ಬ್ಯಾಂಕ್ ಸಾಲಗಳಿಗೆ ಸರ್ಕಾರವೇ 'ಗ್ಯಾರಂಟಿ' ಆಗಲಿ ಎಂದ ಎಸ್ ಬಿಐ ಮುಖ್ಯಸ್ಥ
ಕೊರೊನಾ ಲಾಕ್ ಡೌನ್ ವೇಳೆ ಕೆಲವು ವಲಯಗಳಿಗೆ ಸಾಲ ನೀಡುವುದಕ್ಕೆ ಸರ್ಕಾರದಿಂದಲೇ 'ಖಾತ್ರಿ' (ಗ್ಯಾರಂಟಿ) ನೀಡುವಂತೆ ಬ್ಯಾಂಕ್ ಗಳು ಕೇಳಿವೆ. ಹಾಗಾದಲ್ಲಿ ಮಾತ್ರ ಸಾಲ ವಿತರಿಸುವಾಗ ದೊಡ್ಡ ಸಮಾಧಾನ ಇರುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ ಬಿಐ) ಮುಖ್ಯಸ್ಥ ರಜನೀಶ್ ಕುಮಾರ್ ಶನಿವಾರ ಹೇಳಿದ್ದಾರೆ.
ರಿಯಲ್ ಎಸ್ಟೇಟ್ ವಲಯದ ಪ್ರತಿನಿಧಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ಖಾತ್ರಿ ಆಧಾರಿತವಾದ ಮಾದರಿ ಈಗಿನ ಸನ್ನಿವೇಶಕ್ಕೆ ಸೂಕ್ತವಾದದ್ದು ಎಂದು ಹೇಳಿದ್ದಾರೆ. "ಅಪಾಯ ಇರುವ ಬಂಡವಾಳ ಸರ್ಕಾರದಿಂದ ಬರುತ್ತದೆ, ನಗದು ಮೊತ್ತವು ರಿಸರ್ವ್ ಬ್ಯಾಂಕ್ ನಿಂದ ಬರುತ್ತದೆ ಮತ್ತು ಮಧ್ಯಸ್ಥಿಕೆಯನ್ನು ಸಾರ್ವಜನಿಕ ವಲಯದ ಬ್ಯಾಂಕ್ ಗಳು ಮಾಡುತ್ತವೆ. ಹೀಗೆ ಮಾಡುವುದರಿಂದ ಬ್ಯಾಂಕ್ ಗಳಿಗೆ ಅಪಾಯ ಕಡಿಮೆ. ಈ ಮಾದರಿಯು ಚೆನ್ನಾಗಿ ಕೆಲಸ ಮಾಡುತ್ತದೆ" ಎಂದಿದ್ದಾರೆ.
ಖಾಸಗಿಯವರಿಗೆ ಸರ್ಕಾರವು ಗ್ಯಾರಂಟಿ ಆಗಿರುತ್ತದೋ ಅಥವಾ ಸಾರ್ವಜನಿಕ ವಲಯದಿಂದ ಸಾಲ ವಿತರಿಸುವುದಕ್ಕೆ ಗ್ಯಾರಂಟಿ ಮೇಲೆ ನಿರ್ಬಂಧ ಹಾಕುತ್ತದೋ ಅದು ಸರ್ಕಾರಕ್ಕೆ ಬಿಟ್ಟಿದ್ದು. ಹಲವಾರು ಸಲಹೆಗಳಿವೆ. ಸರ್ಕಾರದಿಂದ ಕೂಡ ಹಲವು ಗುಂಪುಗಳನ್ನು ರಚಿಸಲಾಗಿದೆ. ಅವುಗಳು ವಿವಿಧ ಮಾಹಿತಿಯನ್ನು ಕಲೆ ಹಾಕಿ, ವಿಶ್ಲೇಷಣೆ ಮಾಡಲಿ. ಆ ನಂತರ ಈ ಲಾಕ್ ಡೌನ್ ನಿಂದ ಹೊರಬರುವುದಕ್ಕೆ ಪ್ಯಾಕೇಜ್ ರೂಪಿಸಬಹುದು ಎಂದಿದ್ದಾರೆ.
ಸಾಲದ ಮೇಲಿನ ಬಡ್ಡಿ ವಿನಾಯಿತಿಗೆ ಆರ್ ಬಿಐ ಇನ್ನೂ ಒಂದೆರಡು ತಿಂಗಳು ಸಮಯ ನೀಡುವಂತೆ ಹೇಳಬಹುದು. ಈಗಿನ ಪರಿಸ್ಥಿತಿಯಲ್ಲಿ ನಾವು ಅದನ್ನು ಮಾಡುವುದು ಅಸಾಧ್ಯ ಎಂದು ಅವರು ಹೇಳಿದ್ದಾರೆ.