ಕೊರೊನಾ ಎಫೆಕ್ಟ್: ದಿನಗೂಲಿ ನೌಕರರಿಗೆ 1,000 ರುಪಾಯಿ ಘೋಷಿಸಿದ ಉತ್ತರ ಪ್ರದೇಶ ಸರ್ಕಾರ
ಕೊರೊನಾವೈರಸ್ ಸೋಂಕಿನಿಂದ ದೇಶವು ಭಾರೀ ಪರಿಣಾಮ ಎದುರಿಸುತ್ತಿದ್ದು, ದಿನಗೂಲಿ ನೌಕರರಿಗೆ 1,000 ರುಪಾಯಿ ನೀಡುವುದಾಗಿ ಉತ್ತರ ಪ್ರದೇಶ ಸರ್ಕಾರ ಮುಖ್ಯಮಂತ್ರಿ ಯೋಗಿ ಆದಿದ್ಯನಾಥ್ ಘೋಷಿಸಿದ್ದಾರೆ.
ದೇಶದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗುತ್ತಿದ್ದು, ಸೋಂಕು ತಡೆಯಲು ಜನರು ಮನೆಯಲ್ಲಿ ಇರಲು ಸರ್ಕಾರವು ಮನವಿ ಮಾಡುತ್ತಿದೆ. ಇದರಿಂದಾಗಿ ಸಹಜವಾಗಿ ಬೀದಿ ಬದಿ ವ್ಯಾಪಾರಿಗಳು, ದಿನಗೂಲಿ ನೌಕರರ ಮೇಲೆ ಪರಿಣಾಮ ಬೀರುತ್ತಿದ್ದು, ದೈನಂದಿನ ಜೀವನ ನಡೆಸಲು ಬಹಳ ಕಷ್ಟಸಾಧ್ಯವಾಗಿದೆ.
ದಿನಗೂಲಿ ನೌಕರರನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶ ಸರ್ಕಾರ ಈ ಘೋಷಣೆ ಮಾಡಿದ್ದು, 35 ಲಕ್ಷ ಜನರಿಗೆ ಇದರ ಸೌಲಭ್ಯ ಸಿಗಲಿದೆ. ಇದರಲ್ಲಿ 20 ಲಕ್ಷದ 37 ಸಾವಿರ ದಿನಗೂಲಿ ನೌಕರರು ಮತ್ತು ಆಟೋ ಚಾಲಕರಿದ್ದಾರೆ.
''ಪ್ರಸ್ತುತ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಲ್ಪಟ್ಟಿರುವ ದಿನಗೂಲಿ ನೌಕರರು, ರಿಕ್ಷಾ ಚಾಲಕರು ಇತ್ಯಾದಿಗಳಿಗೆ 1,000 ರುಪಾಯಿ ನೀಡಲು ನಿರ್ಧರಿಸಿದ್ದೇವೆ. ತಮ್ಮ ಜೀವನೋಪಾಯಕ್ಕಾಗಿ ದೈನಂದಿನ ಆದಾಯವನ್ನು ಅವಲಂಬಿಸಿರುವ ಸುಮಾರು 15 ಲಕ್ಷ ಜನರಿಗೆ ಅದೇ ವಿತ್ತೀಯ ಪರಿಹಾರವನ್ನು ನೀಡಲಾಗುವುದು. ಕಾರ್ಮಿಕ ಇಲಾಖೆಯ ಸಹಾಯದಿಂದ ಈ ನಿರ್ಧಾರ ಕೈಗೊಳ್ಳಲಾಗುವುದು'' ಎಂದು ಯೋಗಿ ಆದಿತ್ಯನಾಥ್ ಶನಿವಾರ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಶನಿವಾರ ಒಟ್ಟು ಕೊರೊನಾವೈರಸ್ ಸೋಂಕಿನ ಪ್ರಕರಣಗಳು 23 ಕ್ಕೆ ತಲುಪಿದ್ದು, ಲಕ್ನೋದಲ್ಲಿ ಒಂಬತ್ತು, ಆಗ್ರಾದಲ್ಲಿ ಎಂಟು, ನೋಯ್ಡಾದಲ್ಲಿ ನಾಲ್ಕು, ಗಾಜಿಯಾಬಾದ್ನಲ್ಲಿ ಎರಡು ಮತ್ತು ಲಖಿಂಪುರ-ಖೇರಿಯಲ್ಲಿ ಒಂದು ಪ್ರಕರಣಗಳು ದಾಖಲಾಗಿವೆ.