ವಲಸಿಗ ಕಾರ್ಮಿಕರನ್ನು ವಾಪಸ್ ಕರೆತರಲು ವಿಮಾನದ ಟಿಕೆಟ್, ಮುಂಗಡ ಹಣ
"ನಿಮ್ಮ ಕೂಲಿ ಮೊತ್ತದ ಇಂತಿಷ್ಟು ಹಣವನ್ನು ಮುಂಗಡವಾಗಿ ಕೊಡ್ವೀವಿ, ನಿಮ್ಮ ರಾಜ್ಯದಿಂದ ವಾಪಸ್ ಬರೋದಿಕ್ಕೆ ವಿಮಾನದ ವ್ಯವಸ್ಥೆ ಮಾಡಿಕೊಡ್ತೀವಿ. ಇನ್ನು ಈ ಸಲವೇನಾದರೂ ಕೊರೊನಾ ಲಾಕ್ ಡೌನ್ ನಂಥದ್ದೇನಾದರೂ ಆದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ, ಊಟ- ತಿಂಡಿ ಮತ್ತೊಂದು ನಾವೇ ನೋಡಿಕೊಳ್ತೀವಿ," ಹೀಗೆ ಭರವಸೆ ಮೇಲೆ ಭರವಸೆ ನೀಡುತ್ತಿದ್ದಾರೆ ಬೆಂಗಳೂರಿನಲ್ಲಿ ಇರುವ ಕಟ್ಟಡ ಕಾಂಟ್ರಾಕ್ಟರ್ ಗಳು ಹಾಗೂ ಕಟ್ಟಡ ನಿರ್ಮಾಣ ಸಂಸ್ಥೆಗಳು.
ಕೊರೊನಾ ಭಯ: ಸೆಕೆಂಡ್ ಹೋಮ್ಗೆ ಹೆಚ್ಚಿದ ಡಿಮ್ಯಾಂಡ್, ಸುರಕ್ಷತೆಗೆ ಜನರ ಒತ್ತು
ಕಳೆದ ಏಪ್ರಿಲ್- ಮೇ ತಿಂಗಳಲ್ಲಿ ಕೊರೊನಾ ಲಾಕ್ ಡೌನ್ ಆದಾಗ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಇದ್ದ ಕೂಲಿ ಕಾರ್ಮಿಕರು ದೊಡ್ಡ ಪ್ರಮಾಣದಲ್ಲಿ ತಂತಮ್ಮ ರಾಜ್ಯಗಳಿಗೆ ವಾಪಸಾದರು. ಆ ನಂತರ ಲಾಕ್ ಡೌನ್ ಮುಂದುವರಿದು, ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಯಾವುದೇ ವಿನಾಯಿತಿ ನೀಡಿರಲಿಲ್ಲ.
ಕೆಲಸ ಮುಗಿಸಿಕೊಟ್ಟರೆ ಸಾಕು ಎಂಬ ಸ್ಥಿತಿ
ಆದರೆ, ಈಗ ಮತ್ತೆ ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಚಾಲನೆ ಸಿಕ್ಕಿದೆ. ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣವೇ ನಡೆಯುತ್ತಿದೆ. ಆದರೆ ಕೆಲಸ ಕುಂಟುತ್ತಾ ಸಾಗಿದೆ. ಕಾರಣ ಏನು ಅಂದರೆ, ಕಾರ್ಮಿಕರ ಕೊರತೆ. ಕೊರೊನಾ ಲಾಕ್ ಡೌನ್ ವೇಳೆ ತಮ್ಮ ರಾಜ್ಯಗಳಿಗೆ ಹಿಂತಿರುಗಿದವರು ವಾಪಸ್ ಬೆಂಗಳೂರಿಗೆ ಬಂದಿಲ್ಲ. "ಈ ಹಿಂದೆ ಒಂದೇ ಸಲಕ್ಕೆ ಎರಡು- ಮೂರು ಕಡೆ ಕೆಲಸ ಒಪ್ಪಿಕೊಳ್ಳುತ್ತಿದ್ದೆ. ಒಂದೊಂದು ಕಡೆ ಒಂದೊಂದು ಹಂತದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಇರುತ್ತಿತ್ತು. ಆ ಕಾರ್ಮಿಕರಿಗೆ ಬಿಡುವಿಲ್ಲದ ಕೆಲಸ ಇರುತ್ತಿತ್ತು. ನನಗೂ ಕೂಡ ಲಾಭ ಗಿಟ್ಟುತ್ತಿತ್ತು. ಆದರೆ ಈಗ ಒಂದು ಕಡೆ ಕೆಲಸ ಒಪ್ಪಿಕೊಳ್ಳುವುದಕ್ಕೆ ಭಯ ಆಗುತ್ತಿದೆ. ಇರುವ ಕೆಲಸ ಮುಗಿಸಿಕೊಟ್ಟರೆ ಸಾಕು ಎಂಬಂತಾಗಿದೆ. ಏಕೆಂದರೆ ನುರಿತ ಕಾರ್ಮಿಕರು ಸಿಗುತ್ತಿಲ್ಲ. ಅಪರೂಪಕ್ಕೆ ಸಿಕ್ಕರೂ ವಿಪರೀತ ಕೂಲಿ ಕೇಳುತ್ತಾರೆ,"ಎನ್ನುತ್ತಾರೆ ಕಟ್ಟಡ ಕಾಂಟ್ರ್ಯಾಕ್ಟರ್ ಬಿ. ಲೋಕೇಶ್.
ತಮಿಳುನಾಡು, ಉತ್ತರ ಭಾರತದ ಕಾರ್ಮಿಕರ ಮೇಲೆ ಅವಲಂಬನೆ
ಕಟ್ಟಡ ನಿರ್ಮಾಣ ಹಂತದ ಕೆಲಸ ಒಂದು ರೀತಿಯಲ್ಲಿ ಮುಗಿಯುತ್ತದೆ. ಆ ನಂತರ ಪೇಂಟಿಂಗ್, ಪ್ಲಂಬಿಂಗ್, ಮರದ ಕೆಲಸ, ಎಲೆಕ್ಟ್ರಿಕಲ್, ಫಾಲ್ ಸೀಲಿಂಗ್ ಇಂಥದ್ದಕ್ಕೆಲ್ಲ ತಮಿಳುನಾಡು ಹಾಗೂ ಉತ್ತರ ಭಾರತದ ಕೂಲಿ ಕಾರ್ಮಿಕರನ್ನೇ ಹೆಚ್ಚಾಗಿ ನಂಬಿಕೊಂಡಿದ್ದೆವು. ಅವರಿಗೆ ಕೆಲಸ ವಹಿಸಿದ ಮೇಲೆ ಹಗಲು- ರಾತ್ರಿ ಎನ್ನದೆ ಮಾಡಿ ಮುಗಿಸುತ್ತಿದ್ದರು. ಸ್ಥಳೀಯರಿಗೆ ಕೆಲಸ ವಹಿಸಿದರೆ ಅದು ನಿಧಾನವಾಗುತ್ತಿತ್ತು. ಆದರೆ ಈಗ ಅನಿವಾರ್ಯವಾಗಿ ಹೆಚ್ಚಿನ ಕೂಲಿಯನ್ನೂ ಕೊಟ್ಟು, ಕೆಲಸ ನಿಧಾನವಾದರೂ ಸಹಿಸಿಕೊಳ್ಳಬೇಕಾಗಿದೆ ಎನ್ನುತ್ತಾರೆ ಅವರು. ದೆಹಲಿ, ಬಿಹಾರ, ಉತ್ತರಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಿಂದ ಕಾರ್ಮಿಕರು ವಾಪಸ್ ಬರಲು ಮೀನ- ಮೇಷ ಎಣಿಸುತ್ತಿದ್ದಾರೆ. ಅವರಿಗೆ ಈ ಹಿಂದೆ (ಏಪ್ರಿಲ್- ಮೇ ತಿಂಗಳ ಲಾಕ್ ಡೌನ್) ಆದ ಅನುಭವ ಭಯ ಹುಟ್ಟಿಸಿದೆ. ಆ ಕಾರಣಕ್ಕೆ ಅಲ್ಲಿಂದ ವಾಪಸ್ ಕರೆಸಲು ವಿಮಾನದ ಟಿಕೆಟ್ ಮಾಡಿಸುವ, ಒಂದಿಷ್ಟು ಹಣವನ್ನು ಅಡ್ವಾನ್ಸ್ ನೀಡುವ ಮೂಲಕ ಮನವೊಲಿಸಲಾಗುತ್ತಿದೆ.
ಕಟ್ಟಡ ನಿರ್ಮಾಣ ಕ್ಷೇತ್ರದ ವೆಚ್ಚ ಹೆಚ್ಚಾಗಬಹುದು
ಅದರಲ್ಲೂ ಈಗ ಹೌಸಿಂಗ್ ಲೋನ್ ಬಡ್ಡಿ ದರ ವಿಪರೀತ ಕಡಿಮೆ ಆಗಿದೆ. ಬ್ಯಾಂಕ್ ಗಳು ಸಹ ಸಾಲ ವಿತರಣೆಯಲ್ಲಿ ಸ್ವಲ್ಪ ಉದಾರವಾಗಿ ವರ್ತಿಸುತ್ತಿವೆ. ಹೆಚ್ಚುವರಿ ಆದಾಯ ಮೂಲಕ್ಕಾಗಿ ಬಾಡಿಗೆ ಮನೆಗಳನ್ನು ಕಟ್ಟಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗೆ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಪೂರಕ ವಾತಾವರಣ ಇರುವಾಗ ಕಾರ್ಮಿಕರೇ ಇಲ್ಲದಿದ್ದರೆ ಮಾಡುವುದಾದರೂ ಏನು? ಇನ್ನು ಮುಂದೆ ನಿರ್ಮಾಣ ಕ್ಷೇತ್ರದ ವೆಚ್ಚ ಹೆಚ್ಚಾಗಬಹುದು. ಆದರೆ ಇದು ಅನಿವಾರ್ಯ ಎನ್ನುತ್ತಾರೆ ಮೇಸ್ತ್ರಿ ಆಗಿರುವ ಅನ್ಬು. "ಸಣ್ಣ- ಪುಟ್ಟ ಪ್ಯಾಚ್ ವರ್ಕ್ ಗಳು ಹಾಗೇ ಬಾಕಿ ಉಳಿದಿವೆ. ಅದು ಮುಗಿಯದ ಹೊರತು ಪೂರ್ತಿ ಹಣ ಸೆಟ್ಲ್ ಆಗಲ್ಲ. ಅಷ್ಟನ್ನು ಮಾತ್ರ ಮುಗಿಸಿಕೊಡುವಂತೆ ಸ್ಥಳೀಯರನ್ನು ಕೇಳಿದರೆ ಅವರು ಕೇಳುವ ಹಣ ಕೊಟ್ಟಲ್ಲಿ ನಮಗೆ ಯಾವ ಲಾಭವೂ ಉಳಿಯಲ್ಲ. ಆದ್ದರಿಂದ ಈಗಾಗಲೇ ಊರುಗಳಿಗೆ ವಾಪಸ್ ಆಗಿರುವವರನ್ನೇ ಪರ್ಮನೆಂಟ್ ಆಗಿ ಕರೆಸಿಕೊಂಡಲ್ಲಿ ಇನ್ನಷ್ಟು ಹೊಸ ಕೆಲಸವನ್ನು ಧೈರ್ಯವಾಗಿ ಒಪ್ಪಿಕೊಳ್ಳಬಹುದು," ಎನ್ನುತ್ತಾರೆ ಅವರು.