ಕೊರೊನಾದಿಂದ ರಾಷ್ಟ್ರವ್ಯಾಪಿ ಲಾಕ್ಡೌನ್ ಆಗಿರುವ ಹಿನ್ನೆಲೆಯಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಆರ್ಬಿಐ ಕ್ರಮಕೈಗೊಂಡಿದೆ ಎಂದು ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
1930ರ ಬೃಹತ್ ಆರ್ಥಿಕ ಹಿಂಜರಿತದ ಬಳಿಕ ಜಗತ್ತು ದೊಡ್ಡ ಮಟ್ಟದಲ್ಲಿ ಆರ್ಥಿಕ ಕುಸಿತ ಕಂಡಿದೆ. ವಿಶ್ವದ ಆರ್ಥಿಕತೆ ಸುಮಾರು 9 ಟ್ರಿಲಿಯನ್ನಷ್ಟು ಕುಸಿದಿದೆ. ಜಗತ್ತಿನ ಕೆಲವು ವಲಯಗಳಲ್ಲಿ ಉತ್ಪಾದನೆ ಕುಸಿದಿದೆ. ಆದರೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಸ್ಥಿತಿ ಉತ್ತಮವಾಗಿದೆ ಎನ್ನಲಾಗಿದೆ. ಭಾರತದ ಆರ್ಥಿಕ ಪ್ರಗತಿ ಸದ್ಯ 1.9 ಪರ್ಸೆಂಟ್ನಷ್ಟಿದೆ ಎಂದಿರುವ ಆರ್ಬಿಐ, 2021-22ರಲ್ಲಿ 7.4 ಪರ್ಸೆಂಟ್ ಜಿಡಿಪಿ ವೃದ್ಧಿ ಹೆಚ್ಚಳವಾಗಲಿದೆ ಎಂದು ಅಂದಾಜಿಸಿದೆ.

ಕೊರೊನಾ ಲಾಕ್ಡೌನ್ನಿಂದಾಗಿ ಆರ್ಥಿಕ ನಷ್ಟ ಅನುಭವಿಸಿರುವ ಸಣ್ಣ ಮಧ್ಯಮ ಸಂಸ್ಥೆಗಳ ಪುನಶ್ಚೇತನಕ್ಕೆ 50,000 ಕೋಟಿ ರುಪಾಯಿ ನೀಡಲಾಗುವುದು ಎಂದು ತಿಳಿಸಿದೆ. ಇದರ ಜೊತೆಗೆ ನಬಾರ್ಡ್ಗೆ 25,000 ಕೋಟಿ, SIDBIಗೆ 15,000 ಕೋಟಿ, ನ್ಯಾಷನಲ್ ಹೌಸಿಂಗ್ ಬ್ಯಾಂಕ್ಗೆ 10,000 ಕೋಟಿ ರುಪಾಯಿ ನೀಡುತ್ತೇವೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಈಗಾಗಲೇ ಜಿಡಿಪಿಯ 3.2 ಪರ್ಸೆಂಟ್ ರಷ್ಟು ಹಣವನ್ನು ಬ್ಯಾಂಕ್ಗಳಿಗೆ ನೀಡಿದ್ದೇವೆ ಎಂದಿರುವ ಆರ್ಬಿಐ, ರಿವರ್ಸ್ ರೆಪೋ ರೇಟ್ 0.25 bps ಪಾಯಿಂಟ್ಸ್ ಕಡಿತಗೊಳಿಸಿದ್ದು, 4 ಪರ್ಸೆಂಟ್ನಿಂದ 3.75 ಪರ್ಸೆಂಟ್ಗೆ ಇಳಿಕೆಯಾಗಿದೆ. ಆದರೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಭಾರತದಲ್ಲಿ ಕಳೆದ ನಾಲ್ಕು ತಿಂಗಳಿಂದ ಉತ್ಪಾದನಾ ವಲಯ ಕುಸಿದಿದೆ ಹಾಗೂ ಬೇಡಿಕೆ 25 ರಿಂದ 30 ಪರ್ಸೆಂಟ್ ಕುಸಿದಿದೆ. ಆದರೆ ದೇಶದಲ್ಲಿ ಅಗತ್ಯ ಪ್ರಮಾಣದ ದಿನಸಿ ದಾಸ್ತಾನಿದೆ ಯಾವುದೇ ಭಯ ಬೇಕಿಲ್ಲ ಎಂದಿದೆ. ರಾಜ್ಯಗಳಿಗೆ ಹೆಚ್ಚುವರಿ 60 ಪರ್ಸೆಂಟ್ ಹಣ ನೀಡಿದ್ದೇವೆ ಎಂದಿರುವ ಆರ್ಬಿಐ ಭಾರತದಲ್ಲಿ 91 ಪರ್ಸೆಂಟ್ ಎಟಿಎಂಗಳು ಬಳಕೆಯಾಗುತ್ತಿವೆ ಎಂದಿದೆ. ಜೊತೆಗೆ ಹಗಲಿರುಳು ದುಡಿಯುತ್ತಿರುವ ಆರ್ಬಿಐ ಉದ್ಯೋಗಿಗಳಿಗೆ ಧನ್ಯವಾದ ತಿಳಿಸಿದೆ.


Click it and Unblock the Notifications