ವಸಿಷ್ಠ ಸಹಕಾರಿ ಬ್ಯಾಂಕ್ನಿಂದ ಗ್ರಾಹಕರಿಗೆ ದೋಖಾ! ಎಫ್ಐಆರ್ ದಾಖಲು
ಬೆಂಗಳೂರಿನ ಶ್ರೀ ರಾಘವೇಂದ್ರ ಕೋ-ಆಪರೇಟಿವ್ ಸೊಸೈಟಿ ವಂಚನೆ ಮರೆಯುವ ಮುನ್ನವೇ ಅದೇ ರೀತಿಯಲ್ಲಿ ಮತ್ತೊಂದು ಸಹಕಾರಿ ಬ್ಯಾಂಕ್ನ ವಂಚನೆ ಪ್ರಕರಣ ಬಯಲಿಗೆ ಬಂದಿದೆ.
ಗ್ರಾಹಕರಿಂದ ಕೋಟ್ಯಾಂತರ ರೂಪಾಯಿ ಠೇವಣಿ ಪಡೆದಿದ್ದ ಶ್ರೀ ವಸಿಷ್ಠ ಕ್ರೆಡಿಟ್ ಸೌಹಾರ್ದ ಬ್ಯಾಂಕ್ ವಿರುದ್ಧ ಗ್ರಾಹಕರು ವಂಚನೆ ಆರೋಪ ಮಾಡಿದ್ದು ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಶಿಷ್ಠ ಸೌಹಾರ್ದ ಸಹಕಾರಿ ಸಂಘ ಸುಮಾರು 450 ಕೋಟಿ ರೂ. ಮೋಸ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
''ಬ್ಯಾಂಕ್ನಿಂದಾಗಿರುವ ವಂಚನೆ ಬಗ್ಗೆ ಮೂವರು ಠೇವಣಿದಾರರು ದೂರು ನೀಡಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಷಕ್ಷರೂ ಆಗಿರುವ ವೆಂಕಟನಾರಾಯಣ ಹಾಗೂ ಅವರ ಪುತ್ರ ಕೃಷ್ಣ ಪ್ರಸಾದ್ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಅವರಿಬ್ಬರ ವಿರುದ್ಧ ಪ್ರಕರಣವನ್ನು ದಾಖಲಿಸದಾಗಿದೆ'' ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಶಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆ ವಾರ್ಷಿಕ ಹೆಚ್ಚು ಬಡ್ಡಿ ಕೊಡುವ ಅಮಿಷ ತೋರಿತ್ತು. ನಾಲ್ಕು ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಈ ಸಹಕಾರ ಸಂಘವನ್ನು ನಂಬಿ ಸಾವಿರಾರು ಮಂದಿ ಹಣವನ್ನು ಠೇವಣಿ ಇರಿಸಿದ್ದರು. ಈ ಮೂಲಕ ಸುಮಾರು 450 ಕೋಟಿ ರೂ. ನಿಶ್ಚಿತ ಠೇವಣಿ ಇಟ್ಟಿದ್ದ ನೂರಾರು ಮಂದಿ ಠೇವಣಿ ಅವಧಿ ಕೂಡ ಮುಗಿದಿತ್ತು.
ಆದರೆ ಯಾವಾಗ ಬಡ್ಡಿ ಸಮೇತ ವಾಪಸು ನೀಡುವಂತೆ ಕೇಳಿದಾಗ ಬ್ಯಾಂಕ್ ಪಾವತಿಸಿರಲಿಲ್ಲ. ಕೇಳಿದಾಗ, ಕೊರೊನಾ ಬಂದಿದ್ದು ಸಾಲಗಾರರು ಯಾರೂ ಪಾವತಿ ಮಾಡುತ್ತಿಲ್ಲ ಎಂದು ಹೇಳಿದ್ದರು. ಈ ವಿಚಾರವಾಗಿ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಕೂಡ ಮಧ್ಯ ಪ್ರವೇಶಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಕಾಲವಕಾಶ ನೀಡುವಂತೆ ಕೋರಿದ್ದಾರೆ. ಅದರಂತೆ ಕೆಲ ತಿಂಗಳು ಕಾಲಾವಕಾಶ ನೀಡಿದ್ದಾರೆ. ಹೀಗೆ ಕೆಲವು ತಿಂಗಳು ಕಳೆದರೂ ಹಣ ಪಾವತಿ ಮಾಡಿರಲಿಲ್ಲ. ಇದೀಗ ಸಂಘದ ಮುಖ್ಯಸ್ಥರಾದ ವೆಂಕಟನಾರಾಯಣ ಮತ್ತು ಕೃಷ್ಣ ಪ್ರಸಾದ್ ಪರಾರಿಯಾಗಿದ್ದಾರೆ.
ಹೀಗಾಗಿ ಠೇವಣಿ ಹಣದ ಅಸಲು ಇಲ್ಲದೆ ಮೋಸ ಹೋಗಿರುವುದಾಗಿ ಗ್ರಾಹಕರು ಹನುಮಂತನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.