ಇಂದು ಆರ್ಬಿಐನ ಎಂಪಿಸಿ ಸಭೆ; ಬಡ್ಡಿ ದರ ಏರಿಕೆ ಆಗುತ್ತಾ?
ನವದೆಹಲಿ, ನ. 3: ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿ (ಎಂಪಿಸಿ- ಮಾನಿಟರಿ ಪಾಲಿಸಿ ಕಮಿಟಿ) ಇಂದು ಗುರುವಾರ ಸಭೆ ಸೇರುತ್ತಿದೆ. ಕಳೆದ ಮೂರು ತ್ರೈಮಾಸಿಕ ಅವಧಿಯಲ್ಲಿ ಹಣದುಬ್ಬರ ಶೇ. 6ರ ಒಳಗೆ ಬರದೇ ಇರುವ ಹಿನ್ನೆಲೆಯಲ್ಲಿ ಆರ್ಬಿಐ ಇದೀಗ ಕೇಂದ್ರ ಸರ್ಕಾರಕ್ಕೆ ಕಾರಣಗಳನ್ನು ನೀಡಬೇಕಿದೆ. ಅದಕ್ಕಾಗಿ ಎಂಪಿಸಿ ಸಭೆ ಸೇರಿ ಹಣದುಬ್ಬರ ನಿಯಂತ್ರಣಕ್ಕೆ ಯಾಕೆ ವೈಫಲ್ಯ ಆಗಿದೆ ಎಂಬುದನ್ನು ಚರ್ಚಿಸಿ ಸರ್ಕಾರಕ್ಕೆ ವರದಿ ನೀಡಲಿದೆ.
ನಿನ್ನೆ ಬ್ಯಾಂಕರ್ಗಳ ಸಮಾವೇಶವೊಂದರಲ್ಲಿ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಎಂಪಿಸಿ ಸಭೆ ವಿಚಾರದ ಬಗ್ಗೆ ಒಂದಷ್ಟು ಮಾಹಿತಿ ನೀಡಿದರು. ಹಣದುಬ್ಬರ ನಿಯಂತ್ರಣ ಯಾಕೆ ಆಯಿತು ಎಂದು ಕಾರಣಗಳನ್ನು ಚರ್ಚಿಸಲು ಸಭೆ ನಡೆಸುತ್ತಿದ್ದು, ಸರ್ಕಾರಕ್ಕೆ ವರದಿ ನೀಡುವುದಾಗಿ ಅವರು ಹೇಳಿದ್ದರು. ಆದರೆ ಆ ವರದಿಯನ್ನು ಸದ್ಯದ ಮಟ್ಟಿಗೆ ಬಹಿರಂಗಪಡಿಸುವುದಿಲ್ಲ. ಮುಂದಿನ ದಿನಗಳಲ್ಲಿ ಈ ವರದಿ ಅಂಶ ಹೊರಬರುತ್ತದೆ ಎಂದು ಹೇಳಿದ ಅವರು, ಗುರುವಾರ ನಡೆಯುವ ಎಂಪಿಸಿ ಸಭೆಯ ಮಿನುಟ್ಸ್ ಆಫ್ ಮೀಟಿಂಗ್ ಅನ್ನು ಬಿಡುಗಡೆ ಮಾಡುವಾಗಿ ಭರವಸೆ ನೀಡಿದರು.
ಆಗಲೇ ದರ ಹೆಚ್ಚಿಸಿದ್ದರೆ ಆರ್ಥಿಕತೆ ಪೂರ್ತಿ ಕುಸಿಯುತ್ತಿತ್ತು: ಆರ್ಬಿಐ ಗವರ್ನರ್
ಅಮೆರಿಕದಲ್ಲಿ ಬಡ್ಡಿ ದರ ಏರಿಕೆ
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಸತತ ನಾಲ್ಕನೇ ತ್ರೈಮಾಸಿಕ ಅವಧಿಗೆ ಬಡ್ಡಿ ದರವನ್ನು ಹೆಚ್ಚಿಸಿದೆ. ಹಣದುಬ್ಬರ ನಿಯಂತ್ರಣಕ್ಕೆ ತರಲು ಈಗ 75 ಬೇಸಿಸ್ ಪಾಯಿಂಟ್ನಷ್ಟು ಬಡ್ಡಿ ಹೆಚ್ಚಳ ಮಾಡಲಾಗಿದೆ. ಅದಕ್ಕೆ ಪ್ರತಿಯಾಗಿ ಆರ್ಬಿಐ ಕೂಡ ಭಾರತದಲ್ಲಿ ಬಡ್ಡಿ ಹೆಚ್ಚಳ ಮಾಡುವುದು ಕಳೆದ ಕೆಲ ತಿಂಗಳಿಂದ ಟ್ರೆಂಡ್ ಆಗಿದೆ.
ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚಿದರೆ ಅದರ ಪರಿಣಾಮ ಭಾರತದ ಮೇಲೆ ಆಗುತ್ತದೆ. ವಿದೇಶೀ ಹೂಡಿಕೆದಾರರು ಭಾರತದಿಂದ ಬಂಡವಾಳ ಹಿಂತೆಗೆದುಕೊಂಡು ಡಾಲರ್ ಮೇಲೆ ಹೂಡಿಕೆ ಮಾಡುವುದು ಹೆಚ್ಚಾಗಿದೆ. ಅಂತೆಯೇ, ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚು ಮಾಡಿದಾಗೆಲ್ಲಾ ಭಾರತದಲ್ಲೂ ಬಡ್ಡಿ ಏರಿಕೆ ಮಾಡಲಾಗುತ್ತಿರುವುದು ಕಂಡುಬರುತ್ತದೆ.
ಬೆಂಗಳೂರು ಮೆಟ್ರೋ: ವಾಟ್ಸಾಪ್ನಲ್ಲಿ ಟಿಕೆಟ್ ಖರೀದಿ; ವಿಶ್ವದಲ್ಲಿ ಇಂಥದ್ದು ಇದೇ ಮೊದಲು
ಎಂಪಿಸಿ ಸಭೆಯಲ್ಲಿ ಏನಾಗುತ್ತೆ?
ಸಾಮಾನ್ಯವಾಗಿ ಆರ್ಬಿಐನ ಎಂಪಿಸಿ ಸಭೆ ಪ್ರತೀ 2 ತಿಂಗಳಿಗೊಮ್ಮೆ ನಡೆಯುತ್ತದೆ. ಇಲ್ಲಿ ರೆಪೋ ಇತ್ಯಾದಿ ದರಗಳನ್ನು ಏರಿಸುವ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ದೇಶದ ಹಣಕಾಸು ಸ್ಥಿತಿ ಹೇಗಿದೆ, ಆರ್ಥಿಕ ಪ್ರಗತಿ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಅವಲೋಕಿಸಿ ದೇಶಕ್ಕೆ ಒಂದು ಚಿತ್ರಣ ನೀಡುತ್ತದೆ. ಕೆಲವೊಮ್ಮೆ ತುರ್ತು ಸಂದರ್ಭ ಬಂದರೆ ಹೆಚ್ಚುವರಿ ಸಭೆ ನಡೆಸುವ ವಾಡಿಕೆಯೂ ಇದೆ.
ಕಳೆದ ಬಾರಿ ಎಂಪಿಸಿ ಸಭೆ ಸೆಪ್ಟೆಂಬರ್ 28-30ರಂದು ನಡೆದಿತ್ತು. ಆರ್ಬಿಐ ಕ್ಯಾಲೆಂಡರ್ ಪ್ರಕಾರ ಮುಂದಿನ ಸಭೆ ಡಿಸೆಂಬರ್ 5-7ರಂದು ನಡೆಯುವುದಿದೆ. ಆದರೆ, ಈಗ ಹಣದುಬ್ಬರ ಯಾಕೆ ಹತೋಟಿಗೆ ಬಂದಿಲ್ಲ ಎಂಬುದಕ್ಕೆ ಕಾರಣಗಳನ್ನು ಕೊಡುವಂತೆ ಸರ್ಕಾರ ಸೂಚಿಸಿದ ಹಿನ್ನೆಲೆಯಲ್ಲಿ ಆರ್ಬಿಐನ ಮಾನಿಟರಿ ಪಾಲಿಸಿ ಕಮಿಟಿ ಇಂದು ಗುರುವಾರ ಸಭೆ ಸೇರಿರುವುದು.
ಹಣದುಬ್ಬರ ನಿಯಂತ್ರಣವಾಗದೇ ಇರುವುದಕ್ಕೆ ಕಾರಣಗಳನ್ನು ಚರ್ಚಿಸಿ ಸರ್ಕಾರಕ್ಕೆ ವರದಿ ನೀಡಲು ಇಂದು ಸಭೆ ಸೇರಲಾಗಿರುವುದು ಹೌದು. ಆದರೆ, ಅಮೆರಿಕದ ಫೆಡರಲ್ ಬ್ಯಾಂಕ್ ದೊಡ್ಡ ಮಟ್ಟದಲ್ಲಿ ಬಡ್ಡಿ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಇಂದಿನ ಸಭೆಯಲ್ಲಿ ಆರ್ಬಿಐ ಕೂಡ ಬಡ್ಡಿ ದರ ಹೆಚ್ಚಿಸುವ ನಿರ್ಧಾರ ತೆಗೆದುಕೊಂಡರೆ ಅನಿರೀಕ್ಷಿತ ಎನಿಸುವುದಿಲ್ಲ. ಹಿಂದೆಲ್ಲಾ ತುರ್ತು ಸಂದರ್ಭದಲ್ಲಿ ಹೆಚ್ಚುವರಿ ಸಭೆ ನಡೆಸಿ ಬಡ್ಡಿ ದರ ಪರಿಷ್ಕರಿಸಿರುವ ನಿದರ್ಶನಗಳಿವೆ.
ಹಣದುಬ್ಬರ ತಾಳಿಕೆ ಮಿತಿ
ದೇಶದ ಆರೋಗ್ಯಯುತ ಆರ್ಥಿಕತೆಗೆ ಹಣದುಬ್ಬರ ಇಂತಿಷ್ಟು ಮಿತಿಯಲ್ಲಿರಬೇಕು ಎಂಬ ಗುರಿಯನ್ನು ನಿಗದಿ ಮಾಡಲಾಗುತ್ತದೆ. ಇದು 2016ರಿಂದ ಜಾರಿಯಾಗಿರುವ ನೀತಿ. ಪ್ರತೀ 5 ವರ್ಷಕ್ಕೆ ಗುರಿ ನಿಶ್ಚಯಿಸಲಾಗುತ್ತದೆ. ಅಂತೆಯೇ ಹಣದುಬ್ಬರ ಶೇ. 4ರಷ್ಟಿರಬೇಕು. ತಾಳಿಕೆ ಮೀತಿ ಶೇ. 2-6ರಷ್ಟಿರಬೇಕು ಎಂಬುದನ್ನು 2016ರಲ್ಲಿ ಮಾಡಲಾಯಿತು. ಒಂದು ವೇಳೆ ಸತತ ಮೂರು ತ್ರೈಮಾಸಿಕ ಅವಧಿಯಲ್ಲಿ ಹಣದುಬ್ಬರ ಈ ತಾಳಿಕೆ ಮಿತಿಗಿಂತ ಹೊರಗೆ ಇದ್ದರೆ ಅದಕ್ಕೆ ಕಾರಣಗಳೇನು ಎಂಬುದನ್ನು ಆರ್ಬಿಐ ಅವಲೋಕಿಸಿ ಸರ್ಕಾರಕ್ಕೆ ವರದಿ ನೀಡಬೇಕು ಎಂಬ ನಿಯಮ ಇದೆ. 2016ರಲ್ಲಿ ಇಡಲಾಗಿದ್ದ ಗುರಿ ಈಡೇರಿತ್ತು.
2021ರಲ್ಲೂ ಅದೇ ಗುರಿಯನ್ನು ನಿರ್ಧರಿಸಲಾಗಿದೆ. ಈ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಕೂಲಕರ ಬೆಳವಣಿಗೆ, ಕೋವಿಡ್ ಇತ್ಯಾದಿ ಕಾರಣದಿಂದ ಆರ್ಥಿಕತೆ ಅಲುಗಾಡಿದ್ದು ಹಣದುಬ್ಬರವು ತಾಳಿಕೆ ಮಿತಿಗಿಂತ ಹೊರಗೇ ಇದೆ. ಹಣದುಬ್ಬರ ಶೇ. 6.7ರಷ್ಟು ಇರಬಹುದು ಎಂದು ಅಂದಾಜು ಮಾಡಲಾಗಿದೆ.
ಇಲ್ಲಿ ಹಣದುಬ್ಬರ ಎಂದರೆ ಸರಕುಗಳ ಮಾರಾಟ ದರದಲ್ಲಿ ಆಗುವ ವ್ಯತ್ಯಾಸ. ಅಂದರೆ ಹಿಂದಿನ ವರ್ಷದ ಇದೇ ಅವಧಿಯಲ್ಲಿ ಒಂದು ವಸ್ತುವಿನ ಬೆಲೆ ಎಷ್ಟಿದೆ, ಈಗ ಅದರ ಬೆಲೆ ಎಷ್ಟಿದೆ ಎಂಬುದರ ವ್ಯತ್ಯಾಸವೇ ಹಣದುಬ್ಬರ. ಬಹಳ ವ್ಯಾಪಕವಾಗಿ ಮಾರಾಟವಾಗುವ ದಿನಬಳಕೆಯ ವಸ್ತುಗಳು, ಪೆಟ್ರೋಲ್ ಇತ್ಯಾದಿ ಸರಕುಗಳ ಬೆಲೆ ಹಣದುಬ್ಬರ ದರದ ಮೇಲೆ ಪರಿಣಾಮ ಬೀರುತ್ತದೆ.