ಎಲ್ಲಾ ನೌಕರರಿಗೂ ಡಿಎ, ಬೋನಸ್ ಪ್ರಕಟಿಸಿದ ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್
ಲಕ್ನೋ, ಅ. 18: ಸರಕಾರಿ ನೌಕರರಿಗೆ ಡಿಎ ಹೆಚ್ಚಿಸಿರುವ ಹಲವು ರಾಜ್ಯಗಳ ಪಟ್ಟಿಗೆ ಈಗ ಉತ್ತರಪ್ರದೇಶ ಸೇರಿಕೊಂಡಿದೆ. ಇಲ್ಲಿನ ಎಲ್ಲಾ ಸರಕಾರಿ ನೌಕರರಿಗೂ ದೀಪಾವಳಿ ಉಡುಗೊರೆಯಾಗಿ ತುಟ್ಟಿಭತ್ಯೆ ಮತ್ತು ಬೋನಸ್ ಅನ್ನು ಕೊಡಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಶೇ. 4ರಷ್ಟು ಡಿಎ ಹೆಚ್ಚಿಸುವುದಾಗಿ ತಿಳಿಸಿದ್ದಾರೆ. ಹಾಗೆಯೇ, ಎಲ್ಲಾ ನೌಕರರಿಗೂ ಸಮಾನವಾಗಿ ಬೋನಸ್ ಪ್ರಕಟಿಸಿದ್ದಾರೆ.
ಉತ್ತರಪ್ರದೇಶ ರಾಜ್ಯ ಸರಕಾರಿ ನೌಕರರಿಗೆ ಈ ಮುಂಚೆ ಶೇ. 34ರಷ್ಟು ತುಟ್ಟಿಭತ್ಯೆ ಸಿಗುತ್ತಿತ್ತು. ಈಗ ಅದನ್ನು ಶೇ.38ಕ್ಕೆ ಹೆಚ್ಚಿಸಲಾಗಿದೆ. ಇನ್ನು, ಪ್ರತಿಯೊಬ್ಬರಿಗೂ ಸಮಾನವಾಗಿ 6,908 ರೂಗಳ ಬೋನಸ್ ಕೂಡ ಸಿಗುತ್ತಿದೆ. ಪಿವೊನ್ನಿಂದ ಹಿಡಿದು ಉನ್ನತ ಅಧಿಕಾರಿವರೆಗೆ ಎಲ್ಲಾ ಸ್ತರಗಳ ಸರಕಾರಿ ನೌಕರರಿಗೂ ಬೋನಸ್ ಸಮಾನವಾಗಿರಲಿದೆ. ಡಿಎ ಹೆಚ್ಚಳವು ಜುಲೈ 1ರಿಂದ ಅನ್ವಯವಾಗಲಿದೆ.
ಆರ್ಬಿಐ ದರ ಹೆಚ್ಚಿಸಿದರೂ ಈ ಬ್ಯಾಂಕ್ನಲ್ಲಿ ಸಾಲಕ್ಕೆ ಬಡ್ಡಿ ಇಳಿಕೆ
"2022 ಜುಲೈ 1ರಿಂದ ಅನ್ವಯ ಆಗುವಂತೆ ಡಿಎ ಮತ್ತು ಡಿಆರ್ ದರವನ್ನು ಶೇ. 34ರಿಂದ ಶೇ. 38ಕ್ಕೆ ಹೆಚ್ಚಿಸಲು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಿರ್ಧರಿಸಿದ್ದಾರೆ. ರಾಜ್ಯ ಸರಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರ ಹಿತಾಸಕ್ತಿ ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದು ಉ.ಪ್ರ. ಮುಖ್ಯಮಂತ್ರಿಗಳ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಕರ್ನಾಟಕದಲ್ಲೂ ಡಿಎ ಹೆಚ್ಚಳವಾಗಿತ್ತು:
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರ 10 ದಿನಗಳ ಹಿಂದೆ ಎಲ್ಲಾ ನೌಕರರಿಗೆ ಶೇ. 27.25 ಇದ್ದ ಡಿಎ ಅನ್ನು ಶೇ. 31ಕ್ಕೆ ಏರಿಕೆ ಮಾಡಿದ್ದರು.
ಹಣದುಬ್ಬರ ಹೆಚ್ಚಿದರೆ ಚಿನ್ನದ ಬೆಲೆ ಯಾಕೆ ತಗ್ಗುತ್ತದೆ?
ಬೊಮ್ಮಾಯಿ ಸರ್ಕಾರ ಒಂದೇ ವರ್ಷದಲ್ಲಿ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಿಸಿದೆ. ಏಪ್ರಿಲ್ ಮೊದಲ ವಾರದಲ್ಲಿ ಶೇ. 24.50 ಇದ್ದ ಡಿಯರ್ನೆಸ್ ಅಲೋಯನ್ಸ್ ಅನ್ನು ಶೇ. 27.25ಕ್ಕೆ ಹೆಚ್ಚಿಸಿತ್ತು. ಈಗ ಅದು ಶೇ 31ಕ್ಕೆ ಏರಿಕೆ ಮಾಡಲಾಗಿದೆ.
ಇತರ ಹಲವು ರಾಜ್ಯ ಸರಕಾರಗಳೂ ಕೂಡ ತಮ್ಮ ನೌಕರರಿಗೆ ಡಿಎ ಹೆಚ್ಚಳ ಮಾಡಿವೆ. ಕೆಲ ದಿನಗಳ ಹಿಂದೆ ಕೇಂದ್ರ ಸರಕಾರ ಕೂಡ ರೈಲ್ವೆ ಉದ್ಯೋಗಿಗಳಿಗೆ ಶೇ. 4ರಷ್ಟು ಡಿಎ ಹೆಚ್ಚಳ ಮಾಡಿದೆ.
ಆರ್ಥಿಕತೆಗೆ ಪುಷ್ಟಿ
ಹಣದುಬ್ಬರ ಪರಿಸ್ಥಿತಿಯ ನಡುವೆಯೂ ಸರಕಾರಗಳು ಡಿಎ ಹೆಚ್ಚಿಸುತ್ತಿರುವುದು ಗಮನಾರ್ಹ. ಆದರೆ, ಡಿಎ ಹೆಚ್ಚಳ, ಬೋನಸ್ ನೀಡುವಿಕೆಯಿಂದ ಸರ್ಕಾರಕ್ಕೆ ಹೊರೆಯಾಗುತ್ತದಾದರೂ ಒಟ್ಟಾರೆ ದೇಶದ ಆರ್ಥಿಕತೆಗೆ ಪುಷ್ಟಿ ಸಿಗುತ್ತದೆ. ಹೆಚ್ಚೆಚ್ಚು ವ್ಯಾಪಾರ ವಹಿವಾಟು ನಡೆಯುತ್ತದೆ. ಹಬ್ಬದ ಸೀಸನ್ ಆದ್ದರಿಂದ ಜನರು ಈ ಹಣವನ್ನು ವ್ಯಯಿಸುವುದರಿಂದ ಇದೇ ಹಣ ಮಾರುಕಟ್ಟೆಯಲ್ಲಿ ಚಲಾವಣೆಯಾಗಿ ಆರ್ಥಿಕತೆಗೆ ಹೆಚ್ಚು ಬಲ ಸಿಕ್ಕಂತಾಗುತ್ತದೆ.