾಕೇಜ್: MSMEಗಳಿಗೆ 3 ಲಕ್ಷ ಕೋಟಿ ಘೋಷಣೆ
ಆತ್ಮನಿರ್ಭರ್ ಭಾರತ್ ಅಭಿಯಾನದ ಅಡಿಯಲ್ಲಿ ಕಳೆದ ಮೇ ತಿಂಗಳಲ್ಲಿ 20 ಲಕ್ಷ ಕೋಟಿ ರುಪಾಯಿಯನ್ನು ಸರ್ಕಾರವು ಘೋಷಣೆ ಮಾಡಿತ್ತು. ಆರ್ ಟಿಐ ಅಡಿಯಲ್ಲಿ ವಲಯವಾರು ಮತ್ತು ರಾಜ್ಯವಾರು ವಿತರಣೆ ಹಾಗೂ ಸರ್ಕಾರದ ಬಳಿ ಇರುವ ಬಾಕಿ ಮೊತ್ತದ ಬಗ್ಗೆ ಮಾಹಿತಿಯನ್ನು ಕೇಳಲಾಗಿದೆ.
ಇಸಿಎಲ್ ಜಿಎಸ್ ಅಡಿಯಲ್ಲಿ ಗರಿಷ್ಠ ಮೊತ್ತದ ಸಾಲ ಪಡೆದಿರುವುದು ಮಹಾರಾಷ್ಟ್ರ. ಆ ಮೊತ್ತ 14,364.30 ಕೋಟಿ ರುಪಾಯಿ. ನಂತರ ತಮಿಳುನಾಡು 12,445.58 ಕೋಟಿ ರುಪಾಯಿ, ಗುಜರಾತ್ 12,005.92 ಕೋಟಿ ರುಪಾಯಿ, ಉತ್ತರಪ್ರದೇಶ 8907.38 ಕೋಟಿ ರುಪಾಯಿ, ರಾಜಸ್ಥಾನ 7490.01 ಕೋಟಿ ರುಪಾಯಿ, ಕರ್ನಾಟಕ 7249.99 ಕೋಟಿ ರುಪಾಯಿ.
ಲಕ್ಷದ್ವೀಪ 1.62 ಕೋಟಿ ರುಪಾಯಿ, ಲಡಾಕ್ 27.14 ಕೋಟಿ ರುಪಾಯಿ, ಮಿಜೋರಾಂ 34.80 ಕೋಟಿ ರುಪಾಯಿ, ಅರುಣಾಚಲಪ್ರದೇಶ 38.54 ಕೋಟಿ ರುಪಾಯಿ.